ಹಾಸನ: ಹಾಸನದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿದಲ್ಲದೆ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಅಷ್ಟೇ ಅಲ್ಲದೆ ಹಾಸನ ಕಾರಾಗೃಹದಲ್ಲಿ ಗಾಂಜಾ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಅವರು, ಮೊಬೈಲ್ ಕಳ್ಳತನ, ದೇವಸ್ಥಾನದ ಹುಂಡಿ ಕಳವು ಹಾಗೂ ಮನೆಗಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಇಬ್ಬರೂ ಆರೋಪಿಗಳನ್ನು ಬಂಧಿಸಿ ಅವರಿಂದ ಕಳವು ಆದ ಚಿನ್ನಾಭರಣ, ಮೊಬೈಲ್ ಹಾಗೂ ನಗದುಗಳನ್ನು ವಶಪಡಿಸಿಕೊಳ್ಳುವಲ್ಲಿ ಅರಸೀಕೆರೆ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿರುವುದಾಗಿ ತಿಳಿಸಿದ್ದಾರೆ.
ಅಲ್ಲದೆ, ಕ್ರೈಂ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ಸೇರಿ ನಾವುಗಳು ಹಾಸನದ ಜಿಲ್ಲಾ ಕಾರಗೃಹ ಪರಿಶೀಲಿಸಿದಾಗ 20 ಗ್ರಾಂ ಗಾಂಜಾ ಮತ್ತು ಮೊಬೈಲ್ ದೊರಕಿರುವುದಾಗಿ ತಿಳಿಸಿದ್ದಾರೆ.
ಅರಸೀಕೆರೆ ನಗರ ಠಾಣೆಯ ಪೊಲೀಸರು ಮೊಬೈಲ್ ಕಳ್ಳತನ, ದೇವಸ್ಥಾನ ಹುಂಡಿ ಕಳ್ಳತನ, ಮನೆಗಳ್ಳತನ ಮಾಡಿದ ಅಂತರ್ ಜಿಲ್ಲಾ ಆರೋಪಿಗಳಿಬ್ಬರ ಬಂಧಿಸಿ ಅವರಿಂದ ಮೊಬೈಲ್ ಗಳು, ಚಿನ್ನಾಭರಣ, ನಗದು ಸೇರಿದಂತೆ ಸುಮಾರು 18 ಲಕ್ಷ ಬೆಲೆಯ 90 ಮೊಬೈಲ್ ಗಳು, 61 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ 30,300 ನಗದು ವಶಪಡಿಸಿಕೊಳ್ಳಲಾಗಿರುವುದಾಗಿ ತಿಳಿಸಿದ್ದಾರೆ.
ಅರಸೀಕೆರೆ ನಗರದಲ್ಲಿ ಇತ್ತೀಚೆಗೆ ಸಾರ್ವಜನಿಕ ಜನಸಂದಣಿ ಪ್ರದೇಶಗಳಾದ ಬಸ್ ನಿಲ್ದಾಣ, ಜನನಿಬಿಡ ಪ್ರದೇಶಗಳಲ್ಲಿ ಸಾರ್ವಜನಿಕರ ಮೊಬೈಲ್ ಫೋನ್ ಗಳು ಕಾಣೆಯಾಗುತ್ತಿರುವ ಬಗ್ಗೆ ಹಾಗೂ ನಗರದ ದೇವಸ್ಥಾನಗಳಲ್ಲಿ ದೇವರ ಹುಂಡಿ ಒಡೆದು ಹಣ ದೋಚುವ ಪ್ರಕರಣಗಳು ಮತ್ತು ಮನೆಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಈ ಸಂಬಂಧ ಸೂಕ್ಷ್ಮತೆಯನ್ನು ಅರಿತು ಅಪರ ಪೊಲೀಸ್ ಅಧೀಕ್ಷಕರಾದ ಬಿ.ಎನ್. ನಂದಿನಿ ರವರ ಮಾರ್ಗದರ್ಶನದಂತೆ ಅರಸೀಕೆರೆ ನಗರದಲ್ಲಿ ಕಟ್ಟುನಿಟ್ಟಿನ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸಲು ಮತ್ತು ಕಳ್ಳತನದ ಜಾಲವನ್ನು ಭೇದಿಸಿ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿತ್ತು.
ಅರಸೀಕೆರೆ ಉಪ ವಿಭಾಗದ ಡಿವೈಎಸ್ಪಿ ಅಶೋಕ್ ರವರ ನೇತೃತ್ವದಲ್ಲಿ ಅರಸೀಕೆರೆ ನಗರ ಪೊಲೀಸ್ ಠಾಣೆ ಪಿ.ಐ. ಸೋಮೇಗೌಡ, ಅರಸೀಕೆರೆ ನಗರ ಪೊಲೀಸ್ ಠಾಣೆ ಪಿಎಸ್ಐ ಭಾರತಿ ರಾಯನಗೌಡರ್ ಮತ್ತು ಸಿಬ್ಬಂದಿಗಳನ್ನೊಳಗೊಂಡಂತೆ ಪತ್ತೆ ಕಾರ್ಯದಲ್ಲಿ ಮಾರ್ಚ್ 3ರ ರಂದು ಬೆಳಗಿನ ಜಾವ ಅರಸೀಕೆರೆ ರೈಲ್ವೆ ಸ್ಟೇಷನ್ ರಸ್ತೆಯಲ್ಲಿದ್ದ ಆರೋಪಿಗಳಾದ ಬೆಂಗಳೂರು ನಗರದ ಸಂತೆ ಮಾರ್ಕೆಟ್ ಹತ್ತಿರ ಹೊಸಕೋಟೆಯ ಆನಂದ(35) ಹಾಗೂ ಬೆಂಗಳೂರಿನ ರೈಲ್ವೆ ಸ್ಟೇಷನ್ ಹತ್ತಿರ ಬಿಡದಿಯ ಚಂದ್ರು(35) ಎಂಬುವವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಲಾಗಿದ್ದು, ಈ ವೇಳೆ ಹಲವು ಪ್ರಕರಣಗಳು ಬಯಲಿಗೆ ಬಂದಿರುವುದಾಗಿ ಹೇಳಿದ್ದಾರೆ.