ಮಡಿಕೇರಿ: ಕೋವಿಡ್ ನೆಗೆಟಿವ್, ಡೆಂಗೆ ನೆಗೆಟಿವ್, ಚಿಕೂನ್ ಗುನ್ಯಾ ನೆಗೆಟಿವ್…ಆದರೆ ಈ ಕಾಯಿಲೆಗಳ ಸಾಮಾನ್ಯ ಲಕ್ಷಣಗಳು ಇರುವ ಹೊಸದೊಂದು ರೋಗ ಜಿಲ್ಲೆಯ ಹಲವೆಡೆ ಮಕ್ಕಳ ಜೀವ ಹಿಂಡುತ್ತಿದೆ. ಕುಶಾಲನಗರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಬಗೆಯ ಲಕ್ಷಣಗಳಿರುವ ರೋಗಿಗಳು ಕಂಡು ಬರುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಈಚೆಗೆ ಇಲ್ಲಿನ ಸುಮಾರು 30 ಮಂದಿ ಮಕ್ಕಳು ಮೈಸೂರಿನ ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವ ಮಾಹಿತಿ ಇದೆ. ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಇತರ ಕಡೆಗಳಿಗೂ ಹೋಗಿರುವ ಸಾಧ್ಯತೆಯಿದೆ.
ವಿಪರೀತ ಜ್ವರ, ಮೈಯೆಲ್ಲ ಕಜ್ಜಿ, ತುರಿಕೆ, ಆಗಾಗ್ಗೆ ವಾಂತಿ…ಇಂತಹ ಲಕ್ಷಣಗಳಿರುವ ಕಾಯಿಲೆಯೊಂದು ಕೊಡಗಿನ ಹಲವೆಡೆ ಕಾಣಿಸಿಕೊಂಡಿದೆ. ಅದರಲ್ಲೂ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಈ ರೋಗಕ್ಕೆ ತುತ್ತಾಗುತ್ತಿದ್ದಾರೆ. ಆದರೆ ಇದು ಇನ್ನು ಕೂಡ ಆರೋಗ್ಯ ಇಲಾಖೆ ಗಮನಕ್ಕೆ ಬಾರದಿರುವುದು ಆಶ್ಚರ್ಯವಾಗಿದೆ.
ಈ ಕಾಯಿಲೆಯೂ ಸೊಳ್ಳೆಗಳಿಂದ ಹರಡುತ್ತಿದೆ ಎನ್ನುವ ಮಾಹಿತಿಯನ್ನು ವೈದ್ಯರು ಕೊಡುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಸೊಳ್ಳೆಗಳು ಹೆಚ್ಚು ಇರುವ ಪ್ರದೇಶಗಳಿಂದಲೇ ಜಾಸ್ತಿ ಪ್ರಕರಣಗಳು ವರದಿಯಾಗುತ್ತಿದೆ. ಒಂದು ವಾರಕ್ಕೂ ಹೆಚ್ಚು ಕಾಲ ಜ್ವರ, ಕಜ್ಜಿ, ತುರಿಕೆಯಿಂದ ಕಾಡುವ ಈ ರೋಗ ಸ್ವಲ್ಪ ಹೆಚ್ಚಾದಾಗ ವಾಂತಿಯೂ ಶುರುವಾಗುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಪ್ರಾಣಾಪಾಯವೂ ಸಂಭವಿಸಬಹುದು ಎನ್ನುತ್ತಾರೆ ವೈದ್ಯರು.
ರೋಗ ಲಕ್ಷಣಗಳು ಗುಣವಾದ ನಂತರ ದೇಹದ ಸಂದುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತಿರುವುದು ಮಕ್ಕಳ ಪೋಷಕರಲ್ಲಿ ಆತಂಕ ಹುಟ್ಟಿಸಿದೆ. ಇದೀಗ ಶಾಲೆಗಳು ಕೂಡ ಆರಂಭವಾಗಿರುವುದರಿಂದ ರೋಗ ಪೀಡಿತ ಮಕ್ಕಳು ಪಾಠಗಳಿಂದಲೂ ವಂಚಿತರಾಗುತ್ತಿದ್ದಾರೆ. ಸೊಳ್ಳೆಗಳ ನಿರ್ಮೂಲನೆಗೆ ಗಮನಹರಿಸಿ ರೋಗ ಮತ್ತಷ್ಟು ಹರಡದಂತೆ ನೋಡಿಕೊಳ್ಳಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.