ಚಾಮರಾಜನಗರ: ನೀರು ತರಲು ಹೋಗಿದ್ದ ಕ್ಯಾಂಪ್ ವಾಚರ್ ಮೇಲೆ ಪುಂಡಾನೆ ದಾಳಿ ನಡೆಸಿದ ಪರಿಣಾಮ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಇಂದು ನಡೆದಿದೆ.
ಗಾಯಗೊಂಡ ವ್ಯಕ್ತಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಸ್ತೂರು ಗ್ರಾಮದ ನಿವಾಸಿ ಗಣೇಶ ಕ್ಯಾಂಪ್ ವಾಚರ್ ಆಗಿದ್ದರು. ಕಾವೇರಿ ವನ್ಯಜೀವಿಧಾಮದ, ಕೌದಳ್ಳಿ ವಲಯ ವ್ಯಾಪ್ತಿಯ ಉಗನಿಯ ಎಪಿ ಕ್ಯಾಂಪ್ ನಲ್ಲಿದ್ದ ಗಣೇಶ್ ಅವರು ನೀರು ತರಲೆಂದು ಕ್ಯಾಂಪ್ ನಿಂದ ಹೊರ ಹೋಗಿದ್ದರು. ಈ ವೇಳೆ ದಿಢೀರ್ ಆಗಿ ಬಂದ ಕಾಡಾನೆ ಅವರ ಮೇಲೆ ದಾಳಿ ನಡೆಸಿದೆ. ಏಕಾಏಕಿ ನಡೆದ ದಾಳಿಗೆ ಹೆದರಿದ ಗಣೇಶ್ ಅವರು ಜೋರಾಗಿ ಚೀರಿ ಸಮೀಪದಲ್ಲಿಯೇ ಇದ್ದ ಸಿಬ್ಬಂದಿಗಳನ್ನು ಕೂಗಿದ್ದಾರೆ.
ತಕ್ಷಣ ವಲಯ ಅರಣ್ಯಾಧಿಕಾರಿ ಲೋಕೇಶ್ ಚೌಹಾಣ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ. ಅಷ್ಟರಲ್ಲೇ ಕಾಡಾನೆ ಅಲ್ಲಿಂದ ಪರಾರಿಯಾಗಿದ್ದು, ಗಾಯಗೊಂಡಿದ್ದ ಗಣೇಶ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಅರಣ್ಯ ಇಲಾಖೆಯ ಜೀಪ್ ಮೂಲಕ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ.