ಉಡುಪಿ: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಸಮರ್ಥನೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹೇಳಿದರು.
ಶಾಸಕ ಮಾಡಾಳ್ ಪುತ್ರನ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷ ಯಾವುದೇ ಕಾರಣಕ್ಕೂ ಈ ಪ್ರಕರಣವನ್ನು ಸಮರ್ಥನೆ ಮಾಡುವುದಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ನಮ್ಮ ಸರಕಾರ ಲೋಕಾಯುಕ್ತಕ್ಕೆ ಎಷ್ಟು ಸ್ವಾಯತ್ತತೆ ನೀಡಿದೆ ಎಂಬುದು ಇದರಿಂದ ತಿಳಿಯುತ್ತದೆ. ಈ ಪ್ರಕರಣದಿಂದ ಜನರಿಗೆ ದೊಡ್ಡ ಸಂದೇಶ ಹೋದಂತಾಗಿದೆ ಎಂದರು.
ಈ ಪ್ರಕರಣದ ಪೂರ್ಣ ತನಿಖೆ ಇನ್ನಷ್ಟೇ ಆಗಬೇಕಿದೆ. ಏನಾದರೂ ಷಡ್ಯಂತ್ರಗಳಿದ್ದರೆ ಬಯಲಾಗಬೇಕು. ಸದ್ಯ ಸಿಕ್ಕಿ ಬಿದ್ದಿರುವುದು ಶಾಸಕರ ಮಗ. ಆದರೆ ಈ ಪ್ರಕರಣವನ್ನು ನಾವು ಯಾರೂ ಸಮರ್ಥನೆ ಮಾಡುವುದಿಲ್ಲ ಎಂದು ಹೇಳಿದರು.
ಲೋಕಾಯುಕ್ತದಲ್ಲಿ ಇರೋದು ಪೊಲೀಸ್ ಇಲಾಖೆಯ ಅಧಿಕಾರಿಗಳೇ. ಅವರು ರಾಜ್ಯ ಸರ್ಕಾರ ಗೃಹ ಸಚಿವರ ಅಧೀನದಲ್ಲಿ ಬರ್ತಾರೆ. ಸರಕಾರ ಮನಸ್ಸು ಮಾಡದ್ದಿದ್ದರೆ ಇದನ್ನು ಯಾವ ರೀತಿಯಲ್ಲೂ ತಪ್ಪಿಸಬಹುದಿತ್ತು. ಆದರೆ ಕೇಂದ್ರ ನಾಯಕತ್ವ ಮತ್ತು ಮುಖ್ಯಮಂತ್ರಿಗಳು ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದರು.