ಚಾಮರಾಜನಗರ: ಗಡಿ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣ ದಲ್ಲಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಪೌರಕಾರ್ಮಿಕರಿಂದ ತಲೆಯ ಮೇಲೆ ಮಲ ಹೊರಿಸಿ ಸಾಗಾಣಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಲ್ಲದೆ ಘಟನೆಯ ಬಗ್ಗೆ ಕೂಲಂಕುಶವಾಗಿ ಮಾಹಿತಿ ಕಲೆ ಹಾಕಿದ್ದು, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮತ್ತು ಆರೋಗ್ಯ ನಿರೀಕ್ಷಕರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣ ಪಂಚಾಯ್ತಿ ಕಾರ್ಯಾಲಯದ ಅಣತಿ ದೂರದಲ್ಲಿ ಕಳೆದ ಗುರುವಾರ ಶೌಚಾಲಯವೊಂದರಿಂದ ಮಲ ಹಾಗೂ ತ್ಯಾಜ್ಯವನ್ನು ಯಂತ್ರದಿಂದ ಹೊರ ತೆಗೆದು ದೂರ ಸಾಗಿಸುವಾಗ ಯಂತ್ರದಿಂದ ಸೋರಿಕೆಯಾಗಿ ರಸ್ತೆಯಲ್ಲಿ ಹರಡಲಾಗಿತ್ತು . ಇದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇತ್ತು.
ಬಳಿಕ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಪೌರಕಾರ್ಮಿಕ ನೆರವಿನಿಂದ ರಸ್ತೆಯಲ್ಲಿ ಚೆಲ್ಲಿಹೋಗಿದ್ದ ಶೌಚಾಲಯದ ಮಲ ಮತ್ತು ತ್ಯಾಜ್ಯವನ್ನು ಪೌರ ಕಾರ್ಮಿಕರ ಮೂಲಕ ಪ್ಲಾಸ್ಟಿಕ್ ಬಾಂಡಲಿಯಿಂದ ತೆಗೆಸಲಾಗಿದ್ದು, ಇದರ ವೀಡಿಯೋ ವೈರಲ್ ಆಗಿತ್ತು.
ಈ ಸಂಬಂಧ ಚಾಮರಾಜನಗರ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಪ್ರಕರಣವನ್ನುಗಂಭೀರವಾಗಿ ಪರಿಗಣಿಸಿ ಘಟನಾ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ನೋಡಲ್ ಅಧಿಕಾರಿ ಜನಾರ್ದನ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಬಿ, ಹನೂರು ತಹಶಿಲ್ದಾರರ್ ವೈ.ಕೆ ಗುರುಪ್ರಸಾದ್ ಆಗಮಿಸಿ, ಇಂಜಿನಿಯರ್ ತನುಜ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀಧರ್ ಹಾಗೂ ಪೌರ ಕಾರ್ಮಿಕರಿಂದ ಮಾಹಿತಿ ಪಡೆದು ಕೊಂಡರು. ಪ್ರಕರಣದ ಬಗ್ಗೆ ಸರ್ಕಾರಕ್ಕೆ ಎರಡು ದಿನಗಳಲ್ಲಿ ಸಮಗ್ರ ಮಾಹಿತಿ ನೀಡುವ ಸಲುವಾಗಿ ಅಧಿಕಾರಿಗಳ ತಂಡ ಘಟನೆಯ ಬಗ್ಗೆ ವರದಿ ಸಿದ್ದಪಡಿಸುತ್ತಿದೆ.
ಈ ನಡುವೆ ಹನೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ತನಿಖಾ ತಂಡದವರು ಕರ್ತವ್ಯ ಲೋಪ ಹಾಗೂ ಪೌರ ಕಾರ್ಮಿಕರ ತಲೆ ಮೇಲೆ ಮಲ ಹೊರಿಸಿ ಸಾಗಾಣಿಕೆ ಮಾಡಿದ ಆರೋಪದ ಮೇಲೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀಧರ್ ಹಾಗೂ ಪ್ರಭಾರ ಆರೋಗ್ಯ ನಿರೀಕ್ಷಕಿ ಭೂಮಿಕಾರವರು ದೂರು ದಾಖಲಿಸಿದ್ದಾರೆ.