ಚಾಮರಾಜನಗರ: ಪ್ರಸ್ತುತ ದೇಶದ ಮಹಿಳೆಯರು ಅನುಭವಿಸುತ್ತಿರುವ ಹಕ್ಕು ಮತ್ತು ಅಧಿಕಾರಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಮೂಲ ಕಾರಣ ಎಂದು ಜೆಎಸ್ಎಸ್ ಮಹಿಳಾ ಕಾಲೇಜಿನ ಉಪನ್ಯಾಸಕಿ ಡಾ.ಎ.ಆರ್.ಸುಷ್ಮಾ ಅವರು ತಿಳಿಸಿದರು.
ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಬಲೀಕರಣ ಕಾರ್ಯಾಗಾರದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ದೇಶದಲ್ಲಿ ಬಾಲ್ಯವಿವಾಹ, ದೇವದಾಸಿ, ಸತಿಸಹಗಮನ ಪದ್ಧತಿ ಯಂತಹ ಅನಿಷ್ಟ ಪದ್ಧತಿಗಳು ತಾಂಡವವಾಡುತ್ತಿದ್ದ ಸಂದರ್ಭದಲ್ಲಿ, ಹೆಣ್ಣು ಮಕ್ಕಳು ದಿಟ್ಟತನದ ಹೋರಾಟ ಮಾಡಲು ಡಾ.ಬಿ.ಆರ್.ಅಂಬೇಡ್ಕರ್ ಮುಖ್ಯ ಕಾರಣರಾದರು. ಮಹಿಳೆಯರಿಗೆ ಮತದಾನ, ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಹಾಗೂ ಇನ್ನಿತರೆ
ಸಂವಿಧಾನಾತ್ಮಕವಾಗಿ ಹಲವು ಅವಕಾಶ ಮತ್ತು ಸ್ಥಾನಮಾನವನ್ನು ಕಲ್ಪಿಸಿಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವೆಂದು ತಿಳಿಸಿದರು.
ಮಹಿಳೆಯನ್ನು ಎರಡು ಭೂಮಿಯ ಭಾರವನ್ನು ಹೊರುವಂತಹ ತಾಳ್ಮೆಯನ್ನು ಹೊಂದಿರುವಂತವಳು ಎನ್ನುವುದುಂಟು. ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೋ ಅಲ್ಲಿ ದೇವರು ನೆಲೆಸುತ್ತಾನೆ. ಸಮಾಜದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಪುರುಷನಿಗೆ ಮಹಿಳೆ ಸರಿಸಮನಾಗಿದ್ದಾಳೆ. ಆ ಹೆಣ್ಣಿಗೆ ಸ್ವಾತಂತ್ರ್ಯ ಸಿಕ್ಕಿದೆಯೇ, ಶೋಷಣೆ ಮುಕ್ತವಾಗಿದ್ದಾಳೆಯೇ, ತನ್ನ ಹಕ್ಕುಗಳನ್ನು ಪಡೆದುಕೊಂಡಿದ್ದಾಳೆಯೇ ಎಂದು ಚಿಂತಿಸಲು ಇಂತಹ ಕಾರ್ಯಕ್ರಮಗಳು ಬಹುಮುಖ್ಯ. ಆಧುನಿಕ ಯುಗದಲ್ಲೂ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಪುರುಷರು ಸಂಸ್ಕೃತಿಯನ್ನು ರೂಪಿಸಿದರೆ, ಅದರ ರಕ್ಷಣೆ ಮಹಿಳೆಯಿಂದ ಮಾತ್ರ ಸಾಧ್ಯ. ಸರ್ಕಾರ ಹೆಣ್ಣು ಮಕ್ಕಳ ಉನ್ನತಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಸಹ ಅನೇಕ ಸಮಸ್ಯೆಗಳು ಅವರನ್ನು ಕಾಡುತ್ತಿದೆ. ಹೆಣ್ಣು ಮಕ್ಕಳನ್ನು ಹಡೆಯುವ ಯಂತ್ರವಲ್ಲ. ಮಹಿಳೆಯರ ಯೋಗಕ್ಷೇಮದ ಬಗ್ಗೆ ಅಂಬೇಡ್ಕರ್ ಅವರಿಗಿದ್ದ ದೃಷ್ಟಿಕೋನವನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಶಿಕ್ಷಕರಾದಂತಹ ನಾವು ಅಂಬೇಡ್ಕರ್, ರಮಾಬಾಯಿ, ಸಾವಿತ್ರಿ ಬಾಫುಲೆ ಅಂತವರನ್ನು ಸೃಷ್ಟಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇ ಗೌಡ ಮಾತನಾಡಿ ಹೆಣ್ಣು ಅಬಲೆಯಲ್ಲ ಸಬಲೆ ಎಂಬುದನ್ನು ಈ ಕಾರ್ಯಾಗಾರ ಪ್ರತಿಪಾದಿಸಿದೆ. ಎಲ್ಲಾ ರಂಗದಲ್ಲೂ ಮಹಿಳೆಯರು ಪ್ರಾತಿನಿಧ್ಯ ಗಳಿಸಿದ್ದಾರೆ. ಪುರುಷರಷ್ಟೇ ಮಹಿಳೆಯರು ಸಮಾನವಾಗಿ ಶಿಕ್ಷಕ ವೃತ್ತಿಯಲ್ಲದೇ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಶಿಕ್ಷಕರಿಗೆ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಓಓಡಿ ಒದಗಿಸಲಾಗಿದ್ದರೂ ನಿರೀಕ್ಷಿತ ಸಂಖ್ಯೆಯಲ್ಲಿ ಭಾಗವಹಿಸದೇ ಇರುವುದು ಬೇಸರ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಜೊತೆಗೂಡಿ ಭಾಗವಹಿಸಿ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಪೂವಿತಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್.ಮಾದಪ್ಪ, ತಾಲೂಕು ಅಧ್ಯಕ್ಷ ಲಾಲಿಂಗಸ್ವಾಮಿ, ಜಿಲ್ಲಾ ಖಜಾನಾಧಿಕಾರಿ ಸುಲೋಚನಾ, ಉಪನ್ಯಾಸಕಿ ಗೀತಾ, ಪ್ರಾ.ಶಿ.ಸಂಘದ ಪ್ರಧಾನ ಕಾರ್ಯದರ್ಶಿ ಮಹಾದೇವ ಸ್ವಾಮಿ, ಅಕ್ಷರ ದಾಸೋಹ ಅಧಿಕಾರಿ ವೆಂಕಟೇಶ್, ಮಹಾಂತೇಶ್, ಭರತ್ ಭೂಷಣ್, ನೇತ್ರಾವತಿ, ಎಂ.ಡಿ.ಮಹದೇವಯ್ಯ, ಎಸ್.ಸಿ.ರಾಜು, ಸವಿತಾ ರಾಣಿ, ಸಹ ಕಾರ್ಯದರ್ಶಿ ಸುಧಾ, ಮಹದೇವಸ್ವಾಮಿ, ನಟರಾಜ್, ಮುರುಗೇಶ್, ಕೆಂಪರಾಜು, ಸೋಮಶೇಖರ್, ಸುಶೀಲಾ, ರಾಮಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ 29 ಶಿಕ್ಷಕಿಯರು ಹಾಗೂ 5 ಜನ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.