ಚಾಮರಾಜನಗರ: ತಾಯಿ ಆನೆಯಿಂದ ಬೇರ್ಪಟ್ಟ ಮರಿಯಾನೆಯೊಂದು ಗ್ರಾಮಕ್ಕೆ ಬಂದು ಗ್ರಾಮಸ್ಥರನ್ನುಆತಂಕ ಮಾಡಿದ್ದಲ್ಲದೆ ಚೆಲ್ಲಾಟವಾಡುತ್ತಿದ್ದನ್ನು ಗಮನಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಮರಿಯಾನೆಯನ್ನು ರಕ್ಷಿಸಿ ಆರೈಕೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರಿನಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೆ ಬರುವ ಅರೆಪಾಳ್ಯ ಗ್ರಾಮದ ಕಾಡಿನಲ್ಲಿ ತಾಯಿ ಆನೆಯಿಂದ ಬೇರ್ಪಟ್ಟಿದ್ದ ಮರಿಯಾನೆಯೊಂದು ತಪ್ಪಿಸಿಕೊಂಡು ಗ್ರಾಮಕ್ಕೆ ಬಂದು ಚೆಲ್ಲಾಟ ಆರಂಭಿಸಿತ್ತು.
ಈ ವಿಷಯ ತಿಳಿದು ಗ್ರಾಮಕ್ಕೆ ತಮಿಳುನಾಡಿನ ಅರಣ್ಯಾಧಿಕಾರಿಗಳು ಮರಿಯಾನೆಯನ್ನು ರಕ್ಷಿಸಿ ಹಾಸನೂರು ಆನೆ ಶಿಬಿರಕ್ಕೆ ಕರೆತಂದು ಆರೈಕೆ ಮಾಡಿದ್ದಾರೆ. ತಾಯಿಯನ್ನು ಹುಡುಕಲು ಅರಣ್ಯಾಧಿಕಾರಿಗಳು ಮುಂದಾಗಿದ್ದು, ತಾಯಿ ಆನೆ ಸಿಗುವ ತನಕ ಮರಿಯಾನೆಗೆ ಅರಣ್ಯಾಧಿಕಾರಿಗಳೇ ಆರೈಕೆ ಮಾಡಿ ಸಲಹಲಿದ್ದಾರೆ.