ಪಿರಿಯಾಪಟ್ಟಣ: ತಾಲ್ಲೂಕಿನ ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದ ಕಾವೇರಿ ಮಾತಾ ಮಹಿಳಾ ಟ್ರಸ್ಟ್ ನಲ್ಲಿ ಸುಮಾರು 80 ಸಾವಿರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬೆಟ್ಟದಪುರ ಆರಕ್ಷಕ ಠಾಣೆ ಇನ್ಸ್ ಪೆಕ್ಟರ್ ಪ್ರಕಾಶ್ ಎಂ ಎತ್ತಿನಮನಿ ಮತ್ತು ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಣಗಾಲು ಗ್ರಾಮದ ಕೂಲಿ ಕೆಲಸಗಾರರಾದ ಪ್ರದೀಪ್, ಸ್ವಾಮಿ, ಚಂದ್ರ, ಪ್ರವೀಣ್ ಬಂಧಿತ ಆರೋಪಿಗಳು, ಸೆ.26 ರಂದು ಮಹಿಳಾ ಸಂಘದಲ್ಲಿದ್ದ ವೇಯಿಂಗ್ ಮೆಷಿನ್, ಪ್ರೆಸ್ಸಿಂಗ್ ಮಿಷಿನ್, ಗ್ಯಾಸ್ ಸಿಲಿಂಡರ್, ಡ್ರಮ್, ಹಾಗೂ ತೂಕದ ಮೆಷಿನ್ ಸೇರಿದಂತೆ ಕಚೇರಿಯಲ್ಲಿದ್ದ ಹಲವು ವಸ್ತುಗಳನ್ನು ಕಳ್ಳತನ ಮಾಡಿದ್ದರು.
ಈ ವಿಚಾರವಾಗಿ ಟ್ರಸ್ಟ್ ಅಧ್ಯಕ್ಷೆ ಪದ್ಮಮ್ಮ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡು ಅ.11 ರಂದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಕಾರ್ಯಾಚರಣೆಯಲ್ಲಿ ಎಎಸ್ಐ ಸೋಮಶೇಖರ, ಸಿಬ್ಬಂದಿ ದಿಲೀಪ್, ಮಹೇಶ್, ರವೀಶ್, ರಮೇಶ್ ಇದ್ದರು.