ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದಿಂದ ವಿಶ್ವ ವಿಖ್ಯಾತ ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಹೊರಟ ಮೂರು ಆನೆಗಳ ಪೈಕಿ ರೋಹಿತ್ (17) ಮತ್ತು ಹಿರಣ್ಯ(47) ಎಂಬ ಎರಡು ಆನೆಗಳಿಗೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ದಸರಾ ಪಯಣಕ್ಕೆ ಗುರುವಾರ ಚಾಲನೆ ನೀಡಿದರು.
ಬಂಡೀಪುರ ರಾಷ್ಟ್ರೀಯ ಉದ್ಯಾನದ ಮದ್ದೂರು ಅರಣ್ಯ ವಲಯ ಕಚೇರಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ರಾಂಪುರ ಸಾಕಾನೆ ಶಿಬಿರದ ರೋಹಿತ್ ಮತ್ತು ಹಿರಣ್ಯ ಆನೆಗಳಿಗೆ ಬಣ್ಣದ ಚಿತ್ತಾರ, ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಅರ್ಚಕರು ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಶಾಸಕ ಎಚ್.ಎಂ.ಗಣೇಶ್ಪ್ರಸಾದ್ ಕಬ್ಬು, ಬೆಲ್ಲ ತಿನಿಸಿ, ಪೂಜೆ ಸಲ್ಲಿಸುವ ಮೂಲಕ ಪುಷ್ಪಾರ್ಚನೆ ನೆರವೇರಿಸಿ ಗಜ ಪಯಣಕ್ಕೆ ಶುಭ ಕೋರಿ ಚಾಲನೆ ನೀಡಿದರು. ನಂತರ ಆನೆಗಳಿಂದ ಆರ್ಶೀವಾದ ಪಡೆದರು.
ಈ ವೇಳೆ ಮಾತನಾಡಿದ ಶಾಸಕ ಎಚ್.ಎಂ.ಗಣೇಶಪ್ರಸಾದ್, ಬಂಡೀಪುರದಿಂದ ನಾಡ ಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಮೂರು ಆನೆಗಳು ಹೋಗುತ್ತಿರುವುದು ಹೆಮ್ಮೆಯ ವಿಚಾರ. ಇಂದು ಸಾಂಪ್ರದಾಯಿಕವಾಗಿ ರೋಹಿತ ಮತ್ತು ಹಿರಣ್ಯ ಎಂಬ ಎರಡು ಆನೆಗಳಿಗೆ ಪೂಜೆ ಸಲ್ಲಿಸಿರುವುದು ಖುಷಿ ಕೊಟ್ಟಿದೆ. ಈ ಮೂಲಕ ದಸರಾ ಹಬ್ಬ ಯಶಸ್ವಿಯಾಗಲಿ ಎಂದು ಹಾರೈಸಿದರು.
ಬಂಡೀಪುರ ನೂತನ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಮಾತನಾಡಿ, ಬಂಡೀಪುರ ರಾಷ್ಟ್ರೀಯ ಉದ್ಯಾನದಿಂದ ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳಲಿರುವ ಸಾಕಾನೆಗಳು ಎಲ್ಲಾ ರೀತಿಯ ತರಬೇತಿ ನೀಡಲಾಗಿದೆ. ರಾಂಪುರ ಆನೆ ಶಿಬಿರದ ಸೌಮ್ಯ ಸ್ವಭಾವದ ಆನೆಗಳು ಯಶಸ್ವಿಯಾಗಿ ದಸರಾದಲ್ಲಿ ಭಾವವಹಿಸಿ ವಾಪಸ್ಸಾಗಲಿ ಎಂದು ಹಾರೈಸಿದರು.