ಹೊಳೆನರಸೀಪುರ: ಜೀವನದ ಸಾರ್ಥಕತೆ ನೋವಿನಲ್ಲೂ ಇದ್ದರೂ ನಗುನಗುತಾ ಮಾತಾಡಬೇಕು, ರಾಜಕಾರಣ ಬಿಸಿ ಬಿಸಿ ಚರ್ಚೆಯಾಗುತ್ತಿದೆ, ಆದರೆ ನಾನು ಕೊನೆಗಳಿಗೆ ವರೆಗೆ ರಾಜಕೀಯಕ್ಕೆ ಮಹತ್ವ ನೀಡದೇ, ಕರ್ತವ್ಯಕ್ಕೆ, ಬಡವರ, ರೈತರ ಏಳಿಗೆಗೆ ಸಂಪೂರ್ಣ ಸಮಯವನ್ನು ವಿನಿಯೋಗ ಮಾಡುತ್ತೇನೆ, ಎಲ್ಲರೂ ಎಲ್ಲೆಲ್ಲೋ ಓಡಾಡುತ್ತಿದ್ದಾರೆ, ನಾನು ನಿಮ್ಮ ಜತೆಗಿದ್ದೇನೆ. ರಾಜಕಾರಣಕ್ಕಿಂತ ನೀವು ನೀಡಿರುವ ಕರ್ತವ್ಯಕ್ಕೆ ಆದ್ಯತೆ ನೀಡಿ, ಅವಕಾಶದ ಸದುಪಯೋಗಕ್ಕೆ ಶ್ರಮಿಸುತ್ತೇವೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.
ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಗೋಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಮಾಜ ಕಲ್ಯಾಣ ಇಲಾಖೆವತಿಯಿಂದ ನಿರ್ಮಿಸಿರುವ ಡಾ. ಅಂಬೇಡ್ಕರ್ ಭವನ ಉದ್ಘಾಟಿಸಿ, ಮಾತನಾಡಿದರು. ಧರ್ಮ ನಿರಪೇಕ್ಷಿತ ರಾಷ್ಟ್ರದ ಜಾತ್ಯಾತೀತ ವ್ಯವಸ್ಥೆಯಲ್ಲಿ ನಾವಿದ್ದರೂ ಸಹ ಡಾ. ಅಂಬೇಡ್ಕರ್ ಅವರ ಆದರ್ಶ ಹಾಗೂ ಸಾರಾಂಶವು ಸಂಪೂರ್ಣ ಈಡೇರಿಲ್ಲವೆಂಬ ನೋವು ಕಾಡುತ್ತಿದೆ ಎಂದರು.
ಶಿಕ್ಷಿತರ ಸಂಖ್ಯೆ ಹೆಚ್ಚಿದೆ ಜತೆಗೆ ನಾಗರಿಕತೆ ಬೆಳೆದಿದೆ ಆದರೆ ನೈತಿಕ ಮೌಲ್ಯಗಳು ಪಾತಾಳಕ್ಕೆ ಹೋಗಿದೆ, ಬಡವರು, ರೈತರು ಅಥವಾ ತುಳಿತಕ್ಕೆ ಒಳಗಾದ ಜನರಿಂದ ಆಗಿಲ್ಲ, ಆದರೆ ನಮ್ಮಂತಹ ಕಲಿತವರಿಂದ, ನಾಗರಿಕತೆ ಅನುಭವಿಸುವ ಜನರಿಂದ ಆಗಿದೆ ಎಂದು ಬಸವಣ್ಣ ಅವರಿಗೆ ಸೇರಿದವರು, ಡಾ. ಅಂಬೇಡ್ಕರ್ ಇವರಿಗೆ ಸೇರಿದವರು, ಬುದ್ಧ ಇನ್ಯಾರಿಗೋ ಸೇರಿದವರು, ಇತ್ಯಾದಿ, ಇತ್ಯಾದಿ, ಎನ್ನದೇ ಈ ಭೂಮಿಯ ಮೇಲೆ ಎಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಿದ್ದಾಗ ಮಾತ್ರ ಶಾಂತಿ, ನೆಮ್ಮಧಿ ನೆಲೆಸುತ್ತದೆ. ಆದ್ದರಿಂದ ಅಂಬೇಡ್ಕರ್ ಭವನವನ್ನು ಎಲ್ಲರೂ ಬಳಸುತ್ತಾ, ಒಟ್ಟಾಗಿ ಬದುಕುತ್ತಾ, ಇತರೆ ಗ್ರಾಮಸ್ಥರಿಗೂ ಮಾದರಿಯಾಗುವಂತೆ ಸಲಹೆ ನೀಡಿದರು.
ಗೋಹಳ್ಳಿ ಗ್ರಾಮದಲ್ಲಿ ೨೫ ಲಕ್ಷ ರೂ. ಡಾ. ಅಂಬೇಡ್ಕರ್ ಭವನ ನಿರ್ಮಾಣವಾಗಿದೆ ಮತ್ತು ಭವನದ ಸಂಪೂರ್ಣ ಬಳಕೆ ಮಾಡುವ ನಿಟ್ಟಿನಲ್ಲಿ ಎಲ್ಲ ವರ್ಗದ ಜನರು ಉಪಯೋಗ ಮಾಡಿಕೊಳ್ಳಬೇಕು. ಭವನದಲ್ಲಿ ಗ್ರಂಥಾಲಯ ಸ್ಥಾಪನೆಯಾದರೇ ಸಂಪೂರ್ಣ ಚಟುವಟಿಕೆಯಿಂದ ಕೂಡಿರುತ್ತದೆ ಎಂಬ ಸಲಹೆಗೆ ಒಪ್ಪಿ, ಗ್ರಂಥಾಲಯ ಸ್ಥಾಪನೆಯಾಗಿದೆ ಮತ್ತು ಇದರಿಂದ ರೈತರ, ಬಡವರ ಮಕ್ಕಳ ಜ್ಞಾನಾರ್ಜನೆಗೆ ಉಪಯೋಗವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಹಳ್ಳಿಮೈಸೂರು ಗ್ರಾ.ಪಂ. ಅಧ್ಯಕ್ಷ ಮಹೇಶ್ ಕೆ.ವಿ., ಗ್ರಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ನಳಿನಾಕ್ಷಿ, ಗ್ರಾ.ಪಂ. ಸದಸ್ಯರಾದ ಚಿನ್ನಮ್ಮ ಹಾಗೂ ನಾಗರಾಜು, ಡಾ. ಬಿ.ಪಿ.ದೇವರಾಜು, ಜಂಟಿ ನಿರ್ದೇಶಕರು, ಶಿಕ್ಷಣ ಹಾಗೂ ಹಾಸನ ಜಿಲ್ಲಾ ನೋಡಲ್ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು., ಎನ್.ಆರ್.ಪುರುಷೋತಮ್, ಜಂಟಿ ನಿರ್ದೇಶಕರು, ಮೂಲಭೂತ ಸೌಕರ್ಯಗಳ ಶಾಖೆ, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು., ತಾ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೌಸರ್ ಅಹಮದ್, ಪಿಡಿಒ ಸವಿತಾ, ನಿ. ಜಂಟಿ ನಿರ್ದೇಶಕ ಡಾ. ರಾಮಚಂದ್ರ, ಮುಖಂಡರಾದ ಸೋಮಶೇಖರ್, ಅತ್ನಿ ಮಹದೇವ, ಅತ್ನಿ ಕೃಷ್ಣ, ವಿಷ್ಣುಪ್ರಕಾಶ್, ಕುಪ್ಪೆ ಮಹದೇವ, ಇತರರು ಇದ್ದರು.