ಮೈಸೂರು: ಶಿಕ್ಷಣವೊಂದಿದ್ದರೆ ಜೀವನದಲ್ಲಿ ಎಂಥಾ ಸಮಸ್ಯೆಗಳಿದ್ದರೂ ಎದುರಿಸಿ ಏನು ಬೇಕಾದರೂ ಸಾಧಿಸಬಹುದಾಗಿದ್ದು ಸರ್ವ ಸಮಸ್ಯೆಗಳಿಗೂ ಶಿಕ್ಷಣವೇ ಸಿದ್ಧೌಷಧಿಯಾಗಿದೆಯೆಂದು ಸಾಹಿತಿ ಬನ್ನೂರು ಕೆ. ರಾಜು ಅಭಿಪ್ರಾಯಪಟ್ಟರು.
ನಗರದ ಒಂಟಿಕೊಪ್ಪಲಿನ ಸರ್ಕಾರಿ ಪ್ರೌಢಶಾಲೆ ಮತ್ತು ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗದ ಸಂಯುಕ್ತ ಆಶ್ರಯದಲ್ಲಿ ಪ್ರಸ್ತುತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿತರಾದ ವಿವಿಧ ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ಶಾಲೆಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ಅವರು ಏನೇ ಕಷ್ಟವಿದ್ದರೂ ಎಂಥಾ ತೊಂದರೆ ಬಂದರೂ ಶಿಕ್ಷಣದಿಂದ ಯಾರೂ ದೂರವಾಗಬಾರದೆಂದರು.
ಮುಂದಿನ ವಿದ್ಯಾಭ್ಯಾಸದ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಹೆಚ್ಚೆಚ್ಚು ಅಂಕಗಳು ಬೇಕು ನಿಜ. ಆದರೆ ಅಂಕಗಳೇ ಜೀವನವಲ್ಲ. ಹಾಗಾಗಿ ಅಂಕಗಳ ಜತೆ ವಿದ್ಯಾರ್ಥಿ ದೆಸೆಯಲ್ಲಿಯೇ ಮಾನವೀಯ ಗುಣಗಳುಳ್ಳ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಅವುಗಳನ್ನು ಬೆಳೆಸಿಕೊಳ್ಳುತ್ತಾ ಹೋಗಬೇಕು. ಇದು ಸ್ಪರ್ಧಾ ಜಗತ್ತಾದ್ದರಿಂದ ಅಂಕಗಳ ವೇಗದ ಸ್ಪರ್ಧೆಯಲ್ಲಿ ನಮ್ಮ ನೆಲದ ಮೌಲ್ಯಾಧಾರಿತ ಸಂಸ್ಕೃತಿಯನ್ನು ಎಂದಿಗೂ ಕಡೆಗಣಿಸಬಾರದೆಂದ ಅವರು, ವಿದ್ಯಾರ್ಥಿಗಳ ಸುಂದರ ಭವಿಷ್ಯ ಇರುವುದೇ ಮಾನವೀಯ ಸಂಸ್ಕೃತಿಯುಳ್ಳ ಸನ್ನಡತೆಯ ಬದುಕಿನಲ್ಲಾದ್ದರಿಂದ ಇದು ಅವರ ಜೀವನ ಪಾಠ ವಾಗಬೇಕೆಂದು ಹೇಳಿದರು.
ಸಂಸ್ಕೃತಿ ಚಿಂತಕ ರಘುರಾಮ್ ವಾಜಪೇಯಿ ಅವರು, ಸಾಧನೆ ಎಂದರೆ ವೃತ್ತಾಕಾರವಿದ್ದಂತೆ. ಇಲ್ಲಿ ಒಮ್ಮೆ ಒಬ್ಬರು ಸಾಧಕರಾದರೆ ಮತ್ತೊಮ್ಮೆ ಇನ್ನೊಬ್ಬರು ಸಾಧಕರಾಗುತ್ತಾರೆ. ಈ ವೃತ್ತ ದೊಳಗೆ ಪ್ರತಿಯೊಬ್ಬರಿಗೂ ಅವಕಾಶವುಂಟು. ಹಾಗಾಗಿ ನಮ್ಮ ಕೈಯಲ್ಲಿ ಇದು ಸಾಧ್ಯವಾಗದೆಂಬ ಕೀಳರಿಮೆಯಿಂದ ವಿದ್ಯಾರ್ಥಿಗಳು ಹೊರ ಬಂದು ಸಾಧಕರಾಗಲು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು.
ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷರೂ ಆದ ಶಿಕ್ಷಣತಜ್ಞ ಎ.ಸಂಗಪ್ಪ ಮತ್ತು ಕಾವೇರಿ ಬಳಗದ ಅಧ್ಯಕ್ಷೆಯೂ ಆದ ಖ್ಯಾತ ಸಮಾಜಸೇವಕಿ ಎನ್.ಕೆ. ಕಾವೇರಿಯಮ್ಮ ಅವರು ಉನ್ನತ ಶ್ರೇಣಿತ ವಿದ್ಯಾರ್ಥಿಗಳಾದ ಕುಂಬಾರಕೊಪ್ಪಲಿನ ಸರ್ಕಾರಿ ಪ್ರೌಢಶಾಲೆಯ ಎಂ.ಕಾವ್ಯ, ವಿನಾಯಕ ನಗರ ಸರ್ಕಾರಿ ಪ್ರೌಢಶಾಲೆಯ ಆರ್.ಮಮತಾ, ಒಂಟಿಕೊಪ್ಪಲು ಸರ್ಕಾರಿ ಪ್ರೌಢಶಾಲೆಯ ಅನುಷಾ ಹಾಗೂ ಎಂ.ಅನುಷಾ ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.
ಹಿರಿಯ ಶಿಕ್ಷಕಿ ಪದ್ಮಜಾ ಅವರು ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಕಾದಂಬರಿಗಾರ್ತಿ ವಿಜಯಾ ಶಂಕರ, ಸಂಖ್ಯಾಶಾಸ್ತ್ರಜ್ಞ ಎಸ್.ಜೆ. ಸೀತಾರಾಮ್, ಓರಿಗಾಮಿ ತಜ್ಞ ಎಚ್.ವಿ. ಮುರಳಿಧರ್, ಶಿಕ್ಷಕರಾದ ಬಸವರಾಜು, ಸುರೇಶ್, ಭಾರತೀ ಶಾಸ್ತ್ರಿ, ಪದ್ಮಲತಾ ಮುಂತಾದವರು ಉಪಸ್ಥಿತರಿದ್ದರು.