ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಗಾಯಗೊಂಡ ಹುಲಿಗಳು ಕಂಡು ಬಂದಿದ್ದು, ಸಫಾರಿಗೆ ತೆರಳಿದ್ದ ಪ್ರವಾಸಿಗರು ಇವುಗಳ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಬಂಡೀಪುರದಲ್ಲಿ ಸರಹದ್ದಿನ ಕಾದಾಟದಲ್ಲಿ ಹುಲಿಗಳು ಗಾಯಗೊಂಡಿರಬಹುದು ಎಂದು ಶಂಕಿಸಲಾಗಿದೆ. ಒಂದು ಹುಲಿಯ ಭುಜಕ್ಕೆ ಗಾಯವಾಗಿದ್ದು, ಮತ್ತೊಂದರ ಹಿಂಗಾಲಿಗೆ ಗಾಯವಾಗಿ ಕೆರೆಯ ನೀರಿನಿಂದ ಕುಂಟುತ್ತ ಸಾಗಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ಕಂಡು ವನ್ಯಜೀವಿ ಪ್ರಿಯರು ಮರುಕ ವ್ಯಕ್ತಪಡಿಸಿದ್ದು, ಚಿಕಿತ್ಸೆ ನೀಡುವಂತೆ ಒತ್ತಾಯಿಸಿದ್ದಾರೆ.
ಬೇಸಿಗೆ ಜತೆಗೆ ಮಳೆ ಇಲ್ಲದೆ ಬಂಡೀಪುರ ಅಭಯಾರಣ್ಯ ಸಂಪೂರ್ಣವಾಗಿ ಒಣಗಿ ನಿಂತಿದೆ. ಈ ಕಾರಣದಿಂದ ಕಾಡು ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಗುತ್ತಿವೆ.
ಹುಲಿ, ಕಾಡಾನೆ, ಜಿಂಕೆ ಸೇರಿ ಹಲವು ಪ್ರಾಣಿಗಳು ಬಿಸಿಲಿನ ತಾಪ ತಣಿಸಿಕೊಳ್ಳಲು ಕೆರೆಗಳ ಆಸುಪಾಸಿನಲ್ಲೇ ಬೀಡುಬಿಟ್ಟಿವೆ. ಇದರಿಂದ ಸಫಾರಿ ವಾಹನಗಳು ಕೆರೆಗಳ ಮೂಲಕವೇ ಹಾದು ಹೋಗುತ್ತಿವೆ. ಈ ವೇಳೆ ಹುಲಿಗಳು ಗಾಯಗೊಂಡಿರುವ ದೃಶ್ಯವನ್ನು ಪ್ರವಾಸಿಗರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ.
ಈ ಸಂಬಂಧ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಪ್ರತಿಕ್ರಿಯೆ ನೀಡಿ, ಎರಡು ಹುಲಿಗಳ ಗಾಯ ಸ್ವಾಭಾವಿಕವಾಗಿ ವಾಸಿಯಾಗಲಿದೆ ಎಂದು ಪಶು ವೈದ್ಯರು ತಿಳಿಸಿದ್ದಾರೆ. ಆದರೂ, ಹುಲಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ನಿಗಾ ಇರಿಸಿದ್ದು, ಚಲನವಲನಗಳ ಕುರಿತು ಮಾಹಿತಿ ಪಡೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.