ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ, ಗಂಡ್ಲುಪೇಟೆ, ಕೊಳ್ಳೇಗಾಲ, ಹನೂರು ತಾಲೂಕು ಘಟಕ ಹಾಗೂ ಮಲೆ ಮಹದೇಶ್ವರ ಬೆಟ್ಟ ಮತ್ತು ಅಗರ-ಮಾಂಬಳ್ಳಿ ಉಪಘಟಕದ ವ್ಯಾಪ್ತಿಯಲ್ಲಿ ಖಾಲಿ ಇರುವ ಸ್ವಯಂ ಸೇವಕ ಗೃಹರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಸೇವಕ ಗೃಹರಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸುವವರು ಕರ್ನಾಟಕ ರಾಜ್ಯ ಗೃಹರಕ್ಷಕ ಕೈಪಿಡಿ (ತಿದ್ದುಪಡಿ) ಯನ್ವಯ ಕನಿಷ್ಠ 19ವರ್ಷ ಮೇಲ್ಪಟ್ಟು 50ವರ್ಷದೊಳಗಿರಬೇಕು, ಎಸ್.ಎಸ್.ಎಲ್.ಸಿ ಉತ್ತೀರ್ಣರಾಗಿರಬೇಕು, ದೈಹಿಕ ಪರೀಕ್ಷೆಯಲ್ಲಿ ಪುರುಷರು ಕನಿಷ್ಟ 168 ಸೆ.ಮೀ ಹಾಗೂ ಮಹಿಳೆಯರು ೧೫೨ ಸೆ.ಮೀ ಎತ್ತರ ಇರಬೇಕು, 800ಮೀ ಓಟ, ಉದ್ದಜಿಗಿತ, ಎತ್ತರ ಜಿಗಿತ ಮತ್ತು ಗುಂಡು ಎಸೆತ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರನ್ನು ಪರಿಗಣಿಸಲಾಗುವುದು.
ನಗರದ ಸತ್ತಿಮಂಗಲ ರಸ್ತೆಯಲ್ಲಿರುವ ಜಿಲ್ಲಾ ಕಚೇರಿಯಲ್ಲಿ ಅರ್ಜಿಗಳನ್ನು ನವೆಂಬರ್ 2 ರಿಂದ ಪಡೆದು ಅರ್ಜಿಯ ಜೊತೆ ವಿದ್ಯಾರ್ಹತೆ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ವೈದ್ಯಾಧಿಕಾರಿಗಳಿಂದ ಪಡೆದ ದೈಹಿಕ ದೃಢೀಕರಣ ಪತ್ರ, ಎಸ್.ಬಿ.ಐ. ಬ್ಯಾಂಕ್ ಉಳಿತಾಯ ಖಾತೆಯ ಜೆರಾಕ್ಸ್ ಪ್ರತಿಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಇತ್ತೀಚಿನ 2 ಭಾವಚಿತ್ರಗಳೊಂದಿಗೆ ನವೆಂಬರ್ 10ರ ಸಂಜೆ 5ಗಂಟೆಯೊಳಗೆ ಸಲ್ಲಿಸಬೇಕು.
ಅಪೂರ್ಣ ಅರ್ಜಿ, ದಾಖಲಾತಿಗಳನ್ನು ಪೂರ್ಣ ಪ್ರಮಾಣದಲ್ಲಿ ಲಗತ್ತಿಸದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಚೇರಿ ದೂ.ಸಂ. 08226-225856ನ್ನು ಸಂಪರ್ಕಿಸುವಂತೆ ಜಿಲ್ಲಾ ಗೃಹ ರಕ್ಷಕದಳದ ಸಮಾದೇಷ್ಟರು ಹಾಗೂ ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.