ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಎಪಿಎಂಸಿ ಆವರಣದಲ್ಲಿ ಜಿಲ್ಲಾಡಳಿತದಿಂದ ಮೇವು ವಿತರಣೆ ಮಾಡಲಾಯಿತು.
ತಾಲೂಕಿನಲ್ಲಿ ಮೇವಿನ ಕೊರತೆಯಿಂದಾಗಿ ಬಳ್ಳಾರಿ ಕಡೆಯಿಂದ ಮೇವನ್ನು ತರಿಸಲಾಗಿದ್ದು ಗುಂಡ್ಲುಪೇಟೆ ತಾಲೂಕಿನ ಎಪಿಎಂಸಿ ಆವರಣದಲ್ಲಿ ರೈತರಿಗೆ ರಿಯಾಯಿತಿ ದರದಲ್ಲಿ ಒಣ ಮೇವು ಹುಲ್ಲನ್ನು ವಿತರಿಸಲಾಗಿದೆ.
ತಾಲೂಕಿನಾದ್ಯಂತ ರೈತರಿಗೆ ಕೆಜಿಗೆ ಎರಡು ರೂ.ನಂತೆ ಒಬ್ಬ ರೈತನಿಗೆ 5 ರಾಶಿಗಳಿಗೆ ಐದು ದಿನಕ್ಕೆ ಆಗುವಷ್ಟು ಮೇವನ್ನು ವಿತರಿಸಲಾಯಿತು ಅಲ್ಲದೆ, ಒಟ್ಟಾರೆ 211 ರೈತರಿಗೆ ಮೇವನ್ನು 11000 ಕೆಜಿ ಒಣ ಮೇವನ್ನು ವಿತರಿಸಲಾಯಿತು ಎಂದು ಡಾಕ್ಟರ್ ಬಿ ಎಚ್ ಮೋಹನ್ ಕುಮಾರ್ ತಿಳಿಸಿದ್ದಾರೆ.
ಆದರೆ ಮೇವು ಪಡೆದ ರೈತರು ಒಣಗಿರುವ ಮತ್ತು ಯಾವುದೇ ಸತ್ವವಿಲ್ಲದ ಕಳಪೆ ಗುಣಮಟ್ಟದ ವಿತರಿಸುತ್ತಿದ್ದಾರೆ ಎಂದು ಜಿಲ್ಲಾಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಾನುವಾರುಗಳು ತಿನ್ನಲು ಯೋಗ್ಯವಲ್ಲದ ಮೇವನ್ನು ಟೆಂಡರ್ ದಾರ ಪೂರೈಕೆ ಮಾಡುತಿದ್ದು ಕಸ ಮತ್ತು ಸಗಣಿ ಮಿಶ್ರಿತ ಕಬ್ಬಿನ ಒಣ ಸಿಪ್ಪೆಯನ್ನು ನೀಡುತಿದ್ದಾರೆ ಎಂದು ಆರೋಪಿಸಿದರಲ್ಲದೆ, ಹೊಸದಾಗಿ ಉತ್ತಮ ಗುಣಮಟ್ಟದ ಭತ್ತದ ಹುಲ್ಲಿನ ಮೇವನ್ನು ವಿತರಿಸುವಂತೆ ಪಶು ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಅವರನ್ನು ಜಿಲ್ಲಾಧ್ಯಕ್ಷ ಶಾಂತಮಲ್ಲಪ್ಪ, ಮಹೇಂದ್ರ ಒತ್ತಾಯಿಸಿದರು.
ರೈತರು ಈ ಮೇವಿನಲ್ಲಿ ಯಾವುದೇ ಸತ್ವವಿಲ್ಲ ಎಂದು ಹೇಳಿ ಜಾನುವಾರುಗಳ ಆರೋಗ್ಯದ ಹಿತದೃಷ್ಟಿಯಿಂದ ಮೇವನ್ನು ಪಡೆಯಲು ನಿರಾಕರಿಸಿದ್ದಾರೆ ಆದ್ದರಿಂದ ಬುಧವಾರ ಉತ್ತಮ ಮಟ್ಟದ ಬೇರೆ ಮೇವನ್ನು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪಶು ವೈದ್ಯಾಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ.