ಚಾಮರಾಜನಗರ: ಜಿಲ್ಲೆಯ ಹನೂರು ಮಲೆ ಮಹದೇಶ್ವರ ವನ್ಯಜೀವಿ ವಲಯವನ್ನು ಹುಲಿ ಸಂರಕ್ಷಿತ ಅರಣ್ಯವನ್ನಾಗಿ ಘೋಷಿಸುವುದನ್ನು ಕೈ ಬಿಡಬೇಕೆಂದು ಒತ್ತಾಯಿಸಿ ಹಾಗೂ ಕಾಡಂಚಿನ ಗ್ರಾಮಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸಬೇಕೆಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ರಸ್ತೆ ತಡೆ ಪ್ರತಿಭಟನೆ ನಡೆಸಲಾಯಿತು.
ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಮಹದೇಶ್ವರ ಬೆಟ್ಟದ ಕೊಳ್ಳೆಗಾಲಕ್ಕೆ ತೆರಳುವ ಚೆಕ್ ಪೋಸ್ಟ್ ಬಳಿ ಸುಮಾರು ಎರಡು ಗಂಟೆಗಳ ಕಾಲ ರಸ್ತೆ ತಡೆಯನ್ನು ಮಾಡಿ ಪ್ರತಿಭಟನೆ ನಡೆಸಿ ಮಾತನಾಡಿದ ತೊಳಸಿಕೆರೆ ಗ್ರಾಮದ ರೈತ ಮುಖಂಡ ಕೆಂಪಣ್ಣ ಸ್ವಾತಂತ್ರ್ಯಪೂರ್ವದಿಂದಲೂ ನಮ್ಮ ಬದುಕು ಮೂರ ಬಟ್ಟೆಯಾಗಿದ್ದು ಇದುವರೆಗೂ ನಮ್ಮ ಗ್ರಾಮಗಳು ಮೂಲ ಭೂತ ಸೌಕರ್ಯ ಕಂಡಿಲ್ಲ ನಾವು ಮೂಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ನಮ್ಮ ಗ್ರಾಮಗಳತ್ತ ಸರ್ಕಾರ ಗಮನವನ್ನರಿಸದೆ ಇರುವುದು ಚಿಂತಾಜನಕವಾಗಿದೆ.
ಸ್ವಾತಂತ್ರ್ಯ ಪೂರ್ವದಿಂದಲೂ ನಾವುಗಳು ದೀಪದ ಬೆಳಕಿನಲ್ಲಿ ಬದುಕನ್ನು ಸಾಗಿಸುತಿದ್ದು, ಇಂದಿಗೂ ನಮ್ಮ ಗ್ರಾಮ ಬೆಳಕಿನ ಸೌಕರ್ಯವನ್ನು ಕಾಣದಿರುವುದು ನಮ್ಮ ದುರಾದೃಷ್ಟವೇ ಸರಿ. ಇತ್ತೀಚೆಗೆ ಮಹದೆಶ್ವರ ವನ್ಯ ಜೀವಿ ವಲಯವನ್ನು ಹುಲಿ ರಕ್ಷಿತ ಅರಣ್ಯವಾಗಿ ಘೋಷಿಸಲು ಸರ್ಕಾರ ಸಿದ್ದತೆಗಳನ್ನು ನಡೆಸುತ್ತಿರುವುದು ಕಾಡಂಚಿನ ಗ್ರಾಮಗಳ ಜನರ ಬದುಕು ಸಂಕಷ್ಟಕ್ಕೀಡಾಗಲಿದೆ. ಅಡುಗೆ ಮಾಡಿಹೊಟ್ಟೆಯನ್ನು ತುಂಬಿಸಿಕೊಳ್ಳಲೂ ಸಹ ನಮ್ಮ ಕೈಯಲ್ಲಿ ಆಗದೆ ನಿಸ್ಸಾಯಕರಾಗಿ ಬದುಕನ್ನು ಸಾಗಿಸುತಿದ್ದೇವೆ. ಕಾಡಿನಿಂದ ಸೌದೆ ತರುವುದನ್ನು ನಿಲ್ಲಿಸುವುದಕ್ಕೆ ಅರಣ್ಯ ಇಲಾಖೆಯಿಂದ ಅಡುಗೆ ಮಾಡಲು ಅಡುಗೆ ಅನಿಲವನ್ನು ನೀಡಿ ಸೌದೆಗೆ ತಡೆ ಮಾಡಿದರು. ಈಗ ಅಡುಗೆ ಅನಿಲಕ್ಕಾಗಿ 1150 ರೂಪಾಯಿಯನ್ನು ನೀಡಬೇಕು ಕಾಡಂಚಿನ ಗ್ರಾಮದವರು ಒಂದು ಪಾಕೆಟ್ ಉಪ್ಪು ಖರೀದಿ ಮಾಡಲು ನಿಸ್ಸಾಯಕರಾಗಿರುವಾಗ ಅನಿಲ ಕೊಳ್ಳಲು ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಮಾದೇವಿ ಮಾತನಾಡಿ, ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲೂ ಇರುವ ಹಳ್ಳಿಗಳಿಗೆ ರಸ್ತೆ ವಿದ್ಯುತ್ ವ್ಯವಸ್ಥೆ ಇಲ್ಲದಿರುವುದರಿಂದ ಗರ್ಭಿಣಿಯರು, ಅನಾರೋಗ್ಯದಿಂದ ಬಳಲುವವರು ಸರಿಯಾದ ಸಮಯಕ್ಕೆ ಆರೋಗ್ಯ ಕೇಂದ್ರಕ್ಕೆ ತಲುಪದೆ ಕೆಲ ಮಕ್ಕಳು, ಗರ್ಭಿಣಿಯರು ಸಾವನ್ನಪ್ಪಿರುವ ಹಲವಾರು ಘಟನೆಗಳು ನಡೆದಿದೆ. ಅಲ್ಲದೆ ಮಹದೆಶ್ವರ ಬೆಟ್ಟದಲ್ಲಿ ಈಗಿರುವಂತಹ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಲು ಹಲವು ಬಾರಿ ಮನವಿಯನ್ನು ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ತೊಳಸಿಕೆರೆ ಗ್ರಾಮದ ರೈತ ಮುಖಂಡ ಕೆಂಪಣ್ಣ ಮಾತನಾಡಿ, ಮಹದೇಶ್ವರ ಬೆಟ್ಟ ಗ್ರಾಮಪಂಚಾಯಿತಿಗೆ ಸಂಬಂಧಪಟ್ಟ ಕಾಡಂಚಿನಲ್ಲಿರುವ ಕುಗ್ರಾಮಗಳು ಇಂದಿಗೂ ತೀರಾ ಹಿಂದುಳಿದಿದ್ದು, ಅಭಿವೃದ್ಧಿಯ ಮುಖವನ್ನೇ ನೋಡಿಲ್ಲ. 15 ದಿನಗಳೊಳಗಾಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ದಿಪಡಿಸಿ ಸಂಚಾರವನ್ನು ಸುಗಮನ್ನಾಗಿಸಬೇಕು ಅಲ್ಲದೇ ಪ್ರತೀ ಹಳ್ಳಿಗೂ ವಿದ್ಯುತ್ ಪೂರೈಕೆಗಾಬೇಕು ಇಲ್ಲವಾದರೆ ಮುಂಬರುವ ಚುನಾವಣೆಯನ್ನು ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದರು.
ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ ಮಲೆ ಮಹದೆಶ್ವರ ವನ್ಯ ಜೀವಿ ವಲಯವನ್ನು ಹುಲಿ ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸಬಾರದು, ಕಾಡಂಚಿನಲ್ಲಿ ವಾಸಿಸುತ್ತಿರುವ ಜನರನ್ನು ಕಾಡು ಮಕ್ಕಳಾಗಿಯೇ ಬದುಕಲು ಅವಕಾಶವನ್ನು ಕಲ್ಪಿಸಬೇಕು ಇಲ್ಲವಾದರೆ ಮುಖ್ಯಮಂತ್ರಿಗಳು ಮಹದೆಶ್ವರ ಬೆಟ್ಟಕ್ಕೆ ಬರುವ ಸಂದರ್ಭದಲ್ಲಿ ಕಪ್ಪುಭಾವುಟವನ್ನು ಪ್ರದರ್ಶಿಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ವಿಶ್ವೇಶ್ವರಯ್ಯ ಮಾತನಾಡಿ ಆರು ತಿಂಗಳೊಳಗೆ ಸಮುದಾಯ ಆರೋಗ್ಯ ಕೇಂದ್ರದ ಸೇವೆ ಆರಂಭಿಸಲಾಗುವುದು. ಮಲೆ ಮಹದೇಶ್ವರ ಬೆಟ್ಟದಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಲು ಈಗಾಗಲೆ ಎಲ್ಲಾ ಸಿದ್ದತೆಗಳು ಮುಗಿದಿದ್ದು. ಪ್ರಾಧಿಕಾರದ ವತಿಯಿಂದ ಆಸ್ಪತ್ರೆ ನಿರ್ಮಾಣ ಮಾಡಲು 2 ಎಕರೆ ಜಾಗವನ್ನು ಗುರುತಿಸಲಾಗಿದೆ. 13 ಕೋಟಿ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರ ವನ್ನುನಿರ್ಮಾಣ ಮಾಡಲಾಗುತ್ತಿದ್ದು, 3 ತಿಂಗಳ ಒಳಗೆ ಅರ್ಧ ಕಾಮಗಾರಿ ಮುಗಿಯುತಿದ್ದಂತೆಯೇ ಆರೋಗ್ಯಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕಾರ್ಯ ನಿರ್ವಹಿಸಲು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಚಾಮುಂಡೇಶ್ವರಿ ವಿಧ್ಯುತ್ ಸರಬರಾಜು ನಿಗಮದ ಇ.ಇ ಪ್ರಕಾಶ್ ಕುಮಾರ್ ಮಾತನಾಡಿ ಅರಣ್ಯ ಇಲಾಖೆಯಿಂದ ಅನುಮತಿ ಕೊಟ್ಟರೆ ಸಾಂಪ್ರದಾಯಿಕವಾಗಿ ವಿದ್ಯುತ್ ಸಂಪರ್ಕ ನೀಡಲಾಗುವುದು. ಈಗಾಗಲೇ ಮೊದಲನೇ ಹಂತದ ಕಾಮಗಾರಿಗೆ ಸೆಪ್ಟಂಬರ್ ತಿಂಗಳಿನಲ್ಲಿ ಮೆಂದರೆ, ತೊಳಸಿಕೆರೆ, ಇಂಡಿಗನತ್ತ ಈ ಮೂರು ಗ್ರಾಮಗಳಿಗೆ ಅನುಮತಿಯನ್ನು ಕೋರಿ ಅರಣ್ಯ ಇಲಾಖೆಗೆ ಮನವಿಯನ್ನು ಮಾಡಿದ್ದೇವೆ. ನಮ್ಮ ಕಡೆಯಿಂದ ಯಾವುದೇ ರೀತಿಯಾದ ಲೋಪದೋಷಗಳು ಇಲ್ಲ ಎಂದು ಹೇಳಿದರು..