ಮೈಸೂರು: ಮೈಸೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಸಂಸ್ಥೆಯ ಜೊತೆ ವಿದ್ಯಾರ್ಥಿ ಹಾಗೂ ಅಧ್ಯಾಪಕ ವಿನಿಮಯ ಕಾರ್ಯಕ್ರಮ ಒಪ್ಪಂದ ಹೊಂದಿರುವ ಜರ್ಮನಿಯ ಹೀಲ್ಬ್ರಾನ್ ವಿಶ್ವವಿದ್ಯಾನಿಲಯ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಎಸ್ ಡಿ ಎಮ್ ಐಎಮ್ ಡಿ ಸಂಸ್ಥೆಗೆ ಆಗಮಿಸಿದರು.
ಜರ್ಮನಿ ಹೀಲ್ಬ್ರಾನ್ ವಿಶ್ವವಿದ್ಯಾನಿಲಯ ಮಾನವ ಸಂಪನ್ಮೂಲ ನಿರ್ವಹಣೆ, ಅಧ್ಯಾಪಕರು – ವ್ಯಾಪಾರ ಮತ್ತು ಸಾರಿಗೆ ನಿರ್ವಹಣೆ ಪ್ರಾಧ್ಯಾಪಕ ಡಾ. ಸುಜೇನ್ ವಿಲ್ಪರ್ಸ್, ಮತ್ತು ಕಾರ್ಯಕ್ರಮದ ಸಂಚಾಲಕ ಮಿಸ್. ಡೇಬಿ ಅವರೊಂದಿಗೆ 15 ವಿದ್ಯಾರ್ಥಿಗಳು ಫೆಬ್ರವರಿ 21 ರಿಂದ 28ರವರೆಗೆ ವಿನಿಮಯ ಪ್ರವಾಸದಲ್ಲಿ ಇರುತ್ತಾರೆ.
ಸಂಸ್ಥೆಯ ನಿರ್ದೇಶಕರಾದ ಡಾ. ಎನ್. ಆರ್. ಪರಶುರಾಮನ್, ಉಪನಿರ್ದೇಶಕರಾದ ಡಾ. ಎಸ್. ಎನ್. ಪ್ರಸಾದ್ ಆಗಮಿಸಿರುವ ಪ್ರತಿನಿಧಿಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಡಾ. ಎನ್. ಆರ್. ಪರಶುರಾಮನ್, ಧರ್ಮಸ್ಥಳ ಟ್ರಸ್ಟ್ ಅನುಸರಿಸುತ್ತಿರುವ ಮೌಲ್ಯಗಳ ಬಗ್ಗೆ ಹೇಳಿದರು. ಅದೇ ನಿಟ್ಟಿನಲ್ಲಿ ಸಂಸ್ಥೆಯು ತನ್ನ ನಿರ್ವಹಣಾ ಶಿಕ್ಷಣದಲ್ಲಿ ಅಳವಡಿಸಿಕೊಂಡಿರುವ ಸಾಮಾಜಿಕ ಕಳಕಳಿ, ಸಾಮಾಜಿಕವಾಗಿ ಒಳಗೊಳ್ಳುವಿಕೆ, ವ್ಯಾಪಾರದಲ್ಲಿನ ನೀತಿಗಳು ಮತ್ತು ಕಾರ್ಪೊರೇಟ್ ಸ್ವಾಸ್ಥ್ಯದ ಬಗ್ಗೆ ವಿವರಿಸಿದರು.
ಆಗಮಿಸಿರುವ ಸಾಗರೋತ್ತರ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದದವರು ಭಾರತೀಯ ವ್ಯಾಪಾರದ ವಾತಾವರಣದ ಬಗ್ಗೆ ತಿಳಿದುಕೊಳ್ಳಲಿದ್ದಾರೆ. ರಾಷ್ಟ್ರಗಳ ನಡುವಿನ ಅಡೆತಡೆಗಳನ್ನು ದೂರ ಮಾಡಿ, ಉತ್ತಮವಾದ ಶೈಕ್ಷಣಿಕ ಮತ್ತು ವ್ಯಾಪಾರದ ಸಂಬಂಧಗಳನ್ನು ಹೊಂದುವ ಬಗ್ಗೆ ಕಾರ್ಯಕ್ರಮವು ಗಮನಕೊಡಲಿದೆ. ಈ ಎಲ್ಲಾ ವಿಷಯಗಳನ್ನು ಕೇಂದ್ರವಾಗಿಟ್ಟುಕೊಂಡು ಸಂಸ್ಥೆಯು ಕಾರ್ಯಕ್ರಮವನ್ನು ರೂಪಿಸಿದ್ದು, ಅದರಲ್ಲಿ ತರಗತಿಗಳು, ಉದ್ಯಮಗಳಿಗೆ ಭೇಟಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ಭೇಟಿ, ಮೈಸೂರಿನ ಸುತ್ತಮುತ್ತ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನಡೆಯಲಿದೆ. ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ 2023 ರ ಅಡಿಯಲ್ಲಿ ಬಂದಿರುವ ಅಧ್ಯಾಪಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.