ಚಾಮರಾಜನಗರ: ಆಷಾಢದಲ್ಲಿ ನಡೆಯುವ ಐತಿಹಾಸಿಕ ಶ್ರೀ ಕೆಂಪನಜಾಂಬ ಸಮೇತ ಶ್ರೀ ಚಾಮರಾಜೇಶ್ವರಸ್ವಾಮಿ ರಥೋತ್ಸವವು ಐದು ವರ್ಷಗಳ ಬಳಿಕ ಸಾವಿರಾರು ಭಕ್ತರ ಹರ್ಷೋದ್ಘಾರಗಳ ನಡುವೆ ಬುಧವಾರ ಸಡಗರ ಸಂಭ್ರಮದಿಂದ ನಡೆಯಿತು.
ಕಳೆದ ಐದು ವರ್ಷಗಳ ಬಳಿಕ ನಡೆದ ರಥೋತ್ಸವಕ್ಕೆ ಭಕ್ತರು ಖುಷಿಯಿಂದಲೇ ಆಗಮಿಸಿ, ಸುಂದರ ಕ್ಷಣಗಳನ್ನು ಕಣ್ತುಂಬಿಸಿಕೊಂಡರಲ್ಲದೆ, ನವವಿವಾಹಿತರು ಹಣ್ಣು ಧವನ ಎಸೆದು ಹರಕೆ ತೀರಿಸಿಕೊಂಡರು,
ರಥೋತ್ಸವವು ಕೊನೆಯ ಬಾರಿಗೆ 2016ರಲ್ಲಿ ನಡೆದಿತ್ತು. 2017ರ ಫೆಬ್ರವರಿಯಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಬ್ರಹ್ಮರಥಕ್ಕೆ ಬೆಂಕಿ ಹಾಕಿದ್ದರಿಂದ ಅದು ಸುಟ್ಟು ಹೋಗಿತ್ತು. ಆ ಬಳಿಕ ರಥೋತ್ಸವ ಸ್ಥಗಿತಗೊಂಡಿತ್ತು. ಐದು ವರ್ಷಗಳ ಬಳಿಕ ಹೊಸ ರಥ ನಿರ್ಮಾಣವಾಗುವುದರೊಂದಿಗೆ ಮತ್ತೆ ರಥೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಯಿತು.
ಈ ಬಾರಿಯ ರಥೋತ್ಸವಕ್ಕೆ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದ್ದು ವಿಶೇಷವಾಗಿದೆ. ಬೆಳಿಗ್ಗೆ 11ರಿಂದ 11.30ರ ಕನ್ಯಾಲಗ್ನದಲ್ಲಿ ಚಿನ್ನಾಭರಣ ಅಲಂಕೃತ ಶ್ರೀ ಚಾಮರಾಜೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಯದುವೀರ್ ಅವರು ಉತ್ಸವ ಮೂರ್ತಿ, ರಥಕ್ಕೆ ಪೂಜೆ ಸಲ್ಲಿಸಿ, ತೆಂಗಿನಕಾಯಿಯನ್ನು ಹಿಡಿದು ಪ್ರಾರ್ಥನೆ ಸಲ್ಲಿಸಿ ಅರ್ಚಕರಿಗೆ ನೀಡಿದರು. ಆ ಬಳಿಕ ತೆಂಗಿನಕಾಯನ್ನು ಒಡೆದು ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಇದೇ ವೇಳೆ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಸಿ.ಎಸ್. ನಿರಂಜನ್ ಕುಮಾರ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಎಲ್ಲ ಕೋಮುಗಳ ಮುಖಂಡರು ರಥದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಚಾಮರಾಜೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ರಥ ಸಾಗುತ್ತಿದ್ದಂತೆಯೇ ದೇವಸ್ಥಾನದ ಆವರಣದಲ್ಲಿ ಕಿಕ್ಕಿರಿದು ಸೇರಿದ್ದ ಭಕ್ತರು ಹಣ್ಣು ಧವಸ, ನಾಣ್ಯವನ್ನು ಎಸೆದು ಹರ್ಷೋದ್ಘಾರ ಮಾಡಿದರೆ, ನೂರಾರು ಸಂಖ್ಯೆಯಲ್ಲಿ ನವ ದಂಪತಿಗಳು ನೆರೆದು ಹಣ್ಣು ಹೂವು ಎಸೆದು ತಮ್ಮ ಹರಕೆ ತೀರಿಸಿದರು.
ಶ್ರೀ ಚಾಮರಾಜೇಶ್ವರಸ್ವಾಮಿಯ ರಥದ ಮುಂಭಾಗದಲ್ಲಿ ಮಹಾರಾಜರ ಉತ್ಸವಮೂರ್ತಿ, ಗಣಪತಿ ದೇವರು ಚಿಕ್ಕ ರಥಗಳಲ್ಲಿ ಸಾಗಿದರೆ ಹಿಂಭಾಗದಲ್ಲಿ ಕೆಂಪನಂಜಾಂಬ–ಪಾರ್ವತಿ ದೇವರ ರಥ ಸಾಗಿತು. ರಥವು ದೇವಸ್ಥಾನದ ಮುಂಭಾಗದಿಂದ ದಕ್ಷಿಣಾಭಿಮುಖವಾಗಿ ರಥದ ಬೀದಿ, ಎಸ್ಬಿಎಂ ರಸ್ತೆ, ವೀರಭದ್ರೇಶ್ವರಸ್ವಾಮಿ ದೇವಾಲಯದ ವೃತ್ತ, ಮಾರಮ್ಮ ದೇವಸ್ಥಾನದ ರಸ್ತೆ, ಹಳೆ ತರಕಾರಿ ಮಾರುಕಟ್ಟೆ ರಸ್ತೆಯಲ್ಲಿ ಸಾಗಿ ಮತ್ತೆ ದೇವಸ್ಥಾನದ ಮುಂಭಾಗ ತಲುಪಿತು. ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದ ಮುಂಭಾಗದಿಂದ ಹೊರಟ ರಥ, ಮೂರು ಗಂಟೆ ಸುಮಾರಿಗೆ ಮೂಲ ಸ್ಥಾನ ತಲುಪಿತು.
ರಥೋತ್ಸವಕ್ಕೂ ಮೊದಲು ದೇವಾಲಯದ ಒಳಾಂಗಣದಲ್ಲಿ ಚಾಮರಾಜೇಶ್ವರಸ್ವಾಮಿ ಉತ್ಸವ ಮೂರ್ತಿ, ಕೆಂಪನಂಜಾಂಬಪಾರ್ವತಿ ದೇವರು ಹಾಗೂ ಮಹಾರಾಜರ ಉತ್ಸವಮೂರ್ತಿಗಳ ಉತ್ಸವನಡೆಯಿತು. ಭಕ್ತರು ಉತ್ಸವ ಮೂರ್ತಿಗಳನ್ನು ಹೊತ್ತುಕೊಂಡು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿದರು. ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರುವ ನಿರೀಕ್ಷೆ ಇದ್ದುದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಿತ್ತು. ಬಂದೋಬಸ್ತ್ ಗೆ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಹಾಗಿದ್ದರೂ, ರಥಕ್ಕೆ ಯದುವೀರ್ ಅವರು ಪೂಜೆ ಸಲ್ಲಿಸುವ ಸಂದರ್ಭದಲ್ಲಿ ತಳ್ಳಾಟ ಉಂಟಾಗಿದ್ದರಿಂದ ಪೊಲೀಸರು ಲಾಠಿಯನ್ನೂ ಬೀಸಿ ತಹಬದಿಗೆ ತಂದರು.
ರಥೋತ್ಸವದಲ್ಲಿ ಭಾಗವಹಿಸಿದ್ದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಮಾತನಾಡಿ ‘ಇದೇ ಮೊದಲ ಬಾರಿಗೆ ಈ ಉತ್ಸವಕ್ಕೆ ಬರುತ್ತಿದ್ದೇನೆ. ಈ ಹಿಂದೆ ಬರಬೇಕು ಎಂದುಕೊಂಡಿದ್ದರೂ ಬರುವುದಕ್ಕೆ ಆಗಿರಲಿಲ್ಲ. ಈಗ ಬಂದಿರುವುದು ಖುಷಿ ತಂದಿದೆ. ರಥ ನಿರ್ಮಾಣ ಆಗದೇ ಇದ್ದುದರಿಂದ ಹಾಗೂ ಕೋವಿಡ್ ಕಾರಣಕ್ಕೆ ಐದು ವರ್ಷಗಳಿಂದ ರಥೋತ್ಸವ ನಡೆದಿರಲಿಲ್ಲ. ಈಗ ರಥ ನಿರ್ಮಾಣವಾಗಿದೆ. ಸಾಂಕ್ರಾಮಿಕ ರೋಗ ಕಡಿಮೆಯಾಗಿದೆ. ಇನ್ನು ಮುಂದೆ ಪ್ರತಿ ವರ್ಷ ಉತ್ಸವ ನಡೆಯಲಿದೆ ಎಂದರು.