ಹನೂರು: ಕಳೆದೆರಡು ಚುನಾವಣೆಯಲ್ಲಿ ಕೆಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಿರಿಯ ಮುಖಂಡ ಪೊನ್ನಚಿ ಮಹಾದೇವಸ್ವಾಮಿ ಹಾಗೂ ಜಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲೊಕ್ಕನಹಳ್ಳಿಯ ವಿಷ್ಣುಕುಮಾರ್ ಬೆಂಬಲಿಗರು ಸಾಮೂಹಿಕವಾಗಿ ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಮುಖಂಡ ನಿಶಾಂತ್ ರವರಿಗೆ ಬೆಂಬಲ ನೀಡುವುದಾಗಿ ತಿಳಿಸಿದರು.
ಕ್ಷೇತ್ರದ ಮದುವನಹಳ್ಳಿ ಸಮೀಪದ ನಿಸರ್ಗ ರೆಸಾರ್ಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಚಿಂತನ ಮಂಥನ ಸಮಾನ ಮನಸ್ಕರ ಸಭೆಯಲ್ಲಿ ಈ ತೀರ್ಮಾನ ಕೈಗೊಂಡರು. ಈ ವೇಳೆ ಮಾತನಾಡಿದ ಹಿರಿಯ ಮುಖಂಡ ಪೊನ್ನಾಚಿ ಮಹದೇವಸ್ವಾಮಿ ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿಯೂ ಕಾರ್ಯಕರ್ತರಲ್ಲಿ ಆದ ಗೊಂದಲದಿಂದ ನಾವು ಜೆಡಿಎಸ್ ಪಕ್ಷದ ಅಭ್ಯರ್ಥಿ ಮಂಜುನಾಥ್ ಅವರನ್ನು ಬೆಂಬಲಿಸಬೇಕಾಯಿತು. ಕಳೆದ ಚುನಾವಣೆಯ ನಂತರ ಮಂಜುನಾಥ್ ರವರು ನಮ್ಮನ್ನು ಯಾವುದೇ ಪಕ್ಷ ಸಂಘಟನೆಗೆ ಹಾಗೂ ಯಾವುದೇ ಕಾರ್ಯಕ್ರಮದಲ್ಲಿ ಗಣನೆಗೆ ತೆಗೆದುಕೊಳ್ಳದ ಹಿನ್ನೆಲೆ ತಟಸ್ಥವಾಗಿ ಉಳಿದಿದ್ದೆವು. ಇದೀಗ ಚುನಾವಣೆ ಬಂದಿರುವುದರಿಂದ ಸುಮ್ಮನೆ ಕೂರಲು ಸಾಧ್ಯವಾಗದೆ ಸಮಾನ ಮನಸ್ಕಾರ ಸಭೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದರು.
ಸಮಾನ ಮನಸ್ಕರ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ ನಾವು ಕಳೆದ 50 ವರ್ಷಗಳಿಂದ ದಿ.ನಾಗಪ್ಪ ಹಾಗೂ ಅವರ ಮನೆತನವನ್ನು ಬೆಂಬಲಿಸಿಕೊಂಡು ಬಂದಿದ್ದೇವೆ ಅವರು ನಿಷ್ಠಾವಂತ ಕಾರ್ಯಕರ್ತರಿಗೆ ಸರಿಯಾಗಿ ಸ್ಪಂದಿಸದೆ ಇರುವುದರಿಂದ ಕಳೆದ ಮೂರು ಚುನಾವಣೆಗಳಲ್ಲಿ ಸತತ ಸೋಲು ಕಂಡಿದ್ದಾರೆ. ಈಗಲೂ ಸಹ ಅವರು ಸ್ಪಂದಿಸದೆ ಇರುವುದರಿಂದ ಕ್ಷೇತ್ರದ ಸಮಾನಮನಸ್ಕರೆಲ್ಲ ಚಿಂತನೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಉತ್ತಮವಾಗಿ ಸಂಘಟಿಸಿ ನಿಶಾಂತ್ ರವರನ್ನು ಶಾಸಕರನ್ನಾಗಿ ಮಾಡುವುದೇ ನಮ್ಮ ಗುರಿ ಎಂದು ತಿಳಿಸಿದರು.
ಬಿಜೆಪಿ ಟಿಕೆಟ್ ಆಕಾಂಕ್ಷಿ ನಿಶಾಂತ್ ಮಾತನಾಡಿ ಕ್ಷೇತ್ರದ ಪ್ರತಿಯೊಬ್ಬರ ಕಷ್ಟ ಸುಖದಲ್ಲಿ ಭಾಗಿಯಾಗುತ್ತೇನೆ, ಜಾತಿ ಸಮುದಾಯ ಪಕ್ಷ ಎಲ್ಲವನ್ನು ಮೀರಿ ನನ್ನ ಕೈಲಾದ ಸಹಾಯ ಮಾಡುತ್ತೇನೆ. ಹನೂರು ಅಭಿವೃದ್ಧಿ ಸಂಕಲ್ಪವೇ ನನ್ನ ಗುರಿ, ಇಂದು ನನ್ನ ಜೀವನದಲ್ಲಿ ಮರೆಯಲಾಗದ ದಿನ ಹಿರಿಯ ಮುಖಂಡರೆಲ್ಲರೂ ಜೆಡಿಎಸ್ ಪಕ್ಷ ತೊರೆದು ನನಗೆ ಬೆಂಬಲ ನೀಡಿರುವುದರಿಂದ ನನಗೆ ಆನೆ ಬಲ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರದಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣತೊಡುತ್ತೇನೆ ಎಂದರು.
ಕ್ಷೇತ್ರದಲ್ಲಿ 15 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಶಾಸಕ ಆರ್ ನರೇಂದ್ರ ರವರು ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ. ಕ್ಷೇತ್ರದ ಎಲ್ಲ ರಸ್ತೆಗಳು ಸಂಚರಿಸಲು ಯೋಗ್ಯವಿಲ್ಲದೆ ಜನಪರಿತಪಿಸುತ್ತಿದ್ದರು ಸರ್ಕಾರದ ಗಮನ ಸೆಳೆದು ಅನುದಾನ ತರುವಲ್ಲಿ ವಿಫಲರಾಗಿದ್ದಾರೆ. ಇವರು ಅಧಿಕಾರಿಗಳನ್ನು ಹಿಡಿತಕ್ಕೆ ತೆಗೆದುಕೊಳ್ಳದೆ ಇರುವುದರಿಂದ ಕ್ಷೇತ್ರದಲ್ಲಿ ಯಾವೊಬ್ಬ ಬಡವನಿಗೂ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಮದುವನಹಳ್ಳಿ ಗ್ರಾಮದ ಕೆಲ ಪೋಷಕರು ತಮ್ಮ ಪುಟ್ಟ ಮಕ್ಕಳಿಗೆ ಶಿಕ್ಷಣ ಕೊಡಿಸಲು ಅಂಗನವಾಡಿಗೆ ಮನೆಮನೆ ಸರದಿ ಎತ್ತಿ ನಡೆಸುತ್ತಿರುವುದು ದುರ್ದೈವದ ಸಂಗತಿ ಶಾಸಕರ ಕಾರ್ಯವೈಖರಿ ಎಷ್ಟರಮಟ್ಟಿಗೆ ಎಂಬುದು ಇಲ್ಲೇ ಸಾಬೀತಾಗುತ್ತದೆ ಎಂದು ತಿಳಿಸಿದರು.