ಹಾಸನ: ಗಂಡ ಹೆಂಡತಿ ನಡುವೆ ವಿರಸ ಉಂಟಾಗಿ ಪಾಪಿ ಗಂಡನು ತನ್ನ ಹೆಂಡತಿಯ ಕುತ್ತಿಗೆಗೆ ತಂತಿಯಿಂದ ಬಿಗಿದು ಕೊಲೆ ಮಾಡಿರುವ ಘಟನೆ ನಗರದ ಹೊರವಲಯ ತಣ್ಣೀರುಹಳ್ಳ ಸಮೀಪ ಬೇಲೂರು ರಸ್ತೆ ಗುಡ್ಡೇನಹಳ್ಳಿಯ ದೇವಸ್ಥಾನದ ಪಕ್ಕದಲ್ಲಿ ನಡೆದಿದೆ.
ನಗರದ ಬೇಲೂರು ರಸ್ತೆ, ಗುಡ್ಡೆನಹಳ್ಳಿಯಲ್ಲಿ ವಾಸವಾಗಿರುವ ಸಿರಿ (೨೩) ಕೊಲೆ ಆಗಿರುವ ದುರ್ದೈವಿ. ಕೊಲೆ ಮಾಡಿ ಪರಾರಿಯಾಗಿರುವ ಆದಿ (೨೬)ಯನ್ನು ಸೆರೆ ಪೊಲೀಸರು ಬಲೆ ಬೀಸಿದ್ದಾರೆ. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಗುಡ್ಡೆನಹಳ್ಳಿಯಲ್ಲಿ ಮನೆ ಮಾಡಿಕೊಂಡು ಗಂಡ ಮತ್ತು ಹೆಂಡತಿ ಇಬ್ಬರೂ ಒಂದೆ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಈ ನಡುವೆ ಇಬ್ಬರಲ್ಲಿ ಗಲಾಟೆ ನಡೆದು ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.
ಕೊಲೆ ಮಾಡಿದ ಗಂಡ ಆದಿಯು ನಂತರ ತನ್ನ ತಂಗಿಗೆ ಕರೆ ಮಾಡಿ ಸಾಯಿಸಿರುವ ಬಗ್ಗೆ ಮಾಹಿತಿ ನೀಡಿದ್ದು, ಇದಾದ ಬಳಿಕ ತಂಗಿಯು ಮನೆ ಮಾಲೀಕರಿಗೆ ಕರೆ ಮಾಡಿ ಮನೆಯಲ್ಲಿ ಸಿರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುವ ಯತ್ನ ನಡೆಸಿದ್ದಾಳೆ ಎಂದು ಹೇಳಲಾಗುತ್ತಿದೆ. ವಿಷಯ ತಿಳಿದ ಎಎಸ್ಪಿ ತಮ್ಮಯ್ಯ ಹಾಗೂ ಪೊಲೀಸ್ ಸಿಬ್ಬಂದಿಗಳು ಮತ್ತು ಬೆರಳಚ್ಚು ತಜ್ಞರು, ಪೊಲೀಸ್ ಶ್ವಾನದಳದೊಂದಿಗೆ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.