News Karnataka Kannada
Thursday, May 02 2024
ಹಾಸನ

ಹಾಸನ ರಾಜಕೀಯ ಅಖಾಡಕ್ಕಿಳಿದ ದೇವೇಗೌಡ್ರು

Deve Gowda enters Hassan political arena
Photo Credit : News Kannada

ಹಾಸನ: ಕಳೆದ ಎರಡು ಮೂರು ದಿನಗಳಿಂದ ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿಚಾರ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ರೇವಣ್ಣ ಪತ್ನಿ ಭವಾನಿ ರೇವಣ್ಣ ಹಾಸನ ಕ್ಷೇತ್ರದ ಅಭ್ಯರ್ಥಿ ನಾನೇ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದರು. ಆದರೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹಾಸನದಲ್ಲಿ ಸೂಕ್ತ ಅಭ್ಯರ್ಥಿ ಇದ್ದಾರೆ, ಅಲ್ಲಿಗೆ ಭವಾನಿ ರೇವಣ್ಣರನ್ನು ಅಭ್ಯರ್ಥಿಯನ್ನಾಗಿ ಮಾಡುವ ಅನಿವಾರ್ಯತೆ ಇಲ್ಲ ಎಂದು ಹೇಳಿದ್ದರು. ಕುಮಾರಸ್ವಾಮಿ ಈ ರೀತಿ ಹೇಳಿಕೆ ನೀಡುತ್ತಿದ್ದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಕುಮಾಸ್ವಾಮಿ ಅಥವಾ ರೇವಣ್ಣ ಆಗಲಿ ಬಿ ಫಾರ್ಮ್ ನೀಡುವುದಿಲ್ಲ, ಚುನಾವಣೆಗೆ ಬಿ ಫಾರ್ಮ್ ನೀಡುವವರು ಎಚ್‌ಡಿ ದೇವೇಗೌಡರು ಎಂದು ಹೇಳಿದ್ದರು.

ಈಗಾಗಲೇ ಕುಟುಂಬ ರಾಜಕಾರಣದ ಹಣೆಪಟ್ಟಿ ಹೊತ್ತುಕೊಂಡಿ ರುವ ದೇವೇಗೌಡರ ಕುಟುಂಬಕ್ಕೆ ಹಾಸನ ಟಿಕೆಟ್ ಗೊಂದಲ ದೊಡ್ಡ ತಲೆ ನೋವು ತಂದಿತ್ತು. ಇದೀಗ ಈ ವಿವಾದವನ್ನು ಕೊನೆಗೊಳಿಸಲು ಸ್ವತಃ ಜೆಡಿಎಸ್ ವರಿಷ್ಠ ದೇವೇಗೌಡರೇ ಎಂಟ್ರಿ ಕೊಟ್ಟಿದ್ದು, ಹಾಸನ ಟಿಕೆಟ್ ವಿಚಾರವನ್ನು ಫೈನಲ್ ಮಾಡುತ್ತೇನೆ, ಇದರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ಎಂದಿದ್ದಾರೆಂದು ತಿಳಿದುಬಂದಿದೆ.

ಕಾರ್ಯಕರ್ತರಲ್ಲಿ ಗೊಂದಲ: ಹಾಸನ ಟಿಕೆಟ್ ವಿಚಾರವಾಗಿ ನಡೆಯುತ್ತಿರುವ ಗೊಂದಲಗಳನ್ನು ದೇವೇಗೌಡರ ಆಪ್ತರ ಗಮನಕ್ಕೆ ತಂದಿದ್ದಾರೆ. ದೊಡ್ಡಗೌಡರು ಹಾಸನದಲ್ಲಿ ತಮ್ಮದೇ ಆದ ಆಪ್ತ ಬಳಗವನ್ನ ಹೊಂದಿದ್ದಾರೆ. ಹಾಸನ ಜಿಲ್ಲೆ ಜೆಡಿಎಸ್ ಭದ್ರಕೋಟೆಯಾಗಿದೆ. ಇದೀಗ ಹಾಸನ ಟಿಕೆಟ್ ವಿಚಾರದಲ್ಲಿ ರೇವಣ್ಣ ಕುಟುಂಬ ಮತ್ತು ಕುಮಾರಸ್ವಾಮಿ ನಡುವಿನ ಹೇಳಿಕೆಗಳು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿವೆ ಎಂಬ ವಿಚಾರ ವನ್ನುಆಪ್ತರು ದೇವೇಗೌಡರ ಗಮನಕ್ಕೆ ತಂದಿದ್ದಾರೆ.
ಟಿಕೆಟ್ ಘೋಷಣೆಯಾಗಿಲ್ಲ: ಈಗಾಗಲೆ ೨೦೨೩ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಹಾಸನ ಕ್ಷೇತ್ರದ ಅಭ್ಯರ್ಥಿಯನ್ನ ಇನ್ನೂ ಘೋಷಣೆ ಮಾಡಿಲ್ಲ. ಇದರ ಬಗ್ಗೆ ಮಾತನಾಡಿದ್ದ ಕುಮಾರಸ್ವಾಮಿ ಅವರು, ಹಾಸದ ವಿಚಾರವನ್ನು ರೇವಣ್ಣ ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಭವಾನಿ ರೇವಣ್ಣ ಹಾಸನದಲ್ಲಿ ನಾನೇ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡಿದ್ದರು. ಆದರೆ ಕುಮಾರಸ್ವಾಮಿ ಭವಾನಿ ರೇವಣ್ಣರಿಗೆ ಟಿಕೆಟ್ ಸಿಗುವುದಿಲ್ಲ, ಅಲ್ಲಿ ಬೇರೆ ಅಭ್ಯರ್ಥಿ ಇದ್ದಾರೆ ಎಂದಿದ್ದರು.

ಸ್ವರೂಪ್‌ಗೆ ಅನುಕಂಪದ ಬೆಂಬಲ: ಹಾಸನ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ಎಚ್.ಎಸ್.ಪ್ರಕಾಶ್ ೨೦೧೮ರ ಚುನಾವಣೆಯಲ್ಲಿ ಪ್ರೀತಂ ಗೌಡ ವಿರುದ್ಧ ಸೋಲು ಕಂಡ ಬಳಿಕ ನಿಧನರಾಗಿದ್ದರು. ಇದೀಗ ಅವರ ಪುತ್ರ ಎಚ್.ಪಿ.ಸ್ವರೂಪ್ ಹಾಸನದ ಟಿಕೆಟ್ ಅಕಾಂಕ್ಷೆಯಾಗಿದ್ದಾರೆ. ಅಲ್ಲದೆ ಇವರಿಗೆ ಅನುಕಂಪದ ಅಲೆ ಇದೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಕಳೆದ ಚುನಾವಣೆ ಗೆದ್ದ ನಂತರ ಪ್ರೀತಂ ಗೌಡ ಕ್ಷೇತ್ರದಲ್ಲಿ ಮತ್ತಷ್ಟು ಪ್ರಾಬಲ್ಯ ಸಾಧಿಸಿದ್ದಾರೆ. ಹಾಗಾಗಿ ಸ್ವರೂಪ್‌ಗಿಂತಲೂ ಜಿಲ್ಲೆಯಲ್ಲಿ ಪ್ರಾಬಲ್ಯವಿರುವ ದೇವೇಗೌಡರ ಕುಟುಂಬಸ್ಥರನ್ನು ನಿಲ್ಲಿಸಬೇಕೆಂದು ಕೆಲವು ಜೆಡಿಎಸ್ ನಾಯಕರ ಅಭಿಪ್ರಾಯವಾಗಿದೆ.

ದೊಡ್ಡ ಗೌಡರ ಕುಟುಂಬದೊಳಗೆ ಮುಸುಕಿನ ಗುದ್ದಾಟ
ಹಾಸನ ಟಿಕೆಟ್ ವಿಚಾರವಾಗಿ ಕುಮಾರಸ್ವಾಮಿ ಮತ್ತು ರೇವಣ್ಣ ಕುಟುಂಬದ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿರುವ ವಿಚಾರವನ್ನು ಆಪ್ತರು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿದ ಕೂಡಲೇ ದೇವೇಗೌಡರು ಗೊಂದಲಕ್ಕೆ ತೆರೆ ಎಳೆಯಲು ಮುಂದಾಗಿದ್ದು, ಹಾಸನ ಟಿಕೆಟ್ ವಿಚಾರವನ್ನು ನಾನೇ ಫೈನಲ್ ಮಾಡುತ್ತೇನೆ. ಹಾಸನಕ್ಕೆ ಬಂದು ಗೊಂದಲಕ್ಕೆ ತೆರೆ ಎಳೆಯುತ್ತೇನೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಹಿಂದೆ ಸರಿಯುವ ಸಾಧ್ಯತೆ
ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಭವಾನಿ ರೇವಣ್ಣರಿಗೆ ಟಿಕೆಟ್ ಕೊಟ್ಟರೆ ಹಾಸನ ಟಿಕೆಟ್ ಅಕಾಂಕ್ಷೆಯಾಗಿರುವ ಸ್ವರೂಪ್‌ರ ಬೆಂಬಲಿಗರು ಪಕ್ಷದಿಂದ ದೂರ ಸರಿಯುವ ಸಾಧ್ಯತೆ ಕೂಡ ಇದೆ. ಒಂದು ವೇಳೆ ಸ್ವರೂಪ್‌ಗೆ ಟಿಕೆಟ್ ಕೊಟ್ಟರೆ ರೇವಣ್ಣ ಕುಟುಂಬ ತಟಸ್ಥವಾಗುವ ಸಾಧ್ಯತೆ. ಇದು ಕ್ಷೇತ್ರದಲ್ಲಿನ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದೆ. ಹಾಸನ ಟಿಕೆಟ್ ಹಂಚಿಕೆ ಗೊಂದಲ ಇಡೀ ಪಕ್ಷದ ಮೇಲೆ ಪರಿಣಾಮ ಬೀರುವ ಆತಂಕವಿದ್ದು, ಸಾಧ್ಯವಾದಷ್ಟು ಬೇಗ ಈ ಗೊಂದಲಕ್ಕೆ ತೆರೆ ಎಳೆದರೆ ಸೂಕ್ತ ಎಂದು ದೇವೇಗೌಡರಿಗೆ ಹಾಸನ ಜಿಲ್ಲೆಯ ಆಪ್ತರು ಮನವಿ ಮಾಡಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು