ಮಡಿಕೇರಿ: ಆಂಬ್ಯುಲೆನ್ಸ್(108) ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ತೋಟಕ್ಕೆ ನುಗ್ಗಿದ ಘಟನೆ ಸುಂಟಿಕೊಪ್ಪದ ಕೊಡಗರ ಹಳ್ಳಿ ಬಳಿ ನಡೆದಿದ್ದು, ಅದೃಷ್ಟ ವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆ ನಡೆದ ಸ್ಥಳದಲ್ಲಿ ಮನೆಯಿತ್ತಾದರೂ ಮನೆಗೆ ನುಗ್ಗದೆ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ತೋಟದೊಳಕ್ಕೆ ನುಗ್ಗಿದೆ. ಈ ವೇಳೆ ವಿದ್ಯುತ್ ಪ್ರವಹಿಸದ ಕಾರಣದಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎನ್ನಲಾಗಿದೆ. 108 ಆಂಬ್ಯುಲೆನ್ಸ್ ಕುಶಾಲನಗರದತ್ತ ಬರುತ್ತಿದ್ದ ವೇಳೆ ಕೊಡಗರ ಹಳ್ಳಿ ಸಮೀಪದ ಬಸವನಹಳ್ಳಿಯ ಮಾರುತಿ ನಗರ ಬಡಾವಣೆ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ನೇರವಾಗಿ ರಸ್ತೆ ಬಿಟ್ಟು ಸನಿಹದ ತೋಟಕ್ಕೆ ನುಗ್ಗಿದೆ. ಈ ವೇಳೆ ಅಲ್ಲಿಯೇ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಕ್ಕದಲ್ಲಿದ್ದ ಮನೆಯ ಕಾಂಪೌಂಡ್ ಬಳಿ ನಿಂತಿದೆ.
ಡಿಕ್ಕಿ ಹೊಡೆದ ಪರಿಣಾಮ ಆಂಬ್ಯುಲೆನ್ಸ್ ಮುಂಭಾಗ ಜಖಂಗೊಂಡಿದೆ. ಆದರೆ ಆಂಬ್ಯುಲೆನ್ಸ್ ನಲ್ಲಿ ಯಾವುದೇ ರೋಗಿ ಇರದೆ ಚಾಲಕ ಮಾತ್ರ ಇದ್ದನೆಂದು ತಿಳಿದು ಬಂದಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.