ಚಾಮರಾಜನಗರ: ವಿವಾಹಿತ ಮಹಿಳೆಯೊಬ್ಬಳು ಪತಿಯನ್ನು ತ್ಯಜಿಸಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಡೆಯ ಗುಂಪಿನ ನಡುವೆ ಜಟಾಪಟಿ ನಡೆದು ಪೊಲೀಸರು ಚದುರಿಸಿದ ಘಟನೆ ತಾಲೂಕಿನ ಸಂತೆಮರಹಳ್ಳಿ ಪೊಲೀಸ್ ಠಾಣೆ ಬಳಿ ನಡೆದಿದೆ.
ಮೂಲತಃ ಹಾಸನದ ವ್ಯಕ್ತಿಯೊಬ್ಬರು ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿಯಲ್ಲಿ ಬೇಕರಿ ನಡೆಸುತ್ತಿದ್ದು ಅವರ ಪತ್ನಿ ಮೂಡಲ ಅಗ್ರಹಾರದ ಬೊಲೆರೋ ಡ್ರೈವರ್ ಆಗಿರುವ ಹರೀಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ನಡುವೆ ಗಂಡನಿಗೆ ತಿಳಿಯದಂತೆ ಆಕೆ ಡ್ರೈವರ್ ನೊಂದಿಗೆ ಪರಾರಿಯಾಗಿದ್ದಳು. ಗಂಡನಿಗೆ ತಿಳಿಸದೆ ಆಕೆ ನಾಪತ್ತೆಯಾದ ಹಿನ್ನಲೆಯಲ್ಲಿ ಸಂತೆಮರಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಬೇಕರಿ ಮಾಲೀಕ ನನ್ನ ಪತ್ನಿ ದಿಢೀರ್ ಆಗಿ ಡ್ರೈವರ್ ಹರೀಶ್ ಎಂಬಾತನ ಜೊತೆಗೆ ಪರಾರಿಯಾಗಿದ್ದಾಳೆ ಎಂದು ದೂರು ಸಲ್ಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಡ್ರೈವರ್ ಮತ್ತು ಮಹಿಳೆಯನ್ನು ಫೋನ್ ಕರೆ ಮೂಲಕ ಠಾಣೆಗೆ ಕರೆಸಿ ವಿವಾಹ ವಿಚ್ಚೇಧನೆ ಆಗದೆ ಹೀಗೆ ಹೋಗಬಾರದು ಎಂದು ತಿಳುವಳಿಕೆ ನೀಡಿ ಇದು ಕಾನೂನು ಅಪರಾಧ ಎಂದು ತಿಳಿಸಿ ಮನೆಗೆ ಹೋಗುವಂತೆ ಆಕೆಗೆ ಬುದ್ದಿಮಾತು ಹೇಳಿದ್ದರು. ಆದರೆ ಅದಕ್ಕೆ ಒಪ್ಪದ ಬೇಕರಿ ಮಾಲೀಕನ ಪತ್ನಿ ತಾನು ಗಂಡನ ಬಳಿಗೆ ಹೋಗುವುದಿಲ್ಲ ಡ್ರೈವರ್ ಹರೀಶನೊಂದಿಗೆ ಇರುವುದಾಗಿ ಪಟ್ಟು ಹಿಡಿದಿದ್ದಳು.
ಅಷ್ಟರಲ್ಲಿಯೇ ವಿಷಯ ತಿಳಿದು ಬೇಕರಿ ಮಾಲೀಕನ ಮತ್ತು ಡ್ರೈವರ್ ಹರೀಶನ ಕಡೆಯವರು ಪೊಲೀಸ್ ಠಾಣೆ ಬಳಿಗೆ ಜಮಾಯಿಸಿದ್ದಲ್ಲದೆ ಎರಡು ಕಡೆಯವರು ಮಾತಿಗಿಳಿದ್ದರು. ಮಾತುಗಳು ತೀರಾ ಹೆಚ್ಚಾಗಿ ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಅಲ್ಲದೆ ಎರಡು ಗುಂಪಿನ ಕಡೆಯವರನ್ನು ಕರೆದ ಪೊಲೀಸ್ ಸಿಬ್ಬಂದಿ ಮುಚ್ಚಳಿಕೆ ಬರೆಯಿಸಿಕೊಂಡು ಕಳುಹಿಸಿ ಕೊಟ್ಟಿದ್ದಾರೆ.