ಗೋಣಿಕೊಪ್ಪ: ಗೋಣಿಕೊಪ್ಪ ದಸರಾ ಆಚರಣೆ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಕೋವಿಡ್ ನಿಯಂತ್ರಿಸುವ ಸಲುವಾಗಿ ದೇವಿ ಪ್ರತಿಷ್ಠಾಪನೆ ಮತ್ತು ನವರಾತ್ರಿಯಂದು ದೇವಿ ವಿಸರ್ಜನೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ದಶಮಂಟಪ ಸಮಿತಿಗೆ ತಲಾ ಒಂದೊಂದು ಟ್ರ್ಯಾಕ್ಟರ್ ನಲ್ಲಿ ತೇರಿನ ಮೆರವಣಿಗೆ ನಡೆಸಲು ಅವಕಾಶ ನೀಡಬೇಕೆಂಬ ಒತ್ತಾಯ ಕೇಳಿ ಬಂದಿತಾದರೂ, ಕೊರೋನಾ ನಿಯಂತ್ರಿಸುವ ಉದ್ದೇಶದಿಂದ, ಕಾವೇರಿ ದಸರಾ ಸಮಿತಿಯಿಂದ ಮಾತ್ರ ನವರಾತ್ರಿ ದಿನದಂದು ಒಂದು ವಾಹನದಲ್ಲಿ ಮೆರವಣಿಗೆ ಮೂಲಕ ತೆರಳಿ ರಾತ್ರಿ 10.30ಕ್ಕೆ ಮೂರ್ತಿ ವಿಸರ್ಜನೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಯಿತು. ಇದಕ್ಕಾಗಿ ಎಲ್ಲಾ ದಸರಾ ಸಮಿತಿಗಳಿಗೆ ಶಾಸಕರು ಅಭಿನಂದನೆ ಸಲ್ಲಿಸಿದರು.
ಗೋಣಿಕೊಪ್ಪ ದಸರಾ ಆಚರಣೆಗೆ ಸರ್ಕಾರ ಐದು ಲಕ್ಷ ಅನುದಾನ ನೀಡುವ ಸಾಧ್ಯತೆ ಇದ್ದು, ಎಲ್ಲಾ ಸಮಿತಿಗಳಿಗೆ ತಲಾ25 ಸಾವಿರ ನೀಡುವಂತೆ ಹಾಗೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಲಾಯಿತು.
ಏಕಮುಖ ಸಂಚಾರದ ಬಗ್ಗೆ ಚರ್ಚೆ: ಗೋಣಿಕೊಪ್ಪ ಮುಖ್ಯ ರಸ್ತೆಯನ್ನು ಏಕಮುಖ ಸಂಚಾರದಿಂದ ಮುಕ್ತಗೊಳಿಸಬೇಕು ಎಂದು ಗೋಣಿಕೊಪ್ಪ ವಾಣಿಜ್ಯ ಸಂಘ ನೀಡಿದ ಮನವಿ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ಜಿ ಬೋಪಯ್ಯ, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆಗಳೊಂದಿಗೆ ಇದರ ಸಾಧಕ-ಭಾದಕಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಚೈತ್ರಾ, ತಾಲೂಕು ದಂಡಾಧಿಕಾರಿ ಯೋಗಾನಂದ, ತಾಲೂಕು ಪಂವಾಯತ್ ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಗಿರೀಶ್ ಗಣಪತಿ, ಗ್ರಾಪಂ ಸದಸ್ಯರುಗಳು, ದಸರಾ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕರು ಚರ್ಚೆಯಲ್ಲಿ ಭಾಗವಹಿಸಿದ್ದರು.