ಚಾಮರಾಜನಗರ: ಪಟ್ಟಣದ ಪ್ರವಾಸಿ ಮಂದಿರದಿಂದ ಎತ್ತಿನ ಗಾಡಿಗಳ ಮೂಲಕ ಹೊರಟ ರೈತ ಸಂಘದ ಕಾರ್ಯಕರ್ತರು ಕೆ.ಎಸ್ ಆರ್ ಟಿ.ಸಿ ನಿಲ್ದಾಣದ ಬಳಿ ಕೆಲಹೊತ್ತು ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ ತಾಲ್ಲೂಕಿನಲ್ಲಿ ಹೈನುಗಾರಿಕೆಯು ಪ್ರಮುಖ ಉದ್ಯೋಗವಾಗಿರುವುದರಿಂದ ಪ್ರತಿ ಹಳ್ಳಿಯ ಜಾನುವಾರುಗಳಿಗೆ ಮೇವು ಒದಗಿಸಬೇಕು, ಕಬಿನಿಯಿಂದ ಎಲ್ಲಾ ಕೆರೆಗಳಿಗು ನೀರು ತುಂಬಿಸಬೇಕು, ಸಮಗ್ರ ನೀರಾವರಿಗೆ ಕಬಿನಿ 2 ನೇ ಹಂತ ಜಾರಿಗೊಳಿಸಬೇಕು ಹಾಗೂ ಹುತ್ತೂರು ಕೆರೆಯಿಂದ ಮುಂದಿನ 8 ಕೆರೆಗಳಿಗೆ ತಕ್ಷಣ ನೀರುತುಂ ಬಿಸುವುದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
2023-24 ನೇ ಪೂರ್ವ ಮುಂಗಾರಿನಲ್ಲಿ ರೈತರ ವಿವಿಧ ಬೆಳಗಳಿಗೆ ಪ್ರಧಾನಮಂತ್ರಿ ಫಸಲ್ಭೀಮಾ ಯೋಜನೆಯಲ್ಲಿ ಬೆಳೆ ವಿಮೆಯನ್ನು ಪಾವತಿ ಮಾಡಿದ್ದಾರೆ ಆದರೆ ತಾಲ್ಲೂಕನ್ನ ಬರಗಾಲ ಪ್ರದೇಶವೆಂದು ಘೋಷಣೆ ಮಾಡಿರುವುದರಿಂದ ಬೆಳೆ ವಿಮೆ ಪಾವತಿ ಮಾಡಿರುವ ರೈತರ ಖಾತೆಗೆ ಹಣ ಜಮಾ ಮಾಡಬೇಕು ಎಂದು ಆಗ್ರಹಿಸಿದರು.