News Karnataka Kannada
Monday, April 29 2024
ಚಾಮರಾಜನಗರ

ಸ್ವಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಲು ಸಿದ್ದರಾಮಯ್ಯ ತಂತ್ರ

ತವರು ಕ್ಷೇತ್ರವಾಗಿರುವ ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದಕ್ಕೆ ಬೇಕಾದ ತಂತ್ರಗಳನ್ನು ಆರಂಭಿಸಿದ್ದಾರೆ.
Photo Credit : By Author

ಮೈಸೂರು: ತವರು ಕ್ಷೇತ್ರವಾಗಿರುವ ಮೈಸೂರು-ಕೊಡಗು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದಕ್ಕೆ ಬೇಕಾದ ತಂತ್ರಗಳನ್ನು ಆರಂಭಿಸಿದ್ದಾರೆ.

ಸದ್ಯ ವಿಶ್ರಾಂತಿ ನೆಪದಲ್ಲಿ ಮೂರು ದಿನ ಮೈಸೂರಿನಲ್ಲೇ ವಾಸ್ತವ್ಯ ಹೂಡಿರುವ ಸಿದ್ದರಾಮಯ್ಯ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ತಂತ್ರ ರೂಪಿಸುತ್ತಿದ್ದಾರೆ. ಈ ಬಾರಿ ಮೈಸೂರು-ಕೊಡಗು ಕ್ಷೇತ್ರವನ್ನು ಸಿಎಂ ಸಿದ್ದರಾಮಯ್ಯ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ನಾಗರಹೊಳೆ ರೆಸಾರ್ಟ್‌ನಲ್ಲಿ ಕ್ಷೇತ್ರ ವ್ಯಾಪ್ತಿಯ ನಾಯಕರ ಜತೆಗೆ ಸಭೆ ನಡೆಸಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದ ವ್ಯಾಪ್ತಿಗೆ ಸೇರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕ್ಷೇತ್ರಕ್ಕೊಂದು ರಣತಂತ್ರ ರೂಪಿಸಿದ್ದು, ಲೀಡ್ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.

ಜತೆಗೆ ಒಕ್ಕಲಿಗ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಈ ಮೂಲಕ ಒಕ್ಕಲಿಗ ಮತ ಕ್ರೂಢೀಕರಣದ ಪ್ಲಾನ್ ಹಾಕಿದ್ದಾರೆ. ಇದರ ಜೊತೆಗೆ ಅಹಿಂದ ಮತಗಳ ಕ್ರೂಢೀಕರಣ, ಪ್ರತಿ ಕ್ಷೇತ್ರದಲ್ಲಿ ಪ್ರಬಲ ಸಮುದಾಯ ಮುಖಂಡರಿಗೆ ಕ್ಷೇತ್ರವಾರು ಉಸ್ತುವಾರಿ ಕೊಡಲು ಯೋಜನೆ ರೂಪಿಸಿದ್ದಾರೆ.

ಮೈಸೂರು ಜಿಲ್ಲಾ ಸಚಿವ ಉಸ್ತುವಾರಿ ಹೆಚ್.ಸಿ.ಮಹದೇವಪ್ಪ, ಚಾಮರಾಜನಗರ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಹುಣಸೂರು ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಹಾಗೂ ಶಾಸಕ ಅನಿಲ್ ಚಿಕ್ಕಮಾದು ಒಡಗೂಡಿ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದು, ಎರಡೂ ಕ್ಷೇತ್ರಗಳನ್ನು ಗೆಲ್ಲಲೇ ಬೇಕು. ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಮತಗಳು ವಿಭಾಗ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.

ಚಾಮರಾಜನಗರ ಕ್ಷೇತ್ರದ ಜವಾಬ್ದಾರಿಯನ್ನು ಸಚಿವ ಮಹದೇವಪ್ಪ ಅವರ ಹೆಗಲಿಗೆ ಹಾಕಿದ್ದು, ಪುತ್ರ ಯತೀಂದ್ರಗೆ ವರುಣಾ, ಹೆಚ್.ಡಿ.ಕೋಟೆ, ನಂಜನಗೂಡು ಭಾಗದ ಜವಾಬ್ದಾರಿ ವಹಿಸಿದ್ದಾರೆ. ಇನ್ನು ಕೊಡಗು ಹಾಗೂ ಮೈಸೂರು ಗ್ರಾಮಾಂತರ ಭಾಗದ ಜವಾಬ್ದಾರಿಯನ್ನು ಕೆ.ವೆಂಕಟೇಶ್ ಅವರಿಗೆ ನೀಡಿದ್ದು, ಲಕ್ಷ್ಮಣ್ ಪರ ನಿಂತು ಸ್ಥಳೀಯರನ್ನು ಒಗ್ಗೂಡಿಸುವಂತೆ ತಿಳಿಸಿದ್ದಾರೆ.

ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾಂಗ್ರೆಸ್ ಮಾತ್ರವಲ್ಲದೆ ಬಿಜೆಪಿ-ಜೆಡಿಎಸ್ ನಾಯಕ ಸಾಮರ್ಥ್ಯವನ್ನೂ ಬಳಸಿಕೊಳ್ಳಲು ಯೋಜನೆ ರೂಪಿಸಿರುವ ಸಿದ್ದರಾಮಯ್ಯ ಅದಕ್ಕಾಗಿ ವಿರೋಧ ಪಕ್ಷಗಳ ಅಸಮಾಧಾನಿತ ನಾಯಕರಿಗೆ ಗಾಳ ಹಾಕಿದ್ದಾರೆ. ಇದರ ಮೊದಲ ಭಾಗವಾಗಿ ಬಿಜೆಪಿ ಮುಖಂಡ, ಮಾಜಿ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜೆಡಿಎಸ್ ಮುಖಂಡ ಕೆ.ವಿ.ಮಲ್ಲೇಶ್ ಕಾಂಗ್ರೆಸ್ ಸೇರುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು