ಮಡಿಕೇರಿ ಜುಲೈ 3 ; ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಜೋಡುಬೀಟಿ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಗಳಿಗೆ ನುಗ್ಗಿ ಧ್ವಂಸ ಮಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೆಲ ದಿನಗಳಿಂದ ಕಾಡಾನೆ ಕಾಟ ಕಡಿಮೆ ಆಗಿದ್ದು ಶನಿವಾರ ಬೆಳಿಗ್ಗೆ ಮತ್ತೆ ಜೋಡುಬೀಟಿ ಅಯ್ಯಪ್ಪ ದೇವಸ್ಥಾನ ದ ಸಮೀಪ 28 ಕಾಡಾನೆಗಳ ಹಿಂಡು ಲಗ್ಗೆ ಹಾಕಿದೆ. ಈ ವಿಡಿಯೋದಲ್ಲಿರುವ ದೃಶ್ಯ ಇಲ್ಲಿನ ಚೇಂದಿಮಾಡ ಮಂಜು ಅವರ ತೋಟದಲ್ಲಿ ಸೆರೆ ಹಿಡಿದ್ದದಾಗಿದ್ದು ಕಾಡಾನೆಗಳು ನಿರ್ಭೀತಿಯಿಂದ ಸಂಚರಿಸಿ ನಂತರ ಪಕ್ಕದ ತೋಟಕ್ಕೆ ಹೋಗಿವೆ.
ಅರಣ್ಯ ಇಲಾಖೆ ಕಾಡಿನಲ್ಲಿ ತೇಗ ನೀಲಗಿರಿ ಬೆಳೆಸಿದ ಪರಿಣಾಮ ಆನೆಗಳು ಹಲಸಿನ ಹಣ್ಣು ಅರಸಿ ತೋಟಗಳಿಗೆ ಲಗ್ಗೆ ಇಡುತ್ತಿದೆ. ಅರಣ್ಯ ಇಲಾಖೆ ಪ್ರತಿವರ್ಷ ಹಲಸು, ಮಾವು ಸೇರಿದಂತೆ ಇತರ ಹಣ್ಣಿನ ಗಿಡಗಳನ್ನು ರೈತರಿಗೆ ಉಚಿತವಾಗಿ ಹಾಗೂ ರಿಯಾಯಿತಿ ದರದಲ್ಲಿ ನೀಡಿ ರೈತರ ತೋಟಕ್ಕೆ ಆನೆ ಬಾವಲಿ ಸೇರಿದಂತೆ ಇನ್ನಿತರ ಕಾಡುಪ್ರಾಣಿಗಳು ಲಗ್ಗೆ ಇಡುವಂತೆ ಮಾಡುವ ಬದಲು, ಇದೇ ಹಲಸು ಮಾವು ಸೇರಿದಂತೆ ಇನ್ನಿತರ ಗಿಡಗಳನ್ನು ಕಾಡಿನಲ್ಲಿಯೇ ಬೆಳೆಸಬಹುದಲ್ಲವೇ ಎಂದು ಗ್ರಾಮಸ್ಥರು ಪ್ರಶ್ನಿಸುತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅದ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರು ಕಾಡಿನಲ್ಲಿ ಆಹಾರ ಇಲ್ಲ ಎಂಬ ಒಂದೇ ಕಾರಣಕ್ಕೆ ಕಾಡಾನೆಗಳು ಊರಿನೊಳಗೆ ಲಗ್ಗೆ ಇಡುತಿದ್ದು ಅರಣ್ಯ ಇಲಾಖೆಯು ಇನ್ನಾದರೂ ಕಾಡಿನಲ್ಲಿ ಆನೆಗಳಿಗೆ ಮೇವು ಸಿಗುವ ಆಹಾರ ಗಿಡಗಳನ್ನು ಬೆಳೆಸಬೇಕಿದೆ. ಇಲ್ಲದಿದ್ದರೆ ಜನರು ಕೃಷಿ ಮಾಡುವುದರಿಂದಲೇ ಹಿಂದೆ ಸರಿಯಬೇಕಾಗುತ್ತದೆ ಎಂದರು. ಒಂದೆಡೆ ಕಾಡಿನಲ್ಲಿ ಆನೆಗಳ ಸಂತತಿ ವೃದ್ದಿಯಾಗುತಿದ್ದು ಮತ್ತೊಂದೆಡೆ ಮೇವಿನ ಕೊರತೆ ಹೆಚ್ಚಾಗಿರುವುದೇ ಊರಿನಲ್ಲಿ ಕಾಡಾನೆ ಹಾವಳಿ ಮಿತಿ ಮೀರಲು ಕಾರಣ ಎಂದ ಅವರು ಅರಣ್ಯ ಇಲಾಖೆಯ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಇಲ್ಲದಿದ್ದರೆ ಗ್ರಾಮಸ್ಥರು ತಮ್ಮ ಉಳಿವಿಗಾಗಿ ಪ್ರತಿಭಟನೆಯ ಹಾದಿ ಹಿಡಿಯುವುದು ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.
ಪ್ರತಿ ನಿತ್ಯವೂ ಒಂದಿಲ್ಲೊಂದು ಗ್ರಾಮಕ್ಕೆ ಭೇಟಿ ನೀಡುವ ಕಾಡಾನೆಗಳು ಒಂದೇ ರಾತ್ರಿಯಲ್ಲಿ ಬಾಳೆ , ತೆಂಗು, ಭತ್ತದ ಗದ್ದೆಗಳನ್ನು ಲೂಟಿ ಮಾಡಿ ಲಕ್ಷಾಂತರ ರೂಪಾಯಿ ನಷ್ಟ ಉಂಟು ಮಾಡುತ್ತಿವೆ. ಕಾಡಾನೆ ಹಾವಳಿ ತಡೆಗೆ ಅರಣ್ಯ ಇಲಾಖೆಯು ರ್ಯಾಪಿಡ್ ರೆಸ್ಪಾನ್ಸ್ ಟೀಮ್ (RRT) ನ್ನು ರಚಿಸಿದ್ದರೂ ಕೂಡ ಹೆಚ್ಚಿನ ಪ್ರಯೋಜನ ಆಗುತ್ತಿಲ್ಲ. ಏಕೆಂದರೆ ಆನೆಗಳು ಬರುವುದಕ್ಕೆ ನಿರ್ದಿಷ್ಟ ದಾರಿ ಅಂತ ಇರುವುದಿಲ್ಲ, RRT ಇಲ್ಲದ ಕಡೆಗಳಲ್ಲಿ ಸಲೀಸಾಗಿ ಆನೆಗಳು ಊರಿನೊಳಗೆ ನುಗ್ಗುತ್ತಿವೆ. ಇಲಾಖೆಯು ಅರಣ್ಯದ ಸುತ್ತಲೂ ಕಂದಕ , ಸೋಲಾರ್ ಬೇಲಿ ಹಾಕಿದ್ದರೂ ಅದನ್ನೂ ದಾಟಿ ಬರುತ್ತಿವೆ.
ಪೊನ್ನಂಪೇಟೆ ಬಳಿ ಕಾಡಾನೆಗಳ ದಾಂಧಲೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.