ಮಡಿಕೇರಿ: ನಕಲಿ ಚಿನ್ನ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ.
ನಾಪೋಕ್ಲುವಿನ ನಂದಿ ಚಿನ್ನದಂಗಡಿಗೆ ಬಂದ ಮೂವರು ವ್ಯಕ್ತಿಗಳು ನಕಲಿ ಚಿನ್ನವನ್ನು ಗಿರವಿ ಇಟ್ಟು ಮುಂಗಡವಾಗಿ 20 ಸಾವಿರ ಹಣವನ್ನು ಪಡೆದುಕೊಂಡರೆನ್ನಲಾಗಿದ್ದು, ಅನುಮಾನಗೊಂಡ ಅಂಗಡಿ ಮಾಲಕ ಪರೀಕ್ಷಿಸಿದಾಗ 22 ಕ್ಯಾರೆಟ್ ಚಿನ್ನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತಾಮ್ರವನ್ನು ಸೇರಿಸಿರುವುದು ಕಂಡು ಬಂದಿದೆ.
ಈ ವೇಳೆಗೆ ಮೂವರು ಆರೋಪಿಗಳು ಅಂಗಡಿಯಿಂದ ಪರಾರಿಯಾಗಿದ್ದು, ಅಂಗಡಿ ಮಾಲಕರು ನಾಪೋಕ್ಲು ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.
ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರ ನೇತೃತ್ವದಲ್ಲಿ ನಾಪೋಕ್ಲು ಠಾಣಾ ಪಿಎಸ್ಐ ಆರ್.ಕಿರಣ್ ಹಾಗೂ ಎಎಸ್ಐ ಕುಶಾಲಪ್ಪ ಮತ್ತು ಸಿಬ್ಬಂದಿಗಳಾದ ಬಿ.ಕೆ ಮೋಹನ್, ಎಸ್.ಕೆ.ಗಣೇಶ್, ರವಿ, ಸಾಜನ್, ರಾಮಕೃಷ್ಣ, ನವೀನ್, ಹರ್ಷ, ಆಶಿಕ್, ಗಿರೀಶ್ ಮತ್ತು ಚಾಲಕ ಶರೀಫ್ ಅವರನ್ನೊಳಗೊಂಡ ತಂಡ ಓರ್ವ ಸ್ಥಳೀಯ ಮತ್ತು ಇಬ್ಬರು ಪರ ಊರಿನ ಆರೋಪಿಗಳನ್ನು ಬಂಧಿಸಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಹೊಂಡಾ ಅಮೇಜ್ ಕಾರು ಮತ್ತು ಅಂದಾಜು 1.20ಲಕ್ಷ ರೂ.ಬೆಲೆಬಾಳುವ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾರ್ವಜನಿಕರು ಅಪರಿಚಿತ ವ್ಯಕ್ತಿಗಳಿಂದ ಚಿನ್ನಾಭರಣವನ್ನು ಖರೀದಿಸಬಾರದು ಮತ್ತು ನಕಲಿ ಚಿನ್ನವನ್ನು ಮಾರಾಟ ಮಾಡುವ ವಂಚಕರ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಎಚ್ಚರಿಕೆ ನೀಡಿದ್ದಾರೆ