ಹಾಸನ: ನಗರದ ಸಂತ ಪೇಟೆಯಲ್ಲಿ ಸಂತೆಯಲ್ಲಿ ರೈತರು ಸಾಕಲು ಬೇಡ ಎಂದು ಎಳೆಯ ಗಂಡು ಕರುಗಳನ್ನು ಬಿಟ್ಟು ಹೋಗಿದ್ದರು. ಆ ಮುದ್ದಾಗಿರುವ ಕರುಗಳು ಆಹಾರಕ್ಕಾಗಿ ಪ್ಲಾಸ್ಟಿಕ್, ಮಣ್ಣನ್ನು ತಿನ್ನುತ್ತಾ ಇದ್ದವು ಇದನ್ನು ಗಮನಿಸಿದ ಸಮಾಜ ಸೇವಕ ಪ್ರವೀಣ್ಗೌಡ ಅವುಗಳನ್ನು ನಗರ ಸಭೆ ಆವರಣಕ್ಕೆ ಆಟೋ ದಲ್ಲಿ ಕರೆದೊಯ್ದು ರಕ್ಷಿಸಿದ್ದಾರೆ.
ಸಾಮಾನ್ಯ ಸಭೆ ನಡೆಯುತ್ತಿರುವಾಗಲೇ ಕರು ಗಳನ್ನು ಆವರಣಕ್ಕೆ ಆಟೋದಲ್ಲಿ ತಂದಿದ್ದರಿಂದ ಅಧಿಕಾರಿಗಳು, ನಗರಸಭೆ ಜನಪ್ರತಿನಿಧಿಗಳು ಹಾಗೂ ಪ್ರವೀಣ್ಗೌಡ ನಡುವೆ ಕರುಗಳ ರಕ್ಷಣೆ ಮಾಡುವ ವಿಚಾರದಲ್ಲಿ ಸ್ವಲ್ಪ ಸಮಯ ಮಾತಿನ ಜಟಾಪಟಿ ನಡೆದಿದೆ. ನಂತರ ಇವರ ಮನವಿಗೆ ಸ್ಪಂದಿಸಿ ನಗರಸಭೆ ಅಧ್ಯಕ್ಷ ಆರ್. ಮೋಹನ್ ಹಾಗೂ ಅಧಿಕಾರಿ ಗಳು ಅವುಗಳನ್ನು ಅರಸೀಕೆರೆ ಗೋಶಾಲೆಗೆ ಬಿಟ್ಟು ರಕ್ಷಣೆ ಮಾಡಿದ್ದಾರೆ.
ಈ ವೇಳೆ ಮಾತನಾಡಿರುವ ಪ್ರವೀಣ್ಗೌಡ ಇತ್ತೀಚೆಗೆ ಸಂತೆಯಲ್ಲಿ ಕರುಗಳನ್ನು ರೈತರು ತಂದು ಬಿಟ್ಟು ಹೋಗುತ್ತಿದ್ದಾರೆ. ಗೋವುಗಳಿಗೆ ರಕ್ಷಣೆ ಇಲ್ಲದಾಗಿದೆ. ಇದೇ ರೀತಿ ಹಾಸನ ನಗರದಾದ್ಯಂತ ಬಿಡಾಡಿ ದನಗಳು ಹೆಚ್ಚಾಗಿದ್ದು ಇವುಗಳನ್ನು ರಕ್ಷಿಸುವಲ್ಲಿ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕು ತಾಲ್ಲೂಕಿಗೆ ಒಂದು ಗೋಶಾಲೆಗಳನ್ನು ತೆರೆದು ಧನಕರುಗಳನ್ನು ರಕ್ಷಣೆ ಮಾಡ ಬೇಕು ಎಂದು ಒತ್ತಾಯ ಮಾಡಿದ್ದಾರೆ.
ಗೋವುಗಳ ರಕ್ಷಣೆ ವಿಚಾರದಲ್ಲಿ ಪ್ರಾಣಿ ದಯಾ ಸಂಘ ಈ ಬಗ್ಗೆ ಮುತುವರ್ಜಿ ವಹಿಸಬೇಕು ಸಭೆ ಸಮಾರಂಭಗಳಿಗೆ ಮಾತ್ರ ಈ ಸಂಘ ಸೀಮಿತವಾಗಬಾರದು ರಕ್ಷಣೆಗೂ ಕೂಡ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.