ಹಳೆಕೋಟೆ: ಕಳೆದ ಅನೇಕ ವರ್ಷದಿಂದ ಹಳೆಕೋಟೆ ಗ್ರಾಮದಲ್ಲಿದ್ದ ಸ್ಮಶಾನ ಜಾಗ ಒತ್ತುವರಿ ಮಾಡಿಕೊಂಡಿದ್ದ ಹಿನ್ನಲೆಯಲ್ಲಿ ಶವ ಸಂಸ್ಕಾರ ಮಾಡಲು ಜಾಗದ ಕೊರತೆಯಿಂದಾಗಿ ನಿಧನ ಹೊಂದಿದ ಹಳೆಕೋಟೆ ಗ್ರಾಮದ ಮಂಜುಳ (೪೬) ಎಂಬುವರ ಶವವನ್ನು ಸ್ಮಶಾನದ ಮುಂದಿಟ್ಟುಕೊಂಡು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ೧೯೯೩ರಲ್ಲಿ ಹಳೆಕೋಟೆ ಗ್ರಾಮದ ಸರ್ವೆ ನಂ ೫೨ರಲ್ಲಿ ೩.೧೦ ಎಕರೆ ಜಾಗ ಸ್ಮಶಾನಕ್ಕಾಗಿ ಜಾಗ ಮಂಜೂರು ಮಾಡಲಾಗಿತ್ತು. ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಈಗ ಕೇವಲ ೨೦ ಗುಂಟೆ ಜಾಗ ಮಾತ್ರ ಉಳಿಸಿದ್ದಾರೆ. ಕಳೆದ ೬ ತಿಂಗಳಿಂದ ಸ್ಮಶಾನ ಜಾಗ ಒತ್ತುವರಿ ಬಿಡಿಸಿಕೊಡುವಂತೆ ತಾಲೂಕು ಕಚೇರಿ ಎದುರು ಅನೇಕ ಬಾರಿ ಪ್ರತಿಭಟನೆ ನಡೆಸಲಾಗಿದೆ. ಅಧಿಕಾರಿಗಳ ಪೊಳ್ಳು ಭರವಸೆಯಿಂದ ಸ್ಮಶಾನ ಭೂಮಿ ಬಿಡಿಸಿಕೊಡಲು ಇಂದಿಗೂ ಸಾಧ್ಯವಾಗಿಲ್ಲ.
ಈಗ ಗ್ರಾಮದಲ್ಲಿ ಯಾರೇ ನಿಧನ ಹೊಂದಿದರೂ ಶವ ಸಂಸ್ಕಾರ ಮಾಡಲು ಜಾಗ ಇಲ್ಲದಂತಾಗಿದೆ. ಹಾಗಾಗಿ ಈ ಬಗ್ಗೆ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಸ್ಮಶಾನಕ್ಕಾಗಿ ಮಂಜೂರಾಗಿದ್ದ ಒತ್ತುವರಿಯನ್ನು ಬಿಡಿಸಿ ಶವ ಸಂಸ್ಕಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಬಳಿಕ ಸ್ಥಳಕ್ಕೆ ಕಂದಾಯ ರಾಜಸ್ವ ನಿರೀಕ್ಷರ ಕೃಷ್ಣಕುಮಾರ್ ಆಗಮಿಸಿ ಇನ್ನು ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಗ್ರಾಮಸ್ಥರು ಇನ್ನು ಒಂದು ವಾರ ಮಾತ್ರ ಕಾಯುತ್ತೇವೆ. ಸಮಸ್ಯೆ ಬಗೆಹರಿಸದಿದ್ದರೆ ಮುಂದೆ ಗ್ರಾಮದಲ್ಲಿ ಯಾರೇ ನಿಧನ ಹೊಂದಿದರೂ ತಾಲೂಕು ಕಚೇರಿ ಎದುರು ಶವವಿಟ್ಟು ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.