ಹಾಸನ : ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಇದೇ ವಿಚಾರವಾಗಿ ಆಡಳಿತ ಹಾಗೂ ವಿಪಕ್ಷ ನಾಯಕರು ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.
ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಜನರ ಹೃದಯಕ್ಕೆ ಸಿನಿಮಾ ಹತ್ತಿರವಾಗುವಂತೆ ಮಾಡಲು ಭಾವನಾತ್ಮಕ ಟಚ್ ನೀಡುತ್ತಾರೆ. ಹತ್ಯಾಕಾಂಡಗಳು ಮಹಾಭಾರತ, ಕುರುಕ್ಷೇತ್ರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಸ್ವಾತಂತ್ರ್ಯ ಬಂದಾಗ, ದೇಶ ವಿಭಜನೆಯಂತಹ ಘಟನೆ ನಡೆದಾಗ 20 ಲಕ್ಷ ಕುಟುಂಬಗಳ ಬಲಿದಾನವಾಯಿತು. ಇಂತಹ ಚರಿತ್ರೆಗಳು ಮತ್ತೆ ಮುಂದುವರೆಯಬಾರದು ಎಂಬುದು ನನ್ನ ಅಭಿಪ್ರಾಯ.
ನೋವು ಹೇಳಿಕೊಳ್ಳುವುದು, ಸಿನಿಮಾ ತೆಗೆಯುವುದು ಎಲ್ಲವೂ ನಡೆಯುತ್ತಿದೆ. ಆದರೆ ಎಷ್ಟರ ಮಟ್ಟಿಗೆ ಅಂತಹ ಘಟನೆ ನಡೆದಿದೆ ಎಂಬುದನ್ನು ನಾನು ಹೋಗಿ ನೋಡಿಲ್ಲ. ಯಾವುದೇ ಸಿನಿಮಾ ಎಮೋಷ್ನಲಿ ಸಕ್ಸಸ್ ಆಗಬೇಕು ಎಂಬ ಕಾರಣಕ್ಕೆ ಹೃದಯಕ್ಕೆ ಹತ್ತಿರವಾಗುವಂತೆ ಕಥಾಹಂದರ, ಚಿತ್ರಗಳನ್ನು ಮಾಡುತ್ತಾರೆ. ಗೋಧ್ರಾದಲ್ಲಿ ಗರ್ಭಿಣಿ ಹೊಟ್ಟೆಗೆ ತ್ರಿಶೂಲ ಚುಚ್ಚಿ ಮಗು ಹೊರೆತೆಗೆದ ದೃಶ್ಯವೂ ನಡೆದಿದೆ. ಇಂಥಹ ಘಟನೆಗಳು ಮತ್ತೆ ಮರುಕಳಿಸುವಂತಾಗಬಾರದು.
ಇತ್ತೀಚೆಗೆ ಅಭಿವೃದ್ಧಿ ಆಧಾರದ ಮೇಲೆ ಜನರ ಬಳಿ ವೋಟ್ ಕೇಳುವ ಕೆಲಸ ನಡೆಯುತ್ತಿಲ್ಲ. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ವೋಟ್ ಕೇಳುವುದು ಅಜೆಂಡಾ ಆಗಿದೆ. ಹೀಗಾದರೆ ಮುಂದೆ ಅಮಾಯಕರು ಪ್ರಾಯಶ್ಚಿತ್ತ ಪಡಬೇಕಾಗುತ್ತೆ. ಅಧಿಕಾರ ಶಾಶ್ವತ ಅಲ್ಲ, ಯಾವ ವಂಶವೂ ಉಳಿದುಕೊಂಡೂ ಇಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ ಇರುವಾಗ ಜನರೇ ತೀರ್ಮಾನ ಮಾಡಬೇಕು ಎಂದು ಹೇಳಿದರು.
ಹಿಜಾಬ್ ವಿಚಾರವಾಗಿಯೂ ಮಾತನಾಡಿದ ಕುಮಾರಸ್ವಾಮಿ, ಶಾಲಾ ಮಕ್ಕಳ ಮನಸ್ಸನ್ನು ಕಲುಷಿತ ಮಾಡಲಾಗುತ್ತಿರುವುದು ಯಾಕೆ? ಸಮವಸ್ತ್ರ ಗೊಂದಲ ಪರಿಹಾರಕ್ಕೆ ಸರ್ಕಾರ ಪ್ರಯತ್ನಿಸಬೇಕು ಅದನ್ನು ಬಿಟ್ಟು ಅನಗತ್ಯ ಗೊಂದಲಗಳನ್ನು ಸೃಷ್ಟಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.