ಹಾಸನ: ರಾಜ್ಯದಲ್ಲಿಯೇ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಹಾಸನ ವಿಧಾನಸಭಾ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಲ್ಲಿನ ಅಭ್ಯರ್ಥಿಗಳ ಟಿಕೆಟ್ ಘೋಷಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ.
ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಏಳು ವಿಧಾನ ಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ನಾಳೆ ಅಂತಿಮಗೊಳಿಸಿ ಫೆ. ೪ರಂದು ಪಟ್ಟಿ ಬಿಡುಗಡೆ ಮಾಡುವ ಕುರಿತು ಎಚ್ ಡಿ ಕುಮಾರಸ್ವಾಮಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಕಲೇಶಪುರ ಆಲೂರು ಕ್ಷೇತ್ರದ ಶಾಸಕ ಎಚ್ ಕೆ ಕುಮಾರಸ್ವಾಮಿ ತಿಳಿಸಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಗಿಟ್ಟಿಸಲು ಸ್ವರೂಪ್ ಪ್ರಕಾಶ್ ಮತ್ತು ಭವಾನಿ ರೇವಣ್ಣ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ಎಚ್ ಡಿ ಕುಮಾರಸ್ವಾಮಿ ಅವರ ಕೃಪೆ ಯಾರ ಮೇಲೆ ಬೀಳಲಿದೆ ಎಂಬುದು ನೋಡಬೇಕಿದೆ.
ಭವಾನಿ ರೇವಣ್ಣ ಅವರು ತೀವ್ರ ಪೈಪೋಟಿಯೊಂದಿಗೆ ಕುಟುಂಬಸ್ಥರಾದ ಕುಮಾರಸ್ವಾಮಿ ಅವರ ಮನವೊಲಿಸಿ ಟಿಕೆಟ್ ಗಿಟ್ಟಿಸಿಕೊಳ್ಳುತ್ತಾರೋ ಅಥವಾ ಎಚ್ ಡಿ ಕುಮಾರಸ್ವಾಮಿ ಅವರ ಹಿಂದಿನ ಹೇಳಿಕೆಗೆ ಬದ್ಧರಾಗಿ ದೃಢ ನಿರ್ಧಾರ ಕೈಗೊಂಡು ಸ್ವರೂಪ್ ಅವರಿಗೆ ಟಿಕೆಟ್ ಕೃಪೆ ತೋರುವರೆ ಎಂಬುದು ಕುತೂಹಲವಾಗಿದೆ .
ಹಲವು ವರ್ಷಗಳಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂಬ ಮಹಾದಾಸೆ ಹೊಂದಿರುವ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಸಿಗದಿದ್ದರೆ ಮುಂದಿನ ನಡೆ ಏನಾಗಲಿದೆ ಎಂಬ ಬಗ್ಗೆಯೂ ಗಂಭೀರ ಚರ್ಚೆಗಳು ಸಾರ್ವಜನಿಕ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ.
ಪ್ರತಿ ಬಾರಿಯೂ ಪತ್ರಿಕಾಗೋಷ್ಠಿಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳುತ್ತಿರುವ ಕುಮಾರಸ್ವಾಮಿ ಅವರು ಈ ಒಂದು ಕಠಿಣ ನಿರ್ಧಾರವನ್ನು ಯಾವ ರೀತಿ ಪ್ರಕಟಿಸಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಒಂದೆಡೆ ಭವಾನಿ ರೇವಣ್ಣ ಅವರು ಹಾಸನ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಭೇಟಿ ನೀಡುತ್ತಿದ್ದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೂ ಫುಲ್ ಆಕ್ಟಿವ್ ಆಗಿ ಓಡಾಡುತ್ತಿರುವ ಅವರೊಂದಿಗೆ ಮಕ್ಕಳಾದ ಪ್ರಜ್ವಲ್ ಹಾಗೂ ಸೂರಜ್ ಸಾತ್ ನೀಡುತ್ತಿದ್ದು ಟಿಕೆಟ್ ದೊರೆಯುವ ವಿಶ್ವಾಸದಲ್ಲಿ ಇದ್ದಾರೆ.
ಒಂದು ವೇಳೆ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಪಡೆಯುವಲ್ಲಿ ವಿಫಲವಾದರೆ ಬೇರೆ ಕ್ಷೇತ್ರದಲ್ಲಿ ನಿಲ್ಲುವಂತೆ ಭವಾನಿ ಅವರಿಗೆ ಮನವೊಲಿಸುವ ಪ್ರಯತ್ನವನ್ನು ಜೆಡಿಎಸ್ ವರಿಷ್ಠರು ಮಾಡಲಿದ್ದಾರೆಯೇ ಎಂಬ ಬಗ್ಗೆಯೂ ಚರ್ಚೆಗಳು ಪ್ರಾರಂಭವಾಗಿದೆ.
ಕೆಎಂಶಿ- ಎಟಿಆರ್ ಬದಲಿಗೆ ಯಾರು..?
ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಗೊಂದಲ ಮುಂದುವರೆದಿರುವಾಗಲೇ ಅರಸೀಕೆರೆ- ಅರಕಲಗೂಡು ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರ ಪಕ್ಷಾಂತರಕ್ಕೆ ಹೊಸದಾಳ ಉರುಳಿಸಲು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಯಾವ ರೀತಿ ತಂತ್ರಗಾರಿಕೆ ಮಾಡಲಿದ್ದಾರೆ ಎಂಬುದು ಕುತೂಹಲವಾಗಿದೆ.
ಈಗಾಗಲೇ ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಮುನ್ಸೂಚನೆ ನೀಡಿರುವ ಕೆ.ಎಂ ಶಿವಲಿಂಗೇಗೌಡ ಹಾಗೂ ಅರಕಲಗೂಡಿನ ಹಾಲಿ ಶಾಸಕರಾದ ಎ.ಟಿ ರಾಮಸ್ವಾಮಿ ಈ ಇಬ್ಬರು ಶಾಸಕರಿಗೆ ಸೆಡ್ಡು ಹೊಡೆಯಲು ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎಚ್ ಡಿ ಕೆ ಅವರ ನಿರ್ಧಾರ ಪ್ರಮುಖ ಪಾತ್ರ ವಹಿಸಲಿದೆ.
ಈಗಾಗಲೇ ಅರಸೀಕೆರೆಯಲ್ಲಿ ಸಭೆಗಳ ಮೇಲೆ ಸಭೆ ನಡೆಸುತ್ತಿರುವ ರೇವಣ್ಣ ಕುಟುಂಬ ಮತ್ತೆ ಅರಸೀಕೆರೆ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಶತಾಯಗತಾಯ ಹೋರಾಟ ನಡೆಸುತ್ತಿದ್ದಾರೆ. ಅರಸೀಕೆರೆ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿರುವ ರೇವಣ್ಣ ,ಪ್ರಜ್ವಲ್ ಹಾಗೂ ಸೂರಜ್ ಹಲವು ಸುತ್ತಿನ ಸಭೆಗಳನ್ನು ನಡೆಸುತ್ತಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ. ಇನ್ನೂ ಅರಕಲಗೂಡು ಕ್ಷೇತ್ರಕ್ಕೆ ಎಟಿಆರ್ ಬದಲು ಮಾಜಿ ಸಚಿವ ಎ ಮಂಜು ಅವರನ್ನು ಜೆಡಿಎಸ್ ಗೆ ಕರೆತರಲು ಸಿದ್ಧತೆಗಳು ನಡೆದಿದ್ದು ಈಗಾಗಲೇ ಮಂಜು ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ.
ಎ.ಮಂಜು ಜೆಡಿಎಸ್ ಸೇರುವ ಬಗ್ಗೆ ಅವರ ಆಪ್ತರು ದೃಢಪಡಿಸಿದ್ದು ಹಾಸನ ಜಿಲ್ಲೆಯ ಮಟ್ಟಿಗೆ ಅರಕಲಗೂಡು ಅರಸೀಕೆರೆ ಮತ್ತು ಹಾಸನ ವಿಧಾನಸಭಾ ಕ್ಷೇತ್ರ ಟಿಕೆಟ್ ಹಂಚಿಕೆ ತೀವ್ರ ಕುತೂಹಲ ಕೆರಳಿಸಿದ್ದು ಫೆ.೪ ರ ಎಚ್.ಡಿಕೆ ಪಟ್ಟಿ ಬಿಡುಗಡೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.