ಮಡಿಕೇರಿ:; ‘ಆದಾಯ ತೆರಿಗೆ (ಐ.ಟಿ) ಹಾಗೂ ಜಾರಿ ನಿರ್ದೇಶನಾಲಯ (ಇ.ಡಿ) ಗಳು ಶಾಸನಬದ್ದ ರಚಿತವಾಗಿರುವ ಸ್ವಾಯತ್ತ ಸಂಸ್ಥೆಗಳಾಗಿದ್ದು ಆ ಸಂಸ್ಥೆಗಳ ಅಧಿಕಾರಿಗಳು, ಪಕ್ಷ , ಜಾತಿ ಧರ್ಮ ನೋಡಿಕೊಂಡು ದಾಳಿ ನಡೆಸುವುದಿಲ್ಲ. ಯಾರು ಅಕ್ರಮವಾಗಿ ಹಣ ಸಂಪಾದನೆ ಮಾಡಿರುವ ಸುಳಿವು ಸಿಗುತ್ತದೆಯೋ ಅಂತಹವರ ಮೇಲಷ್ಟೇ ದಾಳಿ ನಡೆಸುತ್ತಾರೆ’ ಎಂದು ನೂತನ ಸಚಿವ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ಇಲ್ಲಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರು ‘ಬಿಜೆಪಿಯವರು ಅಕ್ರಮವಾಗಿ ಹಣ ಸಂಪಾದಿಸಿದ್ದರೆ, ಅವರ ಮೇಲೆಯೂ ದಾಳಿ ಆಗಲಿದೆ’ ಎಂದು ಪ್ರತಿಕ್ರಿಯಿಸಿದರು. ಶಾಸಕ ಜಮೀರ್ ಅಹಮದ್ ಖಾನ್ ಅವರ ಮನೆಯ ಮೇಲೆ ಇ.ಡಿ ಅಧಿಕಾರಿಗಳ ದಾಳಿ ರಾಜಕೀಯ ಪ್ರೇರಿತ ಅಲ್ಲ. ಆ ದಾಳಿಗೂ ಸರ್ಕಾರಕ್ಕೂ ಸಂಬಂಧ ಸಲ್ಲ. ಧಾಳಿ ನಡೆಸಿದ್ದೇ ಅಪರಾಧ ಎನ್ನುವಂತೆ ಕಾಂಗ್ರೆಸ್ ಮುಖಂಡರು ಆರೋಪಿಸುತ್ತಿರುವುದು ಮತ್ತು ಪ್ರತಿಭಟಿಸುತ್ತಿರುವುದು ಸರಿಯಲ್ಲ. ಹತಾಶೆಯಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಸಚಿವರು ಹೇಳಿದರು.