ಹಾಸನ: ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಜೆಡಿಎಸ್ ಟಿಕೆಟ್ ಇನ್ನೂ ಸಹ ಅಂತಿಮವಾಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಪಿ ಸ್ವರೂಪ್ ಸ್ಪಷ್ಟಪಡಿಸಿದ್ದಾರೆ.
ನಿನ್ನೆ ನಡೆದಂತ ಸಮಾರಂಭ ಒಂದರಲ್ಲಿ ಭವಾನಿ ರೇವಣ್ಣ ಅವರು ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ನಾನೇ ಎಂದು ಬಹಿರಂಗವಾಗಿ ಹೇಳಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸ್ವರೂಪ್ ಅವರು ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆ ಸಂಬಂಧ ವರಿಷ್ಠರಾದ ಎಚ್ ಡಿ ರೇವಣ್ಣ ಅವರು ಇದುವರೆಗೂ ಅಧಿಕೃತವಾಗಿ ಘೋಷಣೆಗಳನ್ನು ಮಾಡಿಲ್ಲ.
ಹಾಸನ ಜಿಲ್ಲೆಯ ಹಾಲಿ ಶಾಸಕರ ಕ್ಷೇತ್ರಗಳನ್ನು ಹೊರತುಪಡಿಸಿ ಹಾಸನ , ಅರಸೀಕೆರೆ, ಅರಕಲಗೂಡು ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಅಂತಿಮಗೊಳಿಸುವ ಸಂಬಂಧ ಆಯಾ ಕ್ಷೇತ್ರದ ಪಕ್ಷದ ಮುಖಂಡರು ವರಿಷ್ಠರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದರು.
ಭವಾನಿ ಅವರ ಹೇಳಿಕೆ ನಂತರ ಸ್ನೇಹಿತರು ಹಿತೈಷಿಗಳು ನನಗೂ ಸಹ ಕರೆ ಮಾಡಿ ಕೇಳುತ್ತಿದ್ದಾರೆ ಆದರೆ ಟಿಕೆಟ್ ಘೋಷಣೆ ಸಂಬಂಧ ಜೆಡಿಎಸ್ ವರಿಷ್ಠರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ನನಗೆ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಅವರಿಗೆ ತಿಳಿಸಲಾಗಿದೆ. ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.
ಎಲ್ಲ ಗೊಂದಲಗಳ ನಡುವೆ ಬೇರೆ ಪಕ್ಷಕ್ಕೆ ಸ್ಪರ್ಧಿಸುವ ಇಚ್ಛೆ ಹೊಂದಿದ್ದೀರ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಎಚ್ .ಡಿ ದೇವೇಗೌಡರು ಹಾಗೂ ರೇವಣ್ಣ ಅವರ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇದ್ದು ನಮ್ಮ ತಂದೆ ಎಚ್ ಎಸ್ ಪ್ರಕಾಶ್ ಅವರಿಗೆ ನಾಲ್ಕು ಬಾರಿ ಶಾಸಕರಾಗಲು ಅವಕಾಶ ಮಾಡಿಕೊಟ್ಟರು ಆರು ಬಾರಿ ಟಿಕೆಟ್ ಅನ್ನು ನೀಡಿದ್ದಾರೆ ಅವರ ಸಾವಿನ ನಂತರವೂ ಬೆಂಬಲವಾಗಿ ನಿಂತಿರುವ ರೇವಣ್ಣ ಅವರು ಸಕ್ರಿಯವಾಗಿ ರಾಜಕೀಯದಲ್ಲಿ ಮುಂದುವರೆದಂತೆ ಹಲವು ಬಾರಿ ತಿಳಿಸಿದ್ದರು.
ಕಳೆದ ಎರಡು ಮೂರು ತಿಂಗಳಿಂದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಸಂಬಂಧ ಓಡಾಟ ನಡೆಸುತ್ತಿದ್ದು ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಗೆಲುವು ಶತಸಿದ್ಧ ಜೆಡಿಎಸ್ ವರಿಷ್ಠರು ನನಗೆ ಟಿಕೆಟ್ ನೀಡುವ ಬಗ್ಗೆ ಭರವಸೆ ಇದೆ ಎಂದರು.