ಹಾಸನ: ಪ್ರಸಕ್ತ ವರ್ಷ ಶಕ್ತಿದೇವತೆ ಹಾಸನಾಂಬೆ ಉತ್ಸವ ಸಂಪನ್ನಗೊಂಡಿದೆ. ನವೆಂಬರ್ 2ರಿಂದ 14 ದಿನಗಳ ಕಾಲನಡೆದ ಹಾಸನಾಂಬೆ ಉತ್ಸವಕ್ಕೆ ಇಂದು(ನ.15) ವಿದ್ಯುಕ್ತವಾಗಿ ತೆರೆ ಕಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಜಿಲ್ಲಾಧಿಕಾರಿ ಸೇರಿದಂತೆ ಹಲವರ ಸಮ್ಮುಖದಲ್ಲಿ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಬಂದ್ ಮಾಡಲಾಯ್ತು.
ಹಾಸನಾಂಬೆಗೆ ಮಾಡಲಾಗಿದ್ದ ಅಲಂಕಾರ ತೆರವುಗೊಳಿಸಿ ಬಳಿಕ ಅರ್ಚಕ ನಾಗರಾಜ್ ಪೂಜೆ ಮಾಡಿ ಗರ್ಭಗುಡಿ ಬಾಗಿಲಿಗೆ ಬೀಗ ಹಾಕಿದರು. ಮುಂದಿನ ವರ್ಷವೇ ಹಾಸನಾಂಬೆ ದೇಗುಲ ಓಪನ್ ಆಗಲಿದೆ. ಮುಂದಿನ ವರ್ಷ ಅಂದರೆ 2024ರ ಅಕ್ಟೋಬರ್ 24 ರಿಂದ ನವೆಂಬರ್ 3 ರ ವರೆಗೆ ಹಾಸನಾಂಬೆ ದರ್ಶನೋತ್ಸವದ ದಿನಾಂಕ ನಿಗದಿ ಮಾಡಲಾಗಿದೆ.
ಇನ್ನು, ಕಳೆದ 12 ದಿನಗಳಲ್ಲಿ 13 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದು 5.80 ಕೋಟಿ ರೂ. ಆದಾಯ ಹರಿದು ಬಂದಿದೆ. ಇದೇ ಮೊದಲ ಬಾರಿಗೆ ಸಾಗರೋಪಾದಿಯಲ್ಲಿ ಬಂದ ಭಕ್ತ ಸಮೂಹ ಶಕ್ತಿದೇವತೆಯನ್ನ ಕಣ್ತುಂಬಿಕೊಂಡರೆ ಸಾರ್ವಜನಿಕ ದರ್ಶನದ ಕೊನೆಯ ದಿನವಾದ ಮಂಗಳವಾರ ಹಲವು ಶಾಸಕರು, ಮಾಜಿ ಸಚಿವರುಗಳು ಹಾಗೂ ಅಧಿಕಾರಿಗಳು ದೇವಿ ದರ್ಶನ ಪಡೆದು ಪುನೀತರಾದರು.