ಹಾಸನ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಹೇಳುತ್ತಿರುವಂತೆ ನೂರಾಇಪ್ಪತ್ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆಯೋ ಇಲ್ಲವೋ ಎಂಬ ಬಗ್ಗೆ ರಾಜ್ಯದ ಜನರಿಗೆ ಕುತೂಹಲ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಹಾಸನ ವಿಧಾನಸಭೆ ಕ್ಷೇತ್ರಕ್ಕೆ ಭವಾನಿ ರೇವಣ್ಣ ಅವರಿಗೆ ಜೆಡಿಎಸ್ ಟಿಕೆಟ್ ಸಿಗುತ್ತದೆಯೇ ಎಂಬ ಬಗ್ಗೆ ಮಾತ್ರ ಎಲ್ಲರಿಗೂ ಕುತೂಹಲ ಇದ್ದೇ ಇದೆ. ಈ ಕಾರಣಕ್ಕೆ ಇಲ್ಲೊಂದು ವರದಿ ನಿಮ್ಮೆದುರು ಇಡಲಾಗುತ್ತಿದೆ.
ಅಣ್ಣ- ತಮ್ಮ ತಾಜ್ ವೆಸ್ಟ್ ಎಂಡ್ ಭೇಟಿ: ಮೊದಲಿಗೆ, ಫೆಬ್ರುವರಿ ನಾಲ್ಕನೇ ತಾರೀಖಿನ ಶನಿವಾರದಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಚ್.ಡಿ.ರೇವಣ್ಣ ಭೇಟಿ ಆಗಿದ್ದಾರೆ. ನಮ್ಮ ವಿಶ್ವಸನೀಯ ಮೂಲಗಳ ಪ್ರಕಾರ, ಭವಾನಿ ಅವರಿಗೆ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವ ವಿಚಾರವಾಗಿಯೇ ಅಣ್ಣ- ತಮ್ಮನ ಮಧ್ಯೆ ಮಾತುಕತೆ ನಡೆದಿದೆ. ನಂತರ ಪದ್ಮನಾಭನಗರದಲ್ಲಿ ದೇವೇಗೌಡರ ‘ಅಮೋಘ’ ನಿವಾಸಕ್ಕೆ ರೇವಣ್ಣ ಬಂದಿದ್ದು, ಒಂದು ಗಂಟೆಗಳ ಕಾಲ ಚರ್ಚೆ ನಡೆಸಿ, ರಾತ್ರಿ ಹನ್ನೆರಡು ಗಂಟೆಗೆ ಹಾಸನದ ಹೊಳೆನರಸೀಪುರಕ್ಕೆ ತೆರಳಿದ್ದಾರೆ.
ಈ ಮಾತುಕತೆಗಳು ಹೀಗೇ ಸಾಗಿವೆ ಎಂದು ಹೇಳುವುದಕ್ಕೆ ಯಾವುದೇ ಖಚಿತತೆ ದೊರೆತಿಲ್ಲ. ಆದರೂ ದೇವೇಗೌಡರ ಕುಟುಂಬ, ಭವಾನಿ ಹಾಗೂ ರೇವಣ್ಣನವರನ್ನು ಬಲ್ಲವರು ಹೇಳುತ್ತಿರುವಂತೆ, ಈ ಬಾರಿ ಹಾಸನದಲ್ಲಿ ಭವಾನಿ ಅವರಿಗೆ ಟಿಕೆಟ್ ನೀಡಲೇಬೇಕು. ಒಂದು ವೇಳೆ ಸ್ವರೂಪ್ ಅವರಿಗೆ ಟಿಕೆಟ್ ಕೊಟ್ಟರೆ ಯಾವ ಕಾರಣಕ್ಕೂ ಜೆಡಿಎಸ್ ಆ ಕ್ಷೇತ್ರದಲ್ಲಿ ಗೆಲ್ಲಲ್ಲ. ಅಷ್ಟೇ ಅಲ್ಲ, ಬಹಳ ಕ್ಷೇತ್ರದಲ್ಲಿ ಜೆಡಿಎಸ್ ಸ್ಥಿತಿ ಬಹಳ ಕಷ್ಟವಾಗುತ್ತದೆ. ಇನ್ನೂ ಮುಂದುವರಿದು, ಜೆಡಿಎಸ್ ಪಕ್ಷಕ್ಕೇ ಅಸ್ತಿತ್ವದ ಪ್ರಶ್ನೆ ಎದುರಾದರೂ ಅಚ್ಚರಿ ಇಲ್ಲ ಎಂಬ ಬಗ್ಗೆ ಪ್ರಸ್ತಾಪವಾಗಿದೆ ಎಂದು ಮೂಲಗಳು ತಿಳಿಸಿವೆ.
ಎರಡು ಮಂಗಳವಾರದಿಂದ ಕುಕ್ಕೆಯಲ್ಲಿ ಪೂಜೆ: ಈ ಮಧ್ಯೆ ಕಳೆದ ಎರಡು ಮಂಗಳವಾರದಿಂದ ರೇವಣ್ಣ ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಮಾಡಿಸುತ್ತಿದ್ದಾರೆ. ಅದಕ್ಕೂ ಮುಂಚೆ ಭವಾನಿ ಅವರು ತಿರುಪತಿಗೆ ಹೋಗಿಬಂದರು. ಇಂಥ ಸುಳಿವುಗಳೆಲ್ಲ ಟಿಕೆಟ್ಗಾಗಿ ಭವಾನಿ ರೇವಣ್ಣ ಅವರ ಗಟ್ಟಿ ಪ್ರಯತ್ನಗಳನ್ನೇ ಸೂಚಿಸುತ್ತವೆ ಎಂಬುದು ಒಟ್ಟಾರೆ ಸಾರಾಂಶ. ಆದರೆ ತನಗೆ ಜೆಡಿಎಸ್ ಟಿಕೆಟ್ ಸಿಗುವುದು ಖಚಿತ ಎಂದು ಭವಾನಿ ಅವರು ಕಾರ್ಯಕ್ರಮವೊಂದರಲ್ಲಿ ಹೇಳುವ ಮುಂಚೆಯೇ ಕುಟುಂಬದೊಳಗೆ ಟಿಕೆಟ್ ಕುರಿತು ಮಾತುಕತೆಗಳಾಗಿವೆ. ಆ ನಂತರ ನಿರ್ಣಾಯಕ ಎಂಬಂತೆ ಭವಾನಿ ಅವರು ತಿರುಪತಿಗೆ ತೆರಳಿದ್ದಾರೆ, ರೇವಣ್ಣ ಅವರು ಮಂಗಳವಾರ (ಸತತ ಎರಡು ವಾರ) ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಮಾಡಿಸಿದ್ದಾರೆ.
ಭವಾನಿ-ರೇವಣ್ಣ ಅವರನ್ನು ಸಮಾಧಾನ ಮಾಡುವುದರ ಸಲುವಾಗಿ ದೇವೇಗೌಡರು ಸಂಧಾನ ಸೂತ್ರ ಇಟ್ಟಿದ್ದಾರೆ ಎಂಬ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಅದೇನೆಂದರೆ, ಭವಾನಿ ಅವರಿಗೆ ಹೊಳೆನರಸೀಪುರದ ಟಿಕೆಟ್, ಸ್ವರೂಪ್ ಹಾಸನಕ್ಕೆ ಹಾಗೂ ರೇವಣ್ಣ ಕೆ.ಆರ್.ಪೇಟೆಗೆ ಹೋಗುತ್ತಾರೆ ಎಂಬ ವದಂತಿ . ಆದರೆ ಪರಿಸ್ಥಿತಿ ಏನೆಂದರೆ, ಎಚ್.ಡಿ.ರೇವಣ್ಣ ಯಾವುದೇ ಕಾರಣಕ್ಕೂ ಹೊಳೆನರಸೀಪುರ ಬಿಟ್ಟು ಬೇರೆಲ್ಲೂ ಹೋಗಲ್ಲ.
ಇನ್ನು ಭವಾನಿ ಅವರು ೧೯೯೮ರಿಂದಲೂ ಜೆಡಿಎಸ್ ಪಕ್ಷದಲ್ಲಿ, ಸಕ್ರಿಯ ರಾಜಕಾರಣದಲ್ಲೇ ಇದ್ದಾರೆ, ಹಾಸನ ಕ್ಷೇತ್ರದಲ್ಲಿ ಕೆಲಸ ಮಾಡುತ್ಬತಿದ್ದಾರೆ. ಹಾಗೆ ನೋಡಿದರೆ ಅನಿತಾ ಕುಮಾರಸ್ವಾಮಿ ಅವರಿಗಿಂತ ರಾಜಕಾರಣದಲ್ಲಿ ಬಹಳ ಪಳಗಿದವರು, ಶಾಸಕ ಸ್ಥಾನದ ಜವಾಬ್ದಾರಿ, ಅಧಿಕಾರವನ್ನು ಬಹಳ ಚೆನ್ನಾಗಿ ಬಲ್ಲವರು. ಶತಾಯಗತಾಯ ಈ ಗಂಡ-ಹೆಂಡತಿ (ರೇವಣ್ಣ- ಭವಾನಿ) ಹಾಸನದ ಪಾಳೇಪಟ್ಟಿನಿಂದ ಒಂದು ಹೆಜ್ಜೆ ಕಿತ್ತು ಆಚೆ ಇಡುವುದಿಲ್ಲ.
ಹಾಸನವೂ ಕುಮಾರಸ್ವಾಮಿ ತೆಕ್ಕೆಗೆ ಬಿದ್ದೀತು ಎಂಬ ಆತಂಕ: ಇದೇ ಹಾಸನದಲ್ಲಿ ಕುಮಾರಸ್ವಾಮಿ ಬಗ್ಗೆ ಒಲವಿರುವವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ, ಅಲ್ಲಿ ರೇವಣ್ಣನವರ ಕೆಲಸಗಳನ್ನು ಮೆಚ್ಚುವವರ ಸಂಖ್ಯೆಗೂ ಕಡಿಮೆ ಇಲ್ಲ. ಆ ಕಾರಣಕ್ಕೆ ಎಲ್ಲಿ ಹಾಸನದ ರಾಜಕಾರಣ ಕುಮಾರಸ್ವಾಮಿ ಕೈಗೆ ಸೇರಿಬಿಡುತ್ತದೋ ಎಂಬ ಬಗ್ಗೆ ಭವಾನಿ-ರೇವಣ್ಣ ದಂಪತಿಯಲ್ಲಿ ಸಣ್ಣ ಪ್ರಮಾಣದ ಅಭದ್ರತೆ ಇದ್ದೇ ಇದೆ. ರೇವಣ್ಣ ಏನೇ ಕೆಲಸಗಾರ, ರಾಜಕೀಯದಲ್ಲಿ ಅನುಭವಿ ಅಂದರೂ ಅವರಿಗೆ ಜೆಡಿಎಸ್ನಲ್ಲಿ ಇರುವವರಿಗಿಂತ ಕಾಂಗ್ರೆಸ್ ಪಕ್ಷದೊಳಗೆ ಇರುವ ಸ್ನೇಹಿತರೇ ಹೆಚ್ಚು. ಇನ್ನು ಜ್ಯೋತಿಷ, ಶಾಸ್ತ್ರ- ಶಕುನ ಇಂಥದ್ದರಲ್ಲೇ ಹೆಚ್ಚಿನ ನಂಬಿಕೆ ಇರುವ ರೇವಣ್ಣ ತಮಗೊಬ್ಬರು ಒಳ್ಳೆ ಮಾಧ್ಯಮ ಸಲಹೆಗಾರರು ಹಾಗೂ ಸೋಷಿಯಲ್ ಮೀಡಿಯಾ ಹ್ಯಾಂಡ್ಲರ್ ಬೇಕು ಎಂದು ಯೋಚಿಸುತ್ತಾರೋ ಇಲ್ಲವೋ, ಆದರೆ ಜ್ಯೋತಿಷಿಗಳನ್ನೇ ಹೆಚ್ಚು ಅವಲಂಬಿಸುತ್ತಾರೆ. ಆದ್ದರಿಂದ ಹೀಗೆ ಹೆಂಡತಿ ಭವಾನಿ ತಿರುಪತಿಗೆ, ಗಂಡ ರೇವಣ್ಣ ಸತತವಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಮಾಡಿಸುತ್ತಿದ್ದರೆ. ಇದರ ಹಿಂದಿನ ಕಾರಣಗಳು ಹುಡುಕುವುದು ಬಲು ಸುಲಭವಾಗುತ್ತದೆ.