ಚಾಮರಾಜನಗರ: ಗುತ್ತಿಗೆದಾರ ಪರವಾನಗಿ ಮಾಡಿಸಿಕೊಡಲು ಅರ್ಜಿದಾರರಿಂದ 7,500 ರೂ. ಲಂಚ ಪಡೆಯುತ್ತಿದ್ದ ಲೋಕೋಪಯೋಗಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ) ಗೋವಿಂದಯ್ಯ ಅವರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರ ಕೈಗೆ ಮಂಗಳವಾರ ಸಿಕ್ಕಿ ಬಿದ್ದಿದ್ದಾರೆ.
ತಾಲ್ಲೂಕಿನ ಅಟ್ಟುಗೂಳೀಪುರ ಗ್ರಾಮದ ನಿವಾಸಿಯೊಬ್ಬರು ಕ್ಲಾಸ್-4 ಗುತ್ತಿಗೆದಾರ ಪರವಾನಗಿ ಪಡೆಯಲು ನಗರದಲ್ಲಿರುವ ಚಾಮರಾಜನಗರ ವಿಭಾಗದ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ಎಸ್ಡಿಎ ಆಗಿರುವ ಗೋವಿಂದಯ್ಯ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಪರವಾನಗಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದ ಗೋವಿಂದಯ್ಯ ಅವರು, ಅಗತ್ಯ ದಾಖಲೆಗಳನ್ನು ತಂದುಕೊಡುವಂತೆ ತಿಳಿಸಿದ್ದರು.
ಪರವಾನಗಿ ಬಯಸಿದ್ದ ವ್ಯಕ್ತಿ ಜೂ. 13ರಂದು ಪೂರಕ ದಾಖಲೆಗಳೊಂದಿಗೆ ಗೋವಿಂದಯ್ಯ ಅವರನ್ನು ಸಂಪರ್ಕಿಸಿದ್ದರು. ಈ ಸಂದರ್ಭದಲ್ಲಿ ಪರವಾನಗಿ ಮಾಡಿಕೊಡಲು 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಷ್ಟು ದುಡ್ಡನ್ನೂ ಪಡೆದಿದ್ದರು. 20ರಂದು ಮತ್ತೆ 7,500 ನೀಡುವಂತೆ ಗೋವಿಂದಯ್ಯ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಅರ್ಜಿದಾರರು ಜೂನ್ 21ರಂದು ಬೆಳಿಗ್ಗೆ ಎಸಿಬಿ ಪೊಲೀಸರಿಗೆ ದೂರು ನೀಡಿದ್ದರು.
ಮಂಗಳವಾರ ಮಧ್ಯಾಹ್ನ ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಗೋವಿಂದಯ್ಯ ಅವರು ದೂರುದಾರರಿಂದ 7,500 ರೂ. ಲಂಚ ಪಡೆಯುತ್ತಿದ್ದಾಗ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಲಾಗಿದೆ. ಲಂಚವಾಗಿ ಪಡೆದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಎಸಿಬಿ ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್ಪಿ ಸದಾನಂದ ತಿಪ್ಪಣ್ಣವರ್, ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ್, ಹೆಡ್ ಕಾನ್ಸ್ಟೆಬಲ್ ಮಹೇಶ್, ಕಾನ್ಸ್ಟೆಬಲ್ಗಳಾದ ಸತೀಶ್, ಕೃಷ್ಣಕುಮಾರ್, ಮಹದೇವ್, ಕಾರ್ತಿಕ್, ನಾಗಲಕ್ಷ್ಮಿ ಸಿಬ್ಬಂದಿ ನಾಗೇಂದ್ರ, ಮಹದೇವಸ್ವಾಮಿ ಇದ್ದರು.