ಗುಂಡ್ಲುಪೇಟೆ: ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿದ ಜಿಲ್ಲಾ ದಾಸೋಹ ಶಿಕ್ಷಣಾಧಿಕಾರಿ ಗುರುಲಿಂಗಯ್ಯ ಮತ್ತು ತಾಲೂಕು ಸಹಾಯಕ ನಿರ್ದೇಶಕ ಮಂಜಣ್ಣ ಶಾಲಾ ಅಡುಗೆ ಕೊಠಡಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ನೆನ್ನೆಯಷ್ಟೇ ಶಾಲಾ ವಿದ್ಯಾರ್ಥಿನಿಯರಿಗೆ ಕಳಪೆ ಗುಣಮಟ್ಟದ ಬೇಳೆಕಾಳು ಮತ್ತು ಅಕ್ಕಿಯನ್ನ ಬಳಸಿ ಅಡುಗೆ ತಯಾರಿಸಿ ಉಣಬಡಿಸಲಾಗ್ತಿದೆ ಎಂದು ನ್ಯೂಸ್ ಕನ್ನಡ ವೆಬ್ ಸೈಟ್ ನಲ್ಲಿ ಸುದ್ದಿ ಪ್ರಸಾರ ಮಾಡಿತ್ತು, ಸುದ್ದಿ ಬಿತ್ತರಿಸಿದ ಮರುದಿನವೇ ಶಾಲೆಗೆ ಅಧಿಕಾರಿಗಳು ಭೇಟಿ ನೀಡಿ ಹುಳ ಮಿಶ್ರಿತ ಬೇಳೆ ಕಾಳು ಮತ್ತು ಅಕ್ಕಿಯನ್ನು ವಿಲೇವಾರಿ ಮಾಡಿಸಿದ್ದಾರೆ.
ಶಾಲಾ ಮುಖ್ಯ ಶಿಕ್ಷಕರು ಮತ್ತು ಅಡುಗೆ ಸಹಾಯಕಿಯರಿಂದ ಮಾಹಿತಿ ಸಂಗ್ರಹಿಸಿದ ಜಿಲ್ಲಾ ದಾಸೋಹ ಶಿಕ್ಷಾಣಾಧಿಕಾರಿ ಮುಂದಿನ ದಿನಗಳಲ್ಲಿ ಈ ರೀತಿಯಾದ ಘಟನೆ ಮರುಕಳಿಸದಂತೆ ಎಚ್ಚರವಹಿಸುವಂತೆ ಸೂಚನೆ ನೀಡಿದ್ದಾರೆ.