ಮಡಿಕೇರಿ: ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಗ್ರಾಹಕರ ಕ್ಲಬ್, ಕಲಾ ಸಂಘ ಹಾಗೂ ಎನ್.ಎಸ್.ಎಸ್. ಘಟಕ ಸಂಯುಕ್ತಾಶ್ರಯದಲ್ಲಿ ಶಾಲಾ ಆವರಣದಲ್ಲಿ ನಡೆದ ಮಕ್ಕಳ ಸಂತೆ ಗಮನಸೆಳೆಯಿತು.
ವಿದ್ಯಾರ್ಥಿಗಳು ವಿವಿಧ ಹಣ್ಣು, ಕಾಯಿಪಲ್ಲೆ. ಸೊಪ್ಪು, ತಿಂಡಿ ಪದಾರ್ಥಗಳನ್ನು ಮಾರಾಟ ಮಾಡಿ ಸಂತೆಯ ವಾತಾವರಣವನ್ನು ಶಾಲೆಯಲ್ಲಿ ತಂದರು. ಇದಕ್ಕೆ ಶಿಕ್ಷಕರು ಮತ್ತು ಪೋಷಕರು, ತರಕಾರಿ ಹಾಗೂ ತಿಂಡಿ ಪದಾರ್ಥಗಳನ್ನು ಖರೀದಿ ಮಾಡುವ ಸಾಥ್ ನೀಡಿದರು.
ಈ ವೇಳೆ ಮಕ್ಕಳ ಸಂತೆಗೆ ಗ್ರಾಹಕರಾಗಿ ಆಗಮಿಸಿ ಸಂತೆಯಲ್ಲಿ ಪದಾರ್ಥ ಖರೀದಿಸಿ ಮಾತನಾಡಿದ ಶಿಕ್ಷಕ ದಿನೇಶ್ ಅವರು ವಿದ್ಯಾರ್ಥಿಗಳು ತಮ್ಮ ಬದುಕು ರೂಪಿಸಿಕೊಳ್ಳಲು ವಿದ್ಯಾಭ್ಯಾಸದ ಜೊತೆಗೆ ವ್ಯವಹಾರದ ಪಾಠವನ್ನು ಕಲಿಯಬೇಕು ಆಗ ಮಾತ್ರ ಜೀವನದ ಗುರಿ ಮುಟ್ಟಲು ಸಾಧ್ಯ.ವಿದ್ಯಾರ್ಥಿಗಳನ್ನು ವರ್ಷವಿಡೀ ಕೇವಲ ಪಠ್ಯಕ್ಕೆ ಸೀಮಿತಗೊಳಿಸಬಾರದು ಎಂಬ ಉದ್ದೇಶದಿಂದ ಪ್ರತಿ ವರ್ಷವೂ ಮಕ್ಕಳ ಸಂತೆಯನ್ನು ಶಾಲೆಯಲ್ಲಿ ಆಯೋಜಿಸಲಾಗುತ್ತಿರುವುದಾಗಿ ಹೇಳಿದರು.
ಶಿಕ್ಷಕಿ ನಂದಿನಿ ಮಾತನಾಡಿ ಮಕ್ಕಳು ವ್ಯವಹಾರ ಕುಶಲತೆ, ತೂಕ ಅಳತೆಗಳ ಬಗ್ಗೆ ಅರಿವು ಹಾಗೂ ಸಮಾಜದೊಂದಿಗೆ ಬೆರೆಯುವ ರೀತಿಯು ತಿಳಿಯಬೇಕೆಂಬ ಉದ್ದೇಶದಿಂದ ಮಕ್ಕಳ ಸಂತೆಯನ್ನು ಆಯೋಜಿಸಲಾಗಿದ್ದು, ಮಕ್ಕಳಿಗೆ ಮಕ್ಕಳ ಸಂತೆಯ ಕಾರ್ಯಕ್ರಮದ ಮೂಲಕ ವ್ಯವಹಾರದ ಜ್ಞಾನವನ್ನು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭ ಉಪ ಪ್ರಾಂಶುಪಾಲ ಪರಮೇಶ್ವರಪ್ಪ, ಶಿಕ್ಷಕರಾದ ಎ.ಸಿ. ಮಂಜುನಾಥ್, ದಿನೇಶ್, ಉ.ರಾ. ನಾಗೇಶ್, ಸದಾಶಿವ ಪಲ್ಲೇದ್, ದೇವಕಿ, ಸುಜಾತ, ಉಮಾ, ಮಹೇಂದ್ರ, ಹೇಮಲತಾ, ಮತ್ತಿತರರು ಸೇರಿದಂತೆ ವಿದ್ಯಾರ್ಥಿಗಳು ಇದ್ದರು.