ಹನೂರು: ಮಹದೇಶ್ವರ ಬೆಟ್ಟ ಮುಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಕಡೆ ಕಾರ್ತಿಕ ಸೋಮವಾರದ ಮಹಾ ದೀಪೋತ್ಸವ ವಿಜೃಂಭಣೆಯಿಂದ ನೆರವೇರಿತಲ್ಲದೆ, ದೀಪದ ಗಿರಿ ಒಡ್ಡಿನಲ್ಲಿ ಬೆಳಗಿದ ಮಹಾ ಜ್ಯೋತಿ ಭಕ್ತಿಯನ್ನು ಪ್ರಜ್ವಲಿಸುವಂತೆ ಮಾಡಿತು.
ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದ ದೀಪದ ಗಿರಿ ಒಡ್ಡಿನಲ್ಲಿ ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಮಹಾ ಜ್ಯೋತಿಯನ್ನು ಬೆಳಗಿಸಲಾಯಿತು. ಪ್ರತೀ ವರ್ಷ ಮಹದೇಶ್ವರ ಸ್ವಾಮಿ ದೇವಾಲಯದ ಮುಂಭಾಗದ ಆಗ್ನೇಯ ದಿಕ್ಕಿನಲ್ಲಿರುವ ದೀಪದ ಗಿರಿ ಒಡ್ಡಿನಲ್ಲಿ ಮಹಾ ಜ್ಯೋತಿಯನ್ನು ಧಾರ್ಮಿಕ ವಿಧಿ ವಿಧಾನದಲ್ಲಿ ಬೇಡಗಂಪಣ ಸಂಪ್ರದಾಯದಂತೆ ಜರುಗಿಸಲಾಗುವುದು. ಕಾರ್ತಿಕ ಮಾಸದಲ್ಲಿ ಬರುವ ಪ್ರತೀ ಸೋಮವಾರವು ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆಗಳು ನಡೆದು ಬಂದಿದ್ದು ಕೊನೆಯ ಸೋಮವಾರ ಸ್ವಾಮಿಗೆ ವಿಶೇಷ ಪೂಜಾ ಕಾರ್ಯಕ್ರಮದ ಜೊತೆಯಲ್ಲಿ ಮಹಾಜ್ಯೋತಿ ಜರುಗುವುದು ವಿಶೇಷವಾಗಿದೆ.
ಸೋಮವಾರದಂದು ಬೆಳಗಿನ ಜಾವ ವಿಶೇಷ ಪೂಜಾ ಪುನಸ್ಕಾರಗಳನ್ನು ಮಾಡಿ ಸಂಜೆ ಮಾದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕರಿಸಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದ ಬಳಿಕ ದೇವಾಲಯದ ಒಳ ಪ್ರಾಂಗಣದಲ್ಲಿ ಪ್ರದಕ್ಷಿಣೆಯನ್ನು ಮಾಡಿ ಬಳಿಕ ಮಂಗಳವಾದ್ಯಗಳ ಸಮೇತವಾಗಿ ಉತ್ಸವ ಮೂರ್ತಿಯನ್ನು ಸಾಲೂರು ಮಠದ ಪೀಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ನೇತೃತ್ವದಲ್ಲಿ ದೀಪದಗಿರಿ ಒಡ್ಡಿಗೆ ಕೊಂಡೊಯ್ದು. ನಂತರ ಅಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಂಗಳವಾದ್ಯಗಳ ಸಮೇತವಾಗಿ ಮಂತ್ರಘೋಷಗಳ ಸಮೇಯವಾಗಿ ಪೂಜೆ ಪುನಸ್ಕಾರಗಳನ್ನು ಮಾಡಿ ತದ ನಂತರ ಮಹಾ ಜ್ಯೋತಿಯನ್ನು ಬೆಳಗಿಸಲಾಯಿತು.
ಕರ್ನಾಟಕ, ತಮಿಳುನಾಡು ಹಾಗೂ ಇನ್ನಿತರ ರಾಜ್ಯಗಳಿಂದ ಲಕ್ಷಾಂತರ ಭಕ್ತಾದಿಗಳು ಮಹದೇಶ್ವರ ಬೆಟ್ಟಕ್ಕೆ ಬಂದು ಸ್ವಾಮಿಯ ದರ್ಶನ ಪಡೆದರಲ್ಲದೆ, ವಿವಿಧ ಹರಕೆಗಳನ್ನು ತೀರಿಸಿದರು.
ಪ್ರಾಧಿಕಾರದ ಕಾರ್ಯದರ್ಶಿ ಶ್ರೀಮತಿ ಕಾತ್ಯಾಯಿನಿದೇವಿ ಅವರು ಪ್ರಾಧಿಕಾರದ ವತಿಯಿಂದ ಸ್ವಚ್ಛತಾ ಕಾರ್ಯ, ನೆರಳಿನ ವ್ಯವಸ್ಥೆ, ದಾಸೋಹ ವ್ಯವಸ್ಥೆ, ಸ್ಥಾನಘಟ್ಟ, ಅಂತರಗಂಗೆ, ಅಂತರಗಂಗೆ, ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅನುಕೂಲ ಕಲ್ಪಿಸಿದ್ದರು. ಕೆಲವು ಸ್ಥಳಗಳಲ್ಲಿ ಶೌಚಾಲಯ ಹಾಗೂ ಇನ್ನಿತರ ವ್ಯವಸ್ಥೆಯನ್ನು ಪ್ರಾಧಿಕಾರದ ಸಿಬ್ಬಂದಿಗಳು ಅಚ್ಚುಕಟ್ಟಾಗಿ ಮಾಡಿದ್ದರು.