ಹಾಸನ: ಜಗತ್ ಪ್ರಸಿದ್ಧ ಹಾಸನಾಂಬ ಜಾತ್ರೆ ಈ ಬಾರಿ ಪ್ರತಿಭಟನೆಗೆ ಸಾಕ್ಷಿಯಾಗಿದೆ. ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಶಾಸಕರನ್ನು ಕಡೆಗಣಿಸಿ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಹಾಸನಾಂಬ ದೇವಾಲಯದ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್, ‘ಜಿಲ್ಲಾಧಿಕಾರಿಗಳು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದು, ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ತಮ್ಮನ್ನು ಕಡೆಗಣಿಸಿದ್ದಾರೆ. ಜಿಲ್ಲಾಧಿಕಾರಿ ನಡವಳಿಕೆಯಿಂದ ಜೆಡಿಎಸ್ ಕಾರ್ಯಕರ್ತರು ಹಾಗೂ ನಗರಸಭೆ ಸದಸ್ಯರು ಅಸಮಾಧಾನಗೊಂಡಿದ್ದು ಪ್ರತಿಭಟನೆಗೆ ಕಾರಣ ಎಂದರು.
‘ದೇವಾಲಯದ ನೂತನ ಕಳಸ ಪ್ರತಿಷ್ಠಾಪನೆಗೂ ನನ್ನನ್ನು ಆಹ್ವಾನಿಸಿಲ್ಲ. ದೇವಾಲಯದಲ್ಲಿ ಜಿಲ್ಲಾಧಿಕಾರಿಗಳು ಪತಿಯೊಂದಿಗೆ ಹೋಮ ಹವನ ಮಾಡಿದ್ದು, ತಮ್ಮ ಸಂಬಂಧಿಕರನ್ನು ಕರೆದು ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮವನ್ನು ಮಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಧಾರ್ಮಿಕ ಇಲಾಖೆ ಆಗಮಿಕರು ಹೇಳಿದಂತೆ ಧಾರ್ಮಿಕ ಕಾರ್ಯಕ್ರಮ ಮಾಡಲಾಗಿದೆ ಎಂದು ಉತ್ತರಿಸಿದರು.
ಜಿಲ್ಲಾಧಿಕಾರಿ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಸ್ವರೂಪ್ ಕಳಸ ಪ್ರತಿಷ್ಠಾ ಶಾಸ್ತ್ರೋಕ್ತವಾಗಿ ನಡೆಯಬೇಕು. ಶೃಂಗೇರಿ ಶ್ರೀಗಳನ್ನು ಕರೆಸಿ ಹೋಮ ಹವನ ಮಾಡಬೇಕು ಎಂದು ತಮ್ಮ ತಂದೆ ಎಚ್. ಸಿ ಪ್ರಕಾಶ್ ಕಾಲದಲ್ಲಿ ನಡೆದಿದ್ದ ಕಲಶ ಪೂಜೆ ಚಿತ್ರ ಪ್ರದರ್ಶಿಸಿದರು. ಈ ವೇಳೆ ಕೆಲಕಾಲ ಭಾರಿ ವಾಗ್ವಾದ ನಡೆಯಿತು. ನಂತರ ಸ್ಥಳದಿಂದ ಜಿಲ್ಲಾಧಿಕಾರಿ ತೆರಳಿದರು.