ಕೊಡಗು: ಪೆಟ್ರೋಲ್ -ಡೀಸೆಲ್ ಜೊತೆಗೆ ಅಡುಗೆ ಎಣ್ಣೆಯ ದರವನ್ನೂ ಇಳಿಸಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ಕ್ರಮವನ್ನು ಸ್ವಾಗತಿಸಿರುವ ಕೊಡಗು ಜಿಲ್ಲಾ ಬಿಜೆಪಿ,ಪೆಟ್ರೋಲ್ ಮತ್ತು ಡೀಸೆಲ್ ದರದ ವಿಚಾರದಲ್ಲಿ ಕ್ಷುಲ್ಲಕ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲೂ ತಕ್ಷಣದಿಂದ ಬೆಲೆ ಇಳಿಸುವಂತೆ ಸವಾಲು ಹಾಕಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಅವರು, ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದಾಗಿ ದೇಶದ ಜನತೆ ಯಾವುದೇ ಪ್ರಮುಖ ಹಬ್ಬಗಳನ್ನು ಸಂತೋಷದಿಂದ ಆಚರಿಸಲಾಗದೆ ಕೇವಲ ಹೆಸರಿಗೆ ಮಾತ್ರ ಹಬ್ಬವನ್ನು ತಮ್ಮ ತಮ್ಮ ಮನೆಯೊಳಗೆ ಆಚರಿಸಿಕೊಳ್ಳುವ ಪರಿಸ್ಥಿತಿ ಇತ್ತು.
ಆದರೆ ಈ ಬಾರಿ ಕೊರೋನಾದ ಆರ್ಭಟ ಕಡಿಮೆಯಾಗಿ ಜನತೆ ಸಂತೋಷದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿ ಒಟ್ಟಾರೆ ಕೇಂದ್ರದ ನರೇಂದ್ರ ಮೋದಿ ಮತ್ತು ರಾಜ್ಯದ ಬೊಮ್ಮಾಯಿ ನೇತೃತ್ವದ ಸರ್ಕಾರ ಪೆಟ್ರೋಲ್ ಬೆಲೆಯನ್ನು ರೂ.12 ಮತ್ತು ಡೀಸೆಲ್ ಬೆಲೆ ಯನ್ನು ರೂ.17ರಷ್ಟು ಕಡಿಮೆ ಮಾಡಿ ದೇಶದ ಜನತೆಗೆ ಹಬ್ಬದ ಕೊಡುಗೆ ನೀಡಿದೆ. ಕೊಡಗು ಜಿಲ್ಲಾ ಬಿಜೆಪಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಈ ಕ್ರಮವನ್ನು ಸ್ವಾಗತಿಸುವುದರೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ ನ ಅಬ್ಬರದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರ ಆರೋಗ್ಯ, ಆಹಾರ ಭದ್ರತೆ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಣೆ ತರಲು ಇನ್ನಿಲ್ಲದ ಪ್ರಯತ್ನ ಮಾಡಿದೆ.ಈ ದೇಶದ ಅನ್ನದಾತರಿಗೆ ನೆರವಾಗುವಂತಹ ಆರ್ಥಿಕ ಸಹಾಯಧನ, ಮಹಿಳೆಯರಿಗೆ ಉಚಿತ ಅನಿಲ ಸವಲತ್ತು ಮತ್ತು ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ವಿಶೇಷ ಕಾಳಜಿವಹಿಸಿ ಸಹಾಯ, ಇದೆಲ್ಲದರ ನಡುವೆ ಸುಮಾರು 100ಕೋಟಿಗಿಂತ ಅಧಿಕ ಜನತೆಗೆ ಉಚಿತ ಕೋವಿಡ್ ಲಸಿಕೆ ನೀಡಿ ಇತರ ಮುಂದುವರಿದ ದೇಶಗಳಿಗೂ ಮಾದರಿ ಯಾಗಿರುವ ಭಾರತ ಇಡೀ ಪ್ರಪಂಚ ನಿಬ್ಬೆರಗಾಗುವಂತೆ ಮಾಡಿದೆ.
ಅಲ್ಲದೆ ಕೇವಲ ಪೆಟ್ರೋಲ್ ಮತ್ತು ಡೀಸೆಲ್ ದರದ ವಿಚಾರದಲ್ಲಿ ಕ್ಷುಲ್ಲಕ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳಿಗೆ ಸರಿಯಾದ ಉತ್ತರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿವೆ. ಇದೆಲ್ಲದರ ಜೊತೆ ಅಡುಗೆ ಎಣ್ಣೆಯ ದರವನ್ನೂ ಸರ್ಕಾರ ಇಳಿಸುತ್ತಿರುವುದು ಕೂಡಾ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ‘ಅಚ್ಛೇ ದಿನ್’ ಎಂಬ ಮಾತಿಗೆ ಪುಷ್ಟಿ ನೀಡುತ್ತಿದೆ ಎಂದು ಮಹೇಶ್ ಜೈನಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಮತ್ತು ಕರ್ನಾಟಕದ ಬಿಜೆಪಿ ಸರ್ಕಾರದೊಡನೆ ದೇಶದ ಅನೇಕ ಕಡೆ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವ ದ ರಾಜ್ಯ ಸರ್ಕಾರಗಳು ಕೂಡಾ ತೈಲ ಬೆಲೆಯನ್ನು ಇಳಿಸಿದ್ದು ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜಸ್ಥಾನ, ಪಂಜಾಬ್, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳದಂತಹ ರಾಜ್ಯಗಳಲ್ಲಿ ತಕ್ಷಣದಿಂದಲೇ ತೈಲ ಮತ್ತು ಅಡುಗೆ ಎಣ್ಣೆ ಬೆಲೆ ಇಳಿಸುವಂತೆ ಜೈನಿ ಅವರು ಸವಾಲು ಹಾಕಿದ್ದಾರೆ.