ಮಡಿಕೇರಿ : ಸೋಮವಾರಪೇಟೆ ತಾಲ್ಲೂಕು, ಗುಡ್ಡೆಹೊಸೂರು ಗ್ರಾಮ ಪಂಚಾಯ್ತಿಯ ಬಸವನಹಳ್ಳಿ ಮತ್ತು ಕೂಡಿಗೆ ಗ್ರಾಮ ಪಂಚಾಯ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿ ಮೂಲಭೂತ ಸೌಲಭ್ಯವನ್ನು ಒದಗಿಸಲಾಗಿದೆ.
ಈ ಪುನರ್ವಸತಿ ಕೇಂದ್ರಗಳ ಪೈಕಿ ಬಸವನಹಳ್ಳಿಯಲ್ಲಿ ರಾಜೀವ್ಗಾಂಧಿ ವಸತಿ ನಿಗಮದಿಂದ ಅನುಮೋದಿತವಾದ ನಿವೇಶನಗಳಲ್ಲಿ 174 ಮನೆಗಳನ್ನು ಹಾಗೂ ಬ್ಯಾಡಗೊಟ್ಟದಲ್ಲಿ 354 ಮನೆಗಳನ್ನು ನಿರ್ಮಿಸಲಾಗಿದೆ.
ಈ ಪುನರ್ವಸತಿ ಕೇಂದ್ರಗಳ ಮನೆ ಮನೆ ಸಮೀಕ್ಷೆ ನಡೆಸಲಾಗಿದ್ದು, ಕೆಲವು ಮನೆಗಳಲ್ಲಿ ಫಲಾನುಭವಿಗಳು ವಾಸವಾಗದೇ ಬೀಗ ಹಾಕಿರುವುದು ಹಾಗೂ ಕೆಲವು ಮನೆಗಳಲ್ಲಿ ಅಧಿಕೃತ ಫಲಾನುಭವಿಗಳ ಬದಲಾಗಿ ಬೇರೆಯವರು ವಾಸವಾಗಿರುವುದು ಕಂಡು ಬಂದಿದೆ.
ಆದ್ದರಿಂದ ವಾಸವಿಲ್ಲದೆ ಬೀಗ ಹಾಕಿರುವ ಮನೆಗಳ ಫಲಾನುಭವಿಗಳಿಗೆ ಹಾಗೂ ಅನಧಿಕೃತವಾಗಿ ವಾಸವಿರುವ ಮನೆಗಳ ಫಲಾನುಭವಿಗಳಿಗೆ ಈಗಾಗಲೇ ನೋಟೀಸು ನೀಡಲಾಗಿದೆ. ಈ ಪುನರ್ವಸತಿ ಕೇಂದ್ರದ ಫಲಾನುಭವಿಗಳು ರಾಜೀವ್ಗಾಂಧಿ ವಸತಿ ನಿಗಮದಿಂದ ಅನುಮೋದಿತ ಫಲಾನುಭವಿಗಳು ಮಾತ್ರ ಸರ್ಕಾರದಿಂದ ಮಂಜೂರಾದ ಮನೆಗಳಲ್ಲಿ ವಾಸವಾಗಿರಲು ಹಾಗೂ ಬೀಗ ಹಾಕಿ ಇನ್ನೂ ವಾಸಕ್ಕೆ ಬಾರದಿರುವ ಮನೆಗಳ ಫಲಾನುಭವಿಗಳು ತಕ್ಷಣ ಮನೆಗಳ ಕೀಗಳನ್ನು ಪಡೆದು ವಾಸವಾಗಿರಲು ಸೂಚಿಸಿದೆ. ಒಂದು ವೇಳೆ ಅನಧಿಕೃತ ವ್ಯಕ್ತಿಗಳು ವಾಸವಾಗಿದ್ದಲ್ಲಿ ನಿಯಮಾನುಸಾರ ಕಾನೂನು ಕ್ರಮಕೈಗೊಳ್ಳಲಾಗುವುದು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು(ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ-08276-281115 ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಬಾಲಕೃಷ್ಣ ರೈ ಅವರು ಎಚ್ಚರಿಸಿದ್ದಾರೆ.