ಮಡಿಕೇರಿ : ಕಾಫಿ ಮಂಡಳಿ ಮತ್ತು ನೀತಿ ಆಯೋಗದ ಖಾಸಗಿ ಸಂಶೋಧನಾ ಸಂಸ್ಥೆ NILRED ವತಿಯಿಂದ ಜಿಲ್ಲೆಯಲ್ಲಿ ಮೇ 8 ರಿಂದ 12 ನೇ ತಾರೀಖಿನವರೆಗೆ ಮೌಲ್ಯ ಮಾಪನ ಅಧ್ಯಯನ ನಡೆಸಲಾಗುತ್ತಿದೆ.
ಅಧ್ಯಯನ ತಂಡದಲ್ಲಿ ಹಿರಿಯ ಕನ್ಸಲ್ಟೆಂಟ್ ಡಾ ಪ್ರೀತಮ್ ಸಿಂಗ್ , ನಿಲ್ರೆಡ್ ನ ಜಂಟಿ ನಿರ್ದೇಶಕ ಡಾ ಮೀನಲ್ ಶರ್ಮ, ನಿಲ್ರೆಡ್ ನ ಕನ್ಸಲ್ಟೆಂಟ್ ಧೀರ್ ಸಿಂಗ್ , ನೀತಿ ಆಯೋಗದ ಸೋನಲ್ ಗಾರ್ಗ್ , ಕಾಫಿ ಮಂಡಳಿಯ ಸಂಶೋಧನಾ ವಿಭಾಗದ ನಿರ್ದೇಶಕ ಢಾ ತಸ್ವೀಮ್ ಅಹಮದ್ , ಹಾಸನದ ಜಂಟಿ ನಿರ್ದೇಶಕ ಜಿ ತಿಮ್ಮ ರಾಜು , ಮಡಿಕೇರಿಯ ಕಾಫಿ ಮಂಡಳಿಯ ಉಪನಿರ್ದೇಶಕ ಬಿ ಶಿವ ಕುಮಾರ ಸ್ವಾಮಿ ಅವರಿದ್ದಾರೆ.
ಕೇಂದ್ರದ ನೀತಿ ಆಯೋಗವು ಅಧ್ಯಯನ ನಡೆಸುವುದನ್ನು ಖಾಸಗೀ ಸಂಶೋಧನಾ ಸಂಸ್ಥೆ NILRED ಗೆ ಗುತ್ತಿಗೆ ನೀಡಿದ್ದು ಈ ತಂಡವು ಕಾಫಿ ಉದ್ಯಮವು ಎದುರಿಸುತ್ತಿರುವ ಸವಾಲುಗಳು ಬೆಳೆಗಾರರ ತೊಂದರೆಗಳು ಎಲ್ಲವನ್ನೂ ಅಧ್ಯಯನ ಮಾಡಿ ನೀತಿ ಆಯೋಗಕ್ಕೆ ವರದಿ ಸಲ್ಲಿಸಲಿದೆ. ಇದರಿಂದ ನೀತಿ ಆಯೋಗವು ಉದ್ಯಮದ ಚೇತರಿಕೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ಅನುಕೂಲವಾಗಲಿದೆ.
ಅಧಿಕಾರಿಗಳ ತಂಡವು ಸೋಮವಾರ ಮಡಿಕೇರಿ ತಾಲ್ಲೂಕಿನಲ್ಲಿ ಕಾಫಿ ಬೆಳೆಗಾರ ರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಅಲಿಸಿತು.
ಮಂಗಳವಾರ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ, ಸಿದ್ದಾಪುರ, ಬಿ ಶೆಟ್ಟಿಗೇರಿ ಮತ್ತು ಗೋಣಿಕೊಪ್ಪದಲ್ಲಿ ಬೆಳೆಗಾರರ ಜತೆ ಸಭೆ ನಡೆಸಿ ಅಹವಾಲುಗಳನ್ನು ಆಲಿಸಿತು. ಸಭೆಯಲ್ಲಿ ಬೆಳೆಗಾರರು ತಮ್ಮ ಸಂಕಷ್ಟವನ್ನು ಹೇಳಿಕೊಂಡರಲ್ಲದೆ ಸರ್ಕಾರದಿಂದ ಸಬ್ಸಿಡಿ , ಕಾಡಾನೆಗಳ ಕಾಟಕ್ಕೆ ಶಾಶ್ವತ ಪರಿಹಾರ ಮತ್ತು ಸರ್ಕಾರದಿಂದ ಹೆಚ್ಚಿನ ಸವಲತ್ತುಗಳನ್ನು ಕೊಡಬೇಕೆಂದು ಒತ್ತಾಯಿಸಿದರು.
ಬುಧವಾರ ಇದೇ ತಂಡವು ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಬೆಳೆಗಾರರ ಜತೆ ಸಭೆ ನಡೆಸಿ ಅಹವಾಲುಗಳನ್ನು ಆಲಿಸಿ ನಂತರ ಹಿಂತಿರುಗಲಿದೆ ಎಂದು ತಿಳಿದು ಬಂದಿದೆ.