ಹಾಸನ: ತಮ್ಮ ವಿರುದ್ದ ಬಿಜೆಪಿ ವಕ್ತಾರ, ಆರ್.ಟಿ.ಐ ಕಾರ್ಯಕರ್ತ ರಮೇಶ್ ಎಂಬಾತ ಮಾಡಿರುವ ೨೫೦ ಕೋಟಿ ಅಕ್ರಮದ ಹಿಂದೆ ಅರಸೀಕೆರೆ ಬಿಜೆಪಿ ಅಭ್ಯರ್ಥಿಯಾಗಲು ಅವಣಿಸುತ್ತಿರುವ ವ್ಯಕ್ತಿಯ ಷಡ್ಯಂತ್ರ ಅಡಗಿದ್ದು ನಾನು ಯಾವುದೇ ಅಕ್ರಮ ಮಾಡಿದ್ದರೆ ಎಂತಹದ್ದೇ ತನಿಖೆ ನಡೆಸಲಿ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಸವಾಲು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಕ್ಷೇತ್ರದಲ್ಲಿ ಎತ್ತಿನಹೊಳೆ ಯೋಜನೆ ಅಡಿಯಲ್ಲಿ ಕೆರೆ, ಕಟ್ಟೆ, ಬದು ಮಾಡಬೇಕಾದ ಅನುದಾನದಲ್ಲಿ ಸುಮಾರು ೧೫೦ ಕೋಟಿ ಅನುದಾನವನ್ನು ಅರಸೀಕೆರೆ ರಸ್ತೆಗೆ ಅಕ್ರಮವಾಗಿ ಬಳಸಿಕೊಂಡಿದ್ದಾರೆಂದು ಬಿಜೆಪಿ ವಕ್ತಾರ ರಮೇಶ್ ದೂರಿದ್ದಾರೆ.
ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ನನ್ನನ್ನು ಏ.೧ ಆರೋಪಿ ಎಂದು ಹೆಸರಿಸಿದ್ದಾರೆ. ಆದರೆ ಈವರೆಗೆ ಎತ್ತಿನ ಹೊಳೆ ಯೋಜನೆಯಿಂದ ನನ್ನ ಕ್ಷೇತ್ರಕ್ಕೆ ಸರ್ಕಾರದಿಂದ ಅತೀ ಹೆಚ್ಚು ಎಂದರೆ ೭೫ರಿಂದ ೮೦ ಕೋಟಿ ಮಾತ್ರ ಅನುದಾನ ಬಂದಿರಬಹುದು.
ನನ್ನ ಕ್ಷೇತ್ರಕ್ಕೆ ಎತ್ತಿನಹೊಳೆ ಯೋಜನೆಯಡಿ ರಸ್ತೆ ನಿರ್ಮಿಸಲು ನಾನು ಕೇವಲ ಶಾಸಕನಾಗಿ ಸರ್ಕಾರದ ಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ ಅರ್ಜಿ ಕೊಟ್ಟಿರಬಹುದು ಅಷ್ಟೇ. ! ಆದರೆ ನನ್ನ ಪತ್ರದ ಮೇಲೆ ಸರ್ಕಾರದ ಸಚಿವರು, ಮಂತ್ರಿಗಳು ಆದೇಶ ಮಾಡಿರಿರುತ್ತಾರೆ.
ಅಧಿಕಾರಗಳು ಸರ್ಕಾರದ ನಿರ್ದೇಶನದಂತೆ ಯೋಜನೆ ರೂಪಿಸಿ ಅನುದಾನ ಬಿಡುಗಡೆ ಮಾಡಿರುತ್ತಾರೆ. ಹೀಗಿರುವಾಗ ನಾನು ಹೇಗೆ ಅಕ್ರಮ ಹೆಸಗಲು ಸಾಧ್ಯವೆಂದು ಪ್ರಶ್ನಸಿದ ಅವರು ಇಂತಹ ಯೋಜನೆಗಳಿಂದ ನನ್ನ ಕ್ಷೇತ್ರದ ಹಳ್ಳಿ ಹಳ್ಳಿಯಲ್ಲಿ ರಸ್ತೆ ನಿರ್ಮಿಸಿದ್ದೇನೆ. ದೂರು ನೀಡಿರುವವರಿಗೆ ಸ್ಥಳೀಯ ಗಿರಾಕಿ ಬೆಂಬಲಿಗರು ದಾಖಲೆ ಒದಗಿಸಿ ಅದನ್ನೇ ಅಧಿಕೃತವೆಂದು ಬಿಂಬಿಸಲು ಮುಂದಾಗಿದ್ದಾರೆ. ಇಂಹವರಿಗೆ ಸೂಕ್ತ ರೀತಿ ಕಾನೂನು ಉತ್ತರ ನೀಡುವೆ ಎಂದರು.
ಇನ್ನು ನರೇಗಾ ಯೋಜನೆಯಲ್ಲಿಯೂ ನನ್ನ ಕ್ಷೇತ್ರಕ್ಕೆ ೭೫ ರಿಂದ ೮೦ ಕೋಟಿ ಅನುದಾನ ಇಲ್ಲಿಯವರೆಗೆ ಬಂದಿದೆ. ಅದನ್ನು ಸಹ ನಿಷ್ಪಕ್ಷಪಾತವಾಗಿ ಕೆಲಸ ನಿರ್ವಹಿಸಿದ್ದೇನೆ. ಕಾಮಗಾರಿ ನಡೆಸಿದ್ದೇವೆ. ಆದರೆ ದೂರುದಾರ ರಮೇಶ್ ಮಾತ್ರ ೧೫೦ ಕೋಟಿ ಅಕ್ರಮ ಎಂದು ಬಿಂಬಿಸಿದ್ದಾರೆ. ಅದನ್ನು ಅವರು ಸಾಬೀತು ಪಡಿಸಬೇಕೆಂದು ಸವಾಲು ಹಾಕಿದರು.
ರಾಜ್ಯ ಸರ್ಕಾರದಲ್ಲಿಯೇ ನೀರಾವರಿ ಯೋಜನೆಗಳಾದ ಎತ್ತಿನಹೊಳೆ, ಭದ್ರಾ ಯೋ ಜನೆ, ಭದ್ರಾ ಮೇಲ್ದಂಡೆ ಯೋಜನೆ , ಕಾವೇರಿ ಹೀಗೆ ಹತ್ತಾರು ಯೋಜನೆಗಳಿಂದ ಕ್ಷೇತ್ರಕ್ಕೆ ಅನುದಾನ ತಂದು ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ ಎಂದ ಶಿವಲಿಂಗೇಗೌಡ ಅವರು ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ರು ಸಹ ಎತ್ತಿನ ಹೊಳೆ ಅನುದಾನ ತಂದೆ ಅವರ ಕ್ಷೇತ್ರ ದಲ್ಲಿ ರಸ್ತೆ ಮಾಡಿಸಿದ್ದಾರೆ. ಈ ಬಗ್ಗೆ ಸರ್ಕಾರದ ಆಡಳಿತದಲ್ಲಿಯೇ ಉಲ್ಲೇಖವಿದೆ ಎಂದರು.
ನನ್ನ ವಿಧಾನಸಭಾ ಕ್ಷೇತ್ರದಲ್ಲಿ ಕಾನೂನಾತ್ಮಕವಾಗಿ ಎಲ್ಲಾ ಕಾಮಗಾರಿಗಳು ನಡೆದಿದ್ದು ಆರೋಪ ಮಾಡಿರುವ ವ್ಯಕ್ತಿಗಳ ವಿರುದ್ಧ ಮುಂದಿನ ದಿನ ನ್ಯಾಯಾಲಯದಲ್ಲಿ ಮಾನನಷ್ಟ ಮುಕದ್ದಮೆ ದಾಖಲಿಸಲಾಗುವುದು, ನನ್ನ ವಿರುದ್ಧ ಲೋಕಾಯುಕ್ತ ತನಿಖೆಗೆ ಅರ್ಜಿ ಯನ್ನು ಸಲ್ಲಿಸಿದ್ದು ಲೋಕಾಯುಕ್ತ ತನಿಖೆಯಲ್ಲಿ ಆರೋಪ ಮುಕ್ತವಾಗುವುದು ಶತಸಿದ್ಧ ಎಂದರು.
ರಾಜ್ಯ ಸೇರಿದಂತೆ ದೇಶದಲ್ಲಿ ಆರ್ ಟಿಐ ಕಾಯ್ದೆ ದುರುಪಯೋಗವಾಗುತ್ತಿದ್ದು ಮುಂದಿನ ದಿನಗಳಲ್ಲಿ ಪಕ್ಷದ ಯಾವುದೇ ಕಾರ್ಯ ಕರ್ತರಿಗೂ ಆರ್ ಟಿಐ ಅಡಿ ಮಾಹಿತಿ ಒದಗಿಸುವ ಕಾನೂನನ್ನು ತಿದ್ದುಪಡಿ ಮಾಡಬೇಕು ಎಂದು ಮನವಿ ಮಾಡುವುದಾಗಿ ಹೇಳಿದರು.
ಆರ್.ಡಿ.ಪಿ.ಆರ್ ಇಂಜಿನಿಯರ್ ರಮೇಶ್ ಅವರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಲಾಡ್ಜ್ ಗೆ ಆಗಮಿಸಿ, ಬಿಜೆಪಿಯ ಸಂತೋಷ್ ಬೆಂಬಲಿಗರಾದ ಕಾಟೀಕೆರೆ ಮೋಹನ್, ಬೈರೇಗೌಡನಹಳ್ಳಿ ಉಮೇಶ್ ಎಂಬಿ ಬುಕ್ ಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಮೂಲಕ ಅರಸೀಕೆರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಪಡಿಸುವ ಇರಾದೆ ಬಿಜೆಪಿ ಅಭ್ಯರ್ಥಿಯದ್ದಾಗಿದೆ ಎಂದು ದೂರಿದರು.
ನನ್ನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸ ತಡೆಗಟ್ಟಲು ಇಂತಹ ಕುತಂತ್ರ ಮಾಡಿದ್ದು, ಇದರಿಂದ ನನ್ನ ಕ್ಷೇತ್ರದಲ್ಲಿ ಆಗಬೇಕಾದ ಕಾಮಗಾರಿಗಳಿಗೆ ಹಾಗೂ ಬಿಲ್ಲ ಮೊತ್ತ ಬಿಡುಗಡೆಗೆ ತೊಡಕ್ಕಾಗಿದ್ದು ಈ ಸಂಬಂಧ ಇಂಜಿನಿಯರ್ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ ಎಂದರು.
ನನ್ನ ವಿರುದ್ಧ ದೂರು ಮತ್ತು ಆರೋಪದ ಹಿಂದೆ ಬಿಜೆಪಿ ಅಭ್ಯರ್ಥಿಯ ಕೈವಾಡ ಸ್ಪಷ್ಟವಾಗಿದೆ ಎಂದ ಅವರು ಬಿಜೆಪಿ ವಕ್ತಾರನಿಗೆ ತಾಕತ್ತಿದ್ದರೆ ರಾಜ್ಯದ ಎಲ್ಲಾ ಶಾಸಕರು ನೀರಾವರಿ ಯೋಜನೆಗಳ ಅನುದಾನದಲ್ಲಿ ಎಷ್ಟು ಅನುದಾನ ಕ್ಷೇತ್ರದ ರಸ್ತೆಗಳಿಗೆ ಬಳಸಿದ್ದಾರೆ ಎಂದು ದೂರು ನೀಡಲಿ. ಸರ್ಕಾರವೇ ಇಂ ತಹ ಯೋಜನೆಗಳ ಅನುದಾನದಲ್ಲಿ ರಸ್ತೆ ಅಭಿ ವೃದ್ಧಿಗೆ ಅವಕಾಶ ನೀಡಿರುವಾಗ ನನ್ನ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದು ಮಾತ್ರ ಅಸಮಂಜಸವೆಂದು ಹೇಳಿದರು.
ನಾನು ಏನೇ ಅನುದಾನ ತಂದಿದ್ದರೂ ಅದು ನನ್ನ ಕ್ಷೇತ್ರದ ಅಭಿವೃದ್ದಿಗೆ ತಂದಿದ್ದೇನೆ. ಏನೇ ಅನುದಾನ ಬಳಸಿದರೂ ನನ್ನ ಕ್ಷೇತ್ರಕ್ಕೆ ಬಳಸಿದ್ದೇನೆ ಎಂದ ಅವರು ಸರ್ಕಾರದ ಅನುದಾನವನ್ನು ಮನೆಗೆ ತೆಗೆದುಕೊಂಡು ಹೋಗಿಲ್ಲ. ದೂರು ನೀಡುವುದಾದರೆ ಮೊದಲು ಯೋಜನೆಗಳಿಗೆ , ಕಡತಗಳಿಗೆ ಸಹಿ ಹಾಕಿರುವ ಅಧಿಕಾರಿಗಳು ಸಚಿವರು,ಮುಖ್ಯಮಂತ್ರಿ ವಿರುದ್ದ ದೂರು ನೀಡಲಿ ಎಂದು ಸವಾಲು ಹಾಕಿದರು.