ಮಡಿಕೇರಿ: ವಿಧಾನಪರಿಷತ್ ಚುನಾವಣೆಯಲ್ಲಿ ಮತ ಎಣಿಕೆಯ ಆರಂಭದಲ್ಲಿಯೇ ಕೊಡಗಿನಲ್ಲಿ ಬಿಜೆಪಿಯ ಅಭ್ಯರ್ಥಿ ಸುಜಾ ಕುಶಾಲಪ್ಪ ಅವರು ಪ್ರತಿ ಸ್ಪರ್ಧಿ ಮಂಥರಗೌಡ ಅವರನ್ನು 102 ಮತಗಳ ಅಂತರದಲ್ಲಿ ಗೆಲುವು ಪಡೆಯುವ ಮೂಲಕ ಬಿಜೆಪಿಯ ಖಾತೆಯನ್ನು ತೆರೆದಿದ್ದಾರೆ.
ರಾಜ್ಯದಾದ್ಯಂದ ಮತ ಎಣಿಕೆಗಳು ಆರಂಭವಾಗುತ್ತಿದ್ದಂತೆಯೇ ಇತ್ತ ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ಮತ ಎಣಿಕೆ ನಡೆದಿದ್ದು, ಆರಂಭದಿಂದಲೇ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಸುಜಾಕುಶಾಲಪ್ಪ ಗೆಲುವಿನ ರೂವಾರಿಯಾಗಿಯೇ ಮುನ್ನಡೆಯುತ್ತಾ ಬಂದರಲ್ಲದೆ, ಮತ ಎಣಿಕೆ ಮುಗಿಯುವ ವೇಳೆಗೆ ವಿಜಯದ ಮಾಲೆ ಧರಿಸುವಲ್ಲಿ ಸಫಲರಾದರು
ಜಿಲ್ಲೆಯಲ್ಲಿ ಒಟ್ಟು 1325 ಮತಗಳು ಚಲಾವಣೆಯಾಗಿದ್ದು, ಈ ಪೈಕಿ ಬಿಜೆಪಿ ಅಭ್ಯರ್ಥಿ– 705 ಮತ ಪಡೆದು ಗೆಲುವಿನ ರೂವಾರಿಯಾದರೆ ಕಾಂಗ್ರೆಸ್ ಅಭ್ಯರ್ಥಿ– 603ಮತಗಳೊಂದಿಗೆ ಸೋಲು ಕಾಣುವಂತಾಯಿತು. ಚಲಾವಣೆಯಾದ ಮತಗಳ ಪೈಕಿ 17 ಮತಗಳು ತಿರಸ್ಕೃತಗೊಂಡಿದೆಯಾದರೂ ಕೊನೆಯಲ್ಲಿ ಬಿಜೆಪಿ 102 ಮತಗಳ ಅಂತರದಲ್ಲಿ ಗೆಲುವು ಪಡೆದುಕೊಂಡಿದೆ.
ಹಾಗೆನೋಡಿದರೆ ಬಿಜೆಪಿ ಅಭ್ಯರ್ಥಿ ಸುಜಾಕುಶಾಲಪ್ಪ ಅವರು ಸುಮಾರು 800 ಮತಗಳನ್ನು ಪಡೆಯುವ ನಿರೀಕ್ಷೆ ಮಾಡಿದ್ದರು. ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಅಭ್ಯರ್ಥಿ ಮಂಥರಗೌಡ ಅವರು ಸ್ಥಳೀಯರಲ್ಲ. ಅವರು ಹಾಸನ ಜಿಲ್ಲೆಯವರಾಗಿದ್ದು, ಅವರು ಕೊಡಗಿನಿಂದ ಸ್ಪರ್ಧಿಸುತ್ತಾರೆ ಎಂಬ ಚಿಕ್ಕ ಸೂಚನೆಯೂ ಇರಲಿಲ್ಲ. ಆದರೆ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಜಿಲ್ಲೆಯಲ್ಲಿ ಸುತ್ತಾಡಿ ಸುಮಾರು 603 ಮತಗಳನ್ನು ಪಡೆದಿರುವುದು ನಿಜವಾಗಿಯೂ ಒಂದು ದೊಡ್ಡ ಸಾಧನೆಯೇ.
ಕೊಡಗು ಬಿಜೆಪಿಯ ಭದ್ರಕೋಟೆಯಾಗಿದ್ದು, ಗ್ರಾಮಪಂಚಾಯಿತಿಯಿಂದ ಆರಂಭವಾಗಿ ಸಂಸದರ ತನಕವೂ ಬಿಜೆಪಿ ಹಿಡಿತದಲ್ಲಿದೆ. ಹೀಗಿರುವಾಗ ಬಿಜೆಪಿ ಗೆಲುವು ನಿಶ್ಚಿತವಾಗಿತ್ತು. ಆದರೂ ಕಾಂಗ್ರೆಸ್ ಅಭ್ಯರ್ಥಿ ಸೋಲು ಕಂಡರೂ ತೀವ್ರ ಪೈಪೋಟಿ ನೀಡಿರುವುದು ಕಾಂಗ್ರೆಸ್ ನಲ್ಲಿ ಒಂದಷ್ಟು ಸಮಧಾನ ತಂದಿರುವುದಂತು ಸತ್ಯ.