ಹನೂರು : ಬೇಡಗಂಪಣ ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ಹನೂರು ಬಿಜೆಪಿ ಮುಖಂಡ ಜನದ್ವನಿ ಬಿ ವೆಂಕಟೇಶ್ ಹಾಗೂ ಬೇಡಗಂಪಣ ಜನಾಂಗದ ಹಿತ ರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎಂ ಪುಟ್ಟಣ್ಣ ನೇತೃತ್ವದಲ್ಲಿ ಬುಡಕಟ್ಟು ವ್ಯವಹಾರಗಳ ಕೇಂದ್ರ ಸಚಿವ ಅರ್ಜುನ್ ಮುಂಡಾರವರನ್ನು ದೆಹಲಿಯ ಸಚಿವರ ಕಚೇರಿಯಲ್ಲಿ ಭೇಟಿಯಾಗಿ ಮನವಿ ಮಾಡಿದ್ದಾರೆ.
ಬೇಡಗಂಪಣ ಸಮುದಾಯವು ರಾಜ್ಯದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಮಾತ್ರ ಸುಮಾರು 18000 ಜನಸಂಖ್ಯೆ ಇದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ತುಂಬಾ ಹಿಂದುಳಿದಿದ್ದು ಬೆಟ್ಟ ಗುಡ್ಡಗಳ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅನೇಕ ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿ ಬದುಕು ನಡೆಸುತ್ತಿದ್ದೇವೆ.
ಇರುವ ಒಂದು, ಎರಡು ಎಕರೆ ಜಮೀನಿನಲ್ಲಿ ವ್ಯವಸಾಯ ಕೂಲಿ ಜೀವನ ಮಾಡಿಕೊಂಡು ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸಲಾಗುತ್ತಿದ್ದು ಆಡು, ಕುರಿ ಎಮ್ಮೆ, ದನ ಕಾಯುವುದು ಬುಟ್ಟಿ ತಯಾರಿ ಮಾಡುವುದು, ವಿಭೂತಿ ಮಾರಾಟ ಜೀವನದ ಮುಖ್ಯ ಕಸುಬುಗಳಾಗಿದ್ದರು, ಅರಣ್ಯ ಇಲಾಖೆಯ ಕಾನೂನುಗಳಿಂದಾಗಿ ಈ ಎಲ್ಲಾ ಕಸುಬುಗಳು ನಿಂತು ಹೋಗಿವೆ.
ನಮ್ಮಲ್ಲಿ ಈವರೆಗೆ ಐಎಎಸ್, ಐಪಿಎಸ್ ಗಳಂತ ಯಾವುದೇ ಉನ್ನತ ದರ್ಜೆಯ ನೌಕರಿ ಪಡೆದಿರುವವರು ಯಾರು ಇಲ್ಲ ರಾಜಕೀಯವಾಗಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಬಿಟ್ಟರೆ ಈವರೆಗೂ ಯಾರು ಉನ್ನತ ಮಟ್ಟಕ್ಕೆ ಹೋಗಿರುವುದಿಲ್ಲ ಈ ಪ್ರದೇಶದ ಮೂಲ ನಿವಾಸಿಗಳಿಗೆ ಸುಮಾರು 600 ವರ್ಷಗಳ ಇತಿಹಾಸವಿದೆ. ನಮ್ಮ ಪರಿಸ್ಥಿತಿಗಳನ್ನು ಅರಿತಿದ್ದ ಹಿಂದಿನ ರಾಜ ಮಹಾರಾಜರಾದ ವೀರ ಬಲ್ಲಾಳ ಹೈದರಾಲಿ ಇವರುಗಳು ಮೀಸಲಾತಿ ನೀಡಿ ಇವರು ಊಳುವ ಭೂಮಿಗೆ ತೆರಿಗೆ ಇಲ್ಲ ಎಂಬುದಾಗಿ ಮೀಸಲಾತಿ ನೀಡಿರುವ ತಾಮ್ರ ಶಾಸನಗಳು ಈಗಲೂ ಲಭ್ಯವಿದೆ.
2008ರಲ್ಲಿ ಬುಡಕಟ್ಟು ಅಧ್ಯಯನ ವಿಭಾಗ ಕನ್ನಡ ವಿಶ್ವವಿದ್ಯಾನಿಲಯ ವಿದ್ಯಾರಣ್ಯ ಹಂಪಿ ಇವರು ಬೇಡಗಂಪಣ ಜನಾಂಗದ ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನ ನಡೆಸಿ ಪುಸ್ತಕ ಬಿಡುಗಡೆ ಮಾಡಿ ವರದಿ ಸಲ್ಲಿಸಿದ್ದಾರೆ. 2016ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ರವರ ಆಯೋಗ ಅಧ್ಯಯನ ನಡೆಸಿ ನಮ್ಮ ಮನವಿಗೆ ಸ್ಪಂದಿಸಿ ಪ್ರವರ್ಗ ಒಂದರ ಜಾತಿ ಪಟ್ಟಿಯಲ್ಲಿ ಸೇರಿಸಲು ಸರ್ಕಾರಕ್ಕೆ ವರದಿ ಕಳುಹಿಸಿದ್ದಾರೆ ಆದರೂ ಯಾವುದೇ ಕ್ರಮವಾಗಿರುವುದಿಲ್ಲ ನಮ್ಮನ್ನು ಈವರೆಗೆ ಯಾವುದೇ ಜಾತಿ ಪಟ್ಟಿಯಲ್ಲಿ ಸೇರಿಸಿ ಇರುವುದಿಲ್ಲ, ನಾವು ಮೂಲತಹಃ ಬೇಡರಾಗಿರುವುದರಿಂದ ನಮ್ಮ ಸಾಮಾಜಿಕ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಪರಿಶಿಷ್ಟ ಪಂಗಡಕ್ಕೂ ಸೇರಿಸಲು ಮನವಿ ಮಾಡುತ್ತೇವೆ.
ನಾವು ಯಾವುದೇ ಜಾತಿ ಪಟ್ಟಿಯಲ್ಲಿ ಸೇರಿಲ್ಲದಿದ್ದರೂ ನಮಗೆ ಜಾತಿ ಪ್ರಮಾಣ ಪತ್ರವನ್ನು ಪ್ರವರ್ಗ ಮೂರು ಬಿ ವೀರಶೈವ ಲಿಂಗಾಯತ ಎಂದು ನೀಡುತ್ತಿದ್ದು ಇದು ಬಹಳ ಅನ್ಯಾಯವಾಗಿರುತ್ತದೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಕಳೆದರೂ ಅತ್ಯಂತ ಅಲ್ಪಸಂಖ್ಯಾತರು ಹಾಗೂ ಅತ್ಯಂತ ಹಿಂದುಳಿದವರು ಆದ ನಮ್ಮನ್ನು ಸರ್ಕಾರ ಈವರೆಗೂ ಗುರುತಿಸಿ ಯಾವುದೇ ಜಾತಿ ಪಟ್ಟಿಗೆ ಸೇರಿರುವುದಿಲ್ಲ ಅತ್ಯಂತ ಶೋಚನೀಯವಾಗಿದ್ದೇವೆ ಎಂದು ತಿಳಿಸಿದ್ದಾರೆ.
ಇವರ ಮನವಿಗೆ ಸ್ಪಂದಿಸಿದ ಬುಡಕಟ್ಟು ವ್ಯವಹಾರಗಳ ಕೇಂದ್ರ ಸಚಿವ ಅರ್ಜುನ್ ಮುಂಡರವರು ಪ್ರತಿಕ್ರಿಯಿಸಿ ಬೆಡಗಂಪನ ಸಮುದಾಯವನ್ನು ಎಸ್ ಟಿ ಗೆ ಸೇರಿಸಲು ನಾವು ರಾಜ್ಯಕ್ಕೆ ಶಿಫಾರಸ್ಸು ಮಾಡುತ್ತೇವೆ ಆದಷ್ಟು ಬೇಗ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದು ಎಸ್ ಟಿ ಗೆ ಸೇರಿಸಲು ಕ್ರಮ ವಹಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಎಂ.ಮುರುಗ, ಪ್ರಧಾನ ಕಾರ್ಯದರ್ಶಿ ಪಿ ಮಹದೇಶ್ ಸಹ ಕಾರ್ಯದರ್ಶಿ ಪಿ ನಾಗರಾಜು ಖಜಾಂಚಿ ಪಿ ಕುಮಾರ್ ನಿರ್ದೇಶಕರುಗಳಾದ ಮಹೇಶ್, ಶಿವಕುಮಾರ್ ಎಸ್, ಎಂ ಶಿವಕುಮಾರ್, ಎಂ ಬೊಮ್ಮರವರು ಹಾಜರಿದ್ದರು.