ಹಾಸನ: ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಪರ್ಯಾಯವಾಗಿ ಜೆಡಿಎಸ್ ಪಕ್ಷ ರಾಜ್ಯದಲ್ಲಿಸಂಘಟನೆಗೊಳ್ಳಲಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದರು. ಈ ಎರಡು ರಾಷ್ಟ್ರೀಯ ಪಕ್ಷಗಳ ಬಸ್ ಖಾಲಿ ಇದೆ ಎಂದು ಟೀಕಿಸಿದರಲ್ಲದೆ, ಅಧಿಕಾರದಲ್ಲಿದ್ದಾಗ ಎರಡು ರಾಷ್ಟ್ರೀಯ ಪಕ್ಷಗಳು ಮೇಕೆದಾಟು ವಿಚಾರ ಏಕೆ ಪ್ರಸ್ತಾಪಿಸಿಲ್ಲ? ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದರೆ ಅದಕ್ಕೆ ಕಾಂಗ್ರೆಸ್ ನೇರ ಹೊಣೆ ಎಂದರು. ಕೃಷ್ಣ ನಡೆ ಅಂತಿದ್ರು ಕಳೆದ ಮೂರು ವರ್ಷಗಳಿಂದ ಏನಾಗಿದೆ ಅನ್ನೋದು ನನಗೆ ಗೊತ್ತಿದ್ದು, ಕಾಲ ಬಂದಾಗ ಸೂಕ್ತ ಉತ್ತರ ನೀಡುತ್ತೇನೆ ಎಂದರು.
ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಬೀದಿ ವ್ಯಾಪಾರಿಗಳು ಬೀದಿ ಪಾಲಾಗಿದ್ದರೂ ಸರಕಾರವು ಇವರ ಬಗ್ಗೆ ಯಾವ ಕಾಳಜಿ ತೋರಿಸುತ್ತಿಲ್ಲ ಎಂದು ದೂರಿದ ಅವರು, ಜೆಡಿಎಸ್ ಗೆ ಕುಟುಂಬ ರಾಜಕಾರಣ ಅಂತಾರೆ. ಆದ್ರೆ ಎರಡು ರಾಷ್ಟ್ರೀಯ ಪಕ್ಷಗಳಲ್ಲಿ ಯಾವ ರಾಜಕಾರಣ ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅಲ್ಲಿನ ಕೆಲ ಮುಖಂಡರಗಳು ಸರ್ಕಾರದ ಜಾಗ ನುಂಗಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಬಂದ್ಮೇಲೆ ಯಡಿಯೂರಪ್ಪ ಅವರು ದ್ವೇಷದ ರಾಜಕಾರಣ ಮಾಡೋದಿಲ್ಲ ಅಂತಾ ಹೇಳಿದ್ದರು. ಬಿಜೆಪಿ ಸರ್ಕಾರದ ವಿರುದ್ಧ ನಮ್ಮ ಪಕ್ಷ ಹಲವು ಹೋರಾಟ ಮಾಡಿದ್ದೆವು. ನಮ್ಮ ಸರ್ಕಾರ ಇದ್ದಾಗ ಜೆಲ್ಲೆಗೆ ಆಗಬೇಕಾದ ಕೆಲಸಗಳನ್ನ ನಾವು ಮಾಡಿದ್ದೇವೆ. ಇಲ್ಲಿ ಅಧಿಕಾದಲ್ಲಿರೋ ಅಧಿಕಾರಿಗಳು ರಾಜ್ಯದ ವಿವಿಧ ಮೂಲೆಗಳಿಂದ ಬಂದಿದ್ದಾರೆ. ಸರ್ಕಾರ ಹಾಸನ ಜಿಲ್ಲೆಗೆ ನೀಡಬೇಕಾದ ಅನುದಾನಗಳನ್ನು ಇದುವರೆಗೂ ನೀಡುತ್ತಿಲ್ಲ. ಯಡಿಯೂರಪ್ಪನವರ ಕಾಲದಲ್ಲಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿತ್ತು.
ನಮ್ಮ ಜಿಲ್ಲೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ನನಗೆ ಗೊತ್ತಿದೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ನನಗೆ ಗೊತ್ತಿದೆ. ನಾನು ಶಾಸಕನಾಗಿ, ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಕಾನೂನಿನ ವಿರುದ್ಧವಾಗಿ ಯಾವುದೇ ಕೆಲಸ ಕಾರ್ಯಗಳು ಮಾಡಬೇಡಿ ಎಂದು ಇದೇ ವೇಳೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.