ಚಾಮರಾಜನಗರ: ಬೆಣ್ಣೆ ಹಣ್ಣಿಗೆ ಹೆಚ್ಚಿನ ಬೇಡಿಕೆಗಳಿರುವ ಕಾರಣ ಮತ್ತು ಚಾಮರಾಜನಗರ ಜಿಲ್ಲೆಯ ಹವಾಗುಣ ಹೊಂದಿಕೊಳ್ಳುವ ಸಾಧ್ಯತೆಯಿರುವುದರಿಂದ ಜಿಲ್ಲೆಯಲ್ಲಿ ಅದರ ಕೃಷಿಗೆ ಉತ್ತೇಜನ ನೀಡಲು ತೋಟಗಾರಿಕಾ ಇಲಾಖೆ ಮುಂದಾಗಿದ್ದು, 2023-24ನೇ ಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ರೈತರಿಗೆ ಸಹಾಯಧನ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಬೆಣ್ಣೆ ಹಣ್ಣು ಪ್ರದೇಶ ವಿಸ್ತರಣೆಗೆ ಪ್ರತಿ ಹೆಕ್ಟೇರ್ ಗೆ 18 ಸಾವಿರ ರೂ. ಗಳ ಸಹಾಯಧನ ನೀಡಲಾಗುವುದು. ನರೇಗಾ ಒಗ್ಗೂಡಿಸುವಿಕೆ ಯೋಜನೆಯಡಿಯಲ್ಲಿಯೂ ಕೂಲಿ ವೆಚ್ಚ ಪಡೆಯಬಹುದಾಗಿದೆ. ಚಾಮರಾಜನಗರ ಜಿಲ್ಲೆಯ ಭೌಗೋಳಿಕ ಸ್ಥಿತಿ-ಗತಿಗಳು ಈ ಬೆಣ್ಣೆ ಹಣ್ಣು ಬೆಳೆಯಲು ಸೂಕ್ತವಾಗಿರುವುದರಿಂದ ಬೆಣ್ಣೆ ಹಣ್ಣು ಪ್ರದೇಶ ವಿಸ್ತರಣೆ ಮಾಡಬಹುದಾಗಿದೆ. ಪ್ರಸ್ತುತ ದಿನಗಳಲ್ಲಿ ಬೆಣ್ಣೆ ಹಣ್ಣು ಕೃಷಿಗೆ ಅತೀ ಹೆಚ್ಚಿನ ಬೇಡಿಕೆ ಇದ್ದು, ಏಕ ಬೆಳೆಯಾಗಿ ಸಮತಟ್ಟಾದ ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ.
ಬೆಣ್ಣೆ ಹಣ್ಣು ಬೇರೆ ಹಣ್ಣುಗಳಿಗಿಂತ ಅತೀ ಹೆಚ್ಚು ಪೌಷ್ಠಿಕಾಂಶಗಳನ್ನು ಹೊಂದಿದ್ದು, ಹಲವಾರು ವಿಟಮಿನ್, ಖನಿಜಾಂಶಗಳ ಸಂಗ್ರಹವಲ್ಲದೆ ಅತೀ ಹೆಚ್ಚು ಶಕ್ತಿಯ (245 ಕಿ.ಕ್ಯಾಲರಿ/ 100 ಗ್ರಾಂ) ಮೂಲವಾಗಿದೆ. ಇದರ ತಿರುಳು ಹೆಚ್ಚಿನ ಪ್ರೋಟಿನ್ ಮತ್ತು ಕೊಬ್ಬಿನಾಂಶವನ್ನು (ಶೇ.3ರಷ್ಟು) ಹೊಂದಿದ್ದು, ಕಾರ್ಬೋಹೈಡ್ರೈಟ್ ಗಳ ಪ್ರಮಾಣ ಕಡಿಮೆ ಇರುತ್ತದೆ. ಬೆಣ್ಣೆ ಹಣ್ಣು ತಿನ್ನುವುದರಿಂದ ಕಣ್ಣಿನ ಆರೋಗ್ಯಕ್ಕೆ ಅವಶ್ಯಕತೆಯಿರುವ ಬಣ್ಣದ ಕ್ಯಾರೋಟಿನಾಯ್ಡ್ ಗಳನ್ನು ಹೀರಿಕೊಳ್ಳುವುದಕ್ಕೆ ಸಹಕರಿಸುತ್ತದೆ. 2ನೇ ಹಂತದ ಸಕ್ಕರೆ ಕಾಯಿಲೆ/ಮಧುಮೇಹ ಇರುವವರು ಸೇವಿಸುವುದರಿಂದ ಗ್ಲೂಕೋಸ್ ಪ್ರಮಾಣವನ್ನು ನಿಯಂತ್ರಿಸುತ್ತದೆ. ತೂಕ ನಿರ್ವಹಣೆಯಲ್ಲೂ ಸಹಕಾರಿಯಾಗಿರುತ್ತದೆ. ಇದು ಹೃದಯ ರಕ್ತನಾಳದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ.
ಮರಳು ಮಿಶ್ರಿತ ಮಣ್ಣು ಹಾಗೂ ವಾತಾವರಣದಲ್ಲಿ ಸಾಮಾನ್ಯವಾಗಿ ತಂಪು ಹಾಗೂ ತೇವಾಂಶದಿಂದ ಕೂಡಿರಬೇಕಾಗಿರುತ್ತದೆ ಹಾಗೂ ಪ್ರದೇಶವು ಸಮುದ್ರ ಮಟ್ಟದಿಂದ 600-900 ಮೀ ನಲ್ಲಿರುವ ಮತ್ತು ವಾತಾವರಣದ ಉಷ್ಣಾಂಶವು ಕನಿಷ್ಠ 12 ಡಿಗ್ರಿ ಯಿಂದ 35 ಡಿಗ್ರಿ ಸೆಲ್ಸಿಯಸ್ ವರೆಗಿದ್ದರೆ ಸೂಕ್ತವಾಗಿರುತ್ತದೆ. ಮಣ್ಣಿನ ರಸಸಾರ 5.5 ರಿಂದ 7.0 ಸೂಕ್ತವಾಗಿರುತ್ತದೆ.
ಹ್ಯಾಸ್, ಪ್ಯೂರೇಟ್, ಸಿಂಕೆರ್ ಟನ್ ಸೂಕ್ತ ತಳಿಗಳು ಹಾಗೂ ಫ್ಲೋರಿಡಾ ಗೋಲ್ಡ್, ಅರ್ಕಾ ಸುಪ್ರೀಂ, ಕಾವೇರಿ ಗೋಲ್ಡ್, ಜಿ.ಎಸ್. ಗೋಲ್ಡ್, ಬೆಂಗಳೂರು ಗ್ರ್ಯಾಂಡ್ ಸ್ಥಳೀಯ ತಳಿಗಳಾಗಿವೆ. ಆಸಕ್ತ ರೈತರು ಸಹಾಯಧನಕ್ಕಾಗಿ ತಾಲ್ಲೂಕಿನ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ ಅಗತ್ಯ ದಾಖಲಾತಿಗಳೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ, ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ತೋಟಗಾರಿಕೆ ಉಪನಿರ್ದೆಶಕರು ಕೋರಿದ್ದಾರೆ.