News Karnataka Kannada
Tuesday, April 30 2024
ಬೀದರ್

ಡಿಸಿಸಿ ಬ್ಯಾಂಕ್‌ ದಾಳಿಗೂ ನನಗೂ ಸಂಬಂಧವಿಲ್ಲ: ಸಚಿವ ಭಗವಂತ ಖೂಬಾ

'ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ' ಎಂದು ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಸ್ಪಷ್ಟಪಡಿಸಿದರು.
Photo Credit : NewsKarnataka

ಬೀದರ್‌: ‘ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ (ಬಿಡಿಸಿಸಿ) ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದು ಬಿಜೆಪಿ ಅಭ್ಯರ್ಥಿ, ಕೇಂದ್ರ ಸಚಿವ ಭಗವಂತ ಖೂಬಾ ಸ್ಪಷ್ಟಪಡಿಸಿದರು.

ನಗರದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು,’ಇಡಿ, ಸಿಬಿಐ ಸ್ವಾಯತ್ತ ಸಂಸ್ಥೆಗಳಾಗಿವೆ.

ಯಾರು ಉಪ್ಪು ತಿನ್ನುತ್ತಾರೆ. ಅವರು ನೀರು ಕುಡಿಯಲೇಬೇಕು. ನನ್ನ ಮನೆಗೆ ಅಥವಾ ನಿಮ್ಮ ಮನೆಗೆ ಯಾರಾದರೂ ರೇಡ್‌ ಏಕೆ ಮಾಡಿಲ್ಲ’ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದರು.

ಚುನಾವಣೆ ಸಂದರ್ಭದಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ. ಭ್ರಷ್ಟಾಚಾರಿಗಳನ್ನು ಒಳಗೆ ಹಾಕಿದರೆ ಒಳ್ಳೆಯದೋ ಅಥವಾ ಕೆಟ್ಟದೋ ನೀವೇ ಹೇಳಬೇಕು. ಏನಾದರೂ ಅನುಮಾನ ಅಥವಾ ಮಾಹಿತಿ ಆಧರಿಸಿಯೇ ಇಡಿಯವರು ಡಿಸಿಸಿ ಬ್ಯಾಂಕ್‌ ಮೇಲೆ ದಾಳಿ ನಡೆಸಿರಬಹುದು ಎಂದರು.

ಡಿಸಿಸಿ ಬ್ಯಾಂಕ್‌, ಎಂಜಿಎಸ್‌ಎಸ್‌ಕೆ ಹಾಗೂ ಸಚಿವ ಈಶ್ವರ ಬಿ.ಖಂಡ್ರೆಯವರ ಒಡೆತನದ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಕಡಿವಾಣ ಹಾಕಬೇಕು. ಏಕೆಂದರೆ ಚುನಾವಣೆಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಕುರಿತು ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದೆ. ಆದರೆ, ಇಡಿಗೆ ದೂರು ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ಸರ್ಕಾರದ ಐದು ಮೋಸದ ಗ್ಯಾರಂಟಿಗಳಿಗೆ ಜನ ಮೋಸ ಹೋಗಿದ್ದಾರೆ. ಅಭಿವೃದ್ಧಿ ಕುಂಠಿತಗೊಂಡಿದೆ. ರೈತರು ಕಂಗಾಲಾಗಿದ್ದಾರೆ. ಇಂತಹ ಮೋಸದ ಪಕ್ಷದ ಪ್ರಣಾಳಿಕೆ ಸಂಪೂರ್ಣ ಬೋಗಸ್‌ ಆಗಿದೆ. ಬಿಟ್ಟಿ ಉಡುಗೊರೆಗಳ ಮೂಲಕ ದೇಶವನ್ನು ದಿವಾಳಿ ಮಾಡಲು ಹೊರಟಿದ್ದಾರೆ. ಆದರೆ, ಬಿಜೆಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿಯ ದಿನ ಸಂಕಲ್ಪ ಪತ್ರ ಬಿಡುಗಡೆ ಮಾಡಿದೆ. ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಭರವಸೆಗಳನ್ನು ಕೊಟ್ಟಿದೆ. ಇದು ಬಿಜೆಪಿಗೂ ಕಾಂಗ್ರೆಸ್ಸಿಗೂ ಇರುವ ವ್ಯತ್ಯಾಸ ಎಂದು ಹೇಳಿದರು.

ಹತ್ತು ವರ್ಷಗಳ ಹಿಂದೆ ಬೀದರ್‌ ಜಿಲ್ಲೆಯ ಕುರಿತು ಮಾತಾಡಬೇಕಾದರೆ ಮೊದಲು ಹಿಂದುಳಿದ ಹಣೆಪಟ್ಟಿ ಎಂಬ ಹೆಸರು ಬಳಸಲಾಗುತ್ತಿತ್ತು. ಆದರೆ, ಮೋದಿಯವರ ಅಧಿಕಾರದ ಅವಧಿಯಲ್ಲಿ ನಾನು ಮಾಡಿದ ಕೆಲಸಗಳಿಂದ ಈಗ ಆ ಹಣೆಪಟ್ಟಿ ದೂರವಾಗಿದೆ. ಯಾರೂ ಆ ಪದ ಬಳಸುತ್ತಿಲ್ಲ. ಹೆದ್ದಾರಿಗಳು ಅಭಿವೃದ್ಧಿ ಕಂಡಿವೆ. ಕೇಂದ್ರದ ಅನೇಕ ಯೋಜನೆಗಳ ಲಾಭ ಜಿಲ್ಲೆಯ ಜನರಿಗೆ ಸಿಕ್ಕಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ,’ಏ.18ರಂದು ಬಿಜೆಪಿ ಶಕ್ತಿ ಪ್ರದರ್ಶನದ ಮೂಲಕ ಭಗವಂತ ಖೂಬಾ ಅವರು ನಾಮಪತ್ರ ಸಲ್ಲಿಸುವರು. ಅಂದು ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸೇರಿದಂತೆ ಹಲವು ಜನ ಮುಖಂಡರು ಭಾಗವಹಿಸುವರು. ಬೆಳಿಗ್ಗೆ 10ಕ್ಕೆ ನಗರದ ಗಣೇಶ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ. ಮಧ್ಯಾಹ್ನ ರ್‍ಯಾಲಿಯಲ್ಲಿ ತೆರಳಿ ನಾಮಪತ್ರ ಸಲ್ಲಿಸಲಾಗುವುದು’ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು