ಮೈಸೂರು ; ನೂತನ ಮೈಸೂರು-ಕುಶಾಲನಗರ ಹೆದ್ದಾರಿ ವಿಭಾಗದ (NH-275) ಯೋಜನೆ ಕುರಿತಂತೆ ಅನುಷ್ಠಾನಗೊಳಿಸುವ ಸಂಬಂಧ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊಡಗು ಮೈಸೂರು ಸಂಸದ ಪ್ರತಾಪ ಸಿಂಹ ಅವರ ಅದ್ಯಕ್ಷತೆಯಲ್ಲಿ ಶನಿವಾರ ಸಭೆಯು ನಡೆಯಿತು.
3300.45 ಕೋಟಿ ರೂಪಾಯಿಗಳ ವೆಚ್ಚದ ಈ ಯೋಜನೆಗಾಗಿ ಅರಣ್ಯ ಇಲಾಖೆ , ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ , ಸೆಸ್ಕ್ , ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳನ್ನು ಸಭೆಗೆ ಆಹ್ವಾನಿಸಿ ಯೋಜನೆಯ ಶೀಘ್ರ ಅನುಷ್ಠಾನಕ್ಕಾಗಿ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸೃತ ಚರ್ಚೆ ನಡೆಸಲಾಯಿತು.
ಈ ಉದ್ದೇಶಿತ ಯೋಜನೆಗೆ ವಿಸೃತ ಯೋಜನಾ ವರದಿ ಸಿದ್ದ ಪಡಿಸಲಾಗಿದ್ದು ಕಾಮಗಾರಿಯು ಒಟ್ಟು 30 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. ಈ ನೂತನ ಹೆದ್ದಾರಿಯು ಶ್ರೀರಂಗಪಟ್ಟಣದ ಅಗ್ರಹಾರ ಗ್ರಾಮದಿಂದ ಪ್ರಾರಂಭಗೊಂಡು ಕುಶಾಲನಗರ ಹೊರವಲಯದ ಬಸವನಳ್ಳಿ ಗ್ರಾಮದವರೆಗೆ ಬರಲಿದ್ದು ಈ ಯೋಜನೆಯ ಒಟ್ಟು ಉದ್ದ 92 ಕಿಲೋಮೀಟರ್ ಗಳಾಗಿದೆ. ಈ ಹೆದ್ದಾರಿಯಲ್ಲಿ 45 ಮೀಟರ್ ಗಳಷ್ಟು ಅಗಲದ 4 ಪಥಗಳ ರಸ್ತೆ ನಿರ್ಮಾಣಗೊಳ್ಳಲಿದೆ.
ಈ ನೂತನ ಹೆದ್ದಾರಿಗೆ ಭೂಸ್ವಾಧೀನಕ್ಕಾಗಿ ಈಗಾಗಲೇ ಸರ್ವೆ ಕಾರ್ಯ ಪೂರ್ಣಗೊಂಡಿದ್ದು ಇದರಲ್ಲಿ ಭೂಮಿ ಕಳೆದುಕೊಳ್ಳುವವರಿಗೆ ಪರಿಹಾರ ವಿತರಣೆ ಮಾತ್ರ ಬಾಕಿ ಇದೆ. ಈ ಯೋಜನೆಯ ಸಿವಿಲ್ ಕಾಮಗಾರಿ ವೆಚ್ಚ ಸುಮಾರು 2300.45 ಕೋಟಿ ರೂಪಾಯಿಗಳಾಗಿದ್ದು ಭೂಸ್ವಾದೀನಕ್ಕೆ 1000 ಕೋಟಿ ರೂಪಾಯಿ ಬೇಕಾಗಬಹುದೆಂದು ಅಂದಾಜಿಸಲಾಗಿದೆ.
ಈ ಹೆದ್ದಾರಿಯಲ್ಲಿ ಕುಶಾಲನಗರ , ಪಿರಿಯಾಪಟ್ಟಣ, ಹುಣಸೂರು ಮತ್ತು ಶ್ರೀರಂಗಪಟ್ಟಣದಲ್ಲಿ ಟೋಲ್ ಬರಲಿದೆ. ಈ ಹೆದ್ದಾರಿಯು ಮೈಸೂರಿಗೆ ಸಂಪರ್ಕ ಹೊಂದುವುದಿಲ್ಲ. ಇದು ಬಸವನಳ್ಳಿಯಿಂದ ನೇರವಾಗಿ ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇ ಗೆ ಸಂಪರ್ಕ ಕಲ್ಪಿಸಲಿದೆ.
ಒಟ್ಟು ಮೂರು ಪ್ಯಾಕೇಜ್ ಗಳಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು ಒಟ್ಟು ನಾಲ್ಕು ದೊಡ್ಡ ಸೇತುವೆಗಳು ಒಂದು ಚಿಕ್ಕ ಸೇತುವೆ ನಿರ್ಮಾಣಗೊಳ್ಳಲಿದೆ. ಈ ಹೆದ್ದಾರಿಯಲ್ಲಿ ಕೊಪ್ಪ ಬಳಿ ರೆಸ್ಟ್ ಏರಿಯಾ ಕೂಡ ನಿರ್ಮಾಣವಾಗಲಿದ್ದು ಒಟ್ಟು 13.16
ಕಿಲೋಮೀಟರ್ ಉದ್ದದ ಸರ್ವೀಸ್ ರಸ್ತೆ ಮತ್ತು 21.65 ಕಿಲೋಮೀಟರ್ ಉದ್ದದ ಸ್ಲಿಪ್ ರಸ್ತೆ ನಿರ್ಮಾಣಗೊಳ್ಳಲಿದೆ.
ಈ ಹೆದ್ದಾರಿಗೆ ಕುಶಾಲನಗರದಲ್ಲಿ 12.32 ಕಿಲೋಮೀಟರ್ ಉದ್ದದ ಬೈಪಾಸ್ , ಪಿರಿಯಾಪಟ್ಟಣದಲ್ಲಿ 19.92 ಕಿಲೋಮೀಟರ್ ಬೈಪಾಸ್ , ಹುಣಸೂರು , ಬಿಳಿಕೆರೆಯಲ್ಲಿ ಬೈಪಾಸ್ ಮತ್ತು ಇಲವಾಲ ಬಳಿ 4.59 ಕಿಲೋಮೀಟರ್ ಉದ್ದದ ಬೈಪಾಸ್
ನಿರ್ಮಾಣಗೊಳ್ಳಲಿದೆ.
ಈ ಹೆದ್ದಾರಿಯಲ್ಲಿ ಒಂದು ಫ್ಲೈ ಓವರ್ ಕೂಡ ನಿರ್ಮಾಣಗೊಳ್ಳಲಿದೆ. ಈಗಾಗಲೇ 8506 ಕೋಟಿ ರೂಪಾಯಿಗಳ ವೆಚ್ಚದ ಬೆಂಗಳೂರು -ಮೈಸೂರು ಎಕ್ಸ್ಪ್ರೆಸ್ ವೇ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ಮುಂದಿನ ದಸರಾ ವೇಳೆಗೆ
ಪೂರ್ಣಗೊಳ್ಳಲಿದೆ.
ಅದು ಮುಗಿದ ಕೂಡಲೇ ಈ ಯೋಜನೆ ಅನುಷ್ಠಾನ ಚುರುಕಾಗಲಿದೆ ಎಂದು ಅಧಿಕಾರಿಗಳು ಹೇಳಿದರು. ಈಗ ಮಡಿಕೇರಿ -ಬೆಂಗಳೂರು ನಡುವಿನ ಪ್ರಯಾಣದ ಅವಧಿ 7 ಘಂಟೆಗಳಾಗಿದ್ದು ಈ ನೂತನ ಹೆದ್ದಾರಿ ಪೂರ್ಣಗೊಂಡ ಬಳಿಕ ಪ್ರಯಾಣದ ಅವಧಿ ಕೇವಲ 4 ಘಂಟೆಗಳಿಗೆ ಇಳಿಕೆ ಆಗಲಿದೆ.
ಈ ಹೆದ್ದಾರಿ ಯಿಂದಾಗಿ ಬೆಂಗಳೂರು- ಮಂಗಳೂರು ನಡುವಿನ ಸಂಪರ್ಕ ಮತ್ತಷ್ಟು ಹೆಚ್ಚಾಗಲಿದ್ದು ವಾಣಿಜ್ಯ ವಹಿವಾಟು , ಬಂದರು ಮೂಲಕ ಆಮದು ರಫ್ತು ವಹಿವಾಟೂ ಹೆಚ್ಚಳಗೊಳ್ಳಲಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗೂ ಹೆಚ್ಚಿನ
ಅನುಕೂಲ ಆಗುವುದರ ಜತೆಗೇ ವಾಣಿಜ್ಯ ಚಟುವಟಿಕೆಯೂ ಹೆಚ್ಚಾಗಲಿದೆ.
ವಹಿವಾಟಿನ ಹೆಚ್ಚಳದಿಂದ ಉದ್ಯೋಗಾವಕಾಶವೂ ಹೆಚ್ಚಾಗಲಿದೆ. ಇಂದಿನ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ ಗೌತಮ್ ಬಗಾದಿ , ಶಾಸಕ ಜಿ ಟಿ ದೇವೇ ಗೌಡ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.